ತುಮಕೂರು :

      ತುಮಕೂರಿನ ಸ್ಮಾರ್ಟ್‍ಸಿಟಿ ಯೋಜನೆಯಡಿ ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿಥ್ ಮಲ್ಟಿಲೆವೆಲ್ ಕಾರ್‍ಪಾರ್ಕಿಂಗ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಒಂದು ವರ್ಷದೊಳಗೆ ನಿರ್ಮಿಸುವಂತೆ ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ಅವರು ಸೂಚಿಸಿದರು.

      ಮಲ್ಟಿಯುಟಿಲಿಟಿ ಮಾಲ್ ನಿರ್ಮಾಣ ಸಂಬಂಧ ಇಂದು ವಿಧಾನಸೌಧದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಶ್ರೀ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳ ಪ್ರಸ್ತುತ ಎಪಿಎಂಸಿ ಸುಪರ್ಧಿಗೆ ಸೇರಿದೆ. ಆದರೂ ಈ ಸ್ಥಳ ತಕರಾರಿನಲ್ಲಿದ್ದು, ಅಗತ್ಯಬಿದ್ದರೆ ಸ್ಥಳವನ್ನು ಸಚಿವ ಸಂಪುಟದಲ್ಲಿ ಮುಂದಿಟ್ಟು ವಶಕ್ಕೆ ಪಡೆದು ಕೊಳ್ಳಲಾಗುವುದು ಎಂದರು.

      ಈ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಮಾಲ್ ಮೂರು ಅಂತಸ್ತಿನ ಕಟ್ಟಡವಾಗಿದೆ. ತಳಮಹಡಿಯಲ್ಲಿ 140 ಕಾರ್ ಗಳ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಈ ಮಾಲ್‍ನನ್ನು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

       ಜೊತೆಗೆ ತುಮಕೂರು ಸ್ಮಾರ್ಟ್‍ಸಿಟಿಯಡಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟ್‍ಗಳು ಶೀಘ್ರವೇ ಪೂರ್ಣಗೊಳಿಸಿ ಎಂದು ಅವರು ನಿರ್ದೇಶನ ನೀಡಿದರು. ಮುಂದಿನ ಆಗಸ್ಟ್ 15ರೊಳಗಾಗಿ ಸ್ಮಾರ್ಟ್ ರಸ್ತೆಗಳು ಸಂಪೂರ್ಣ ಸಿದ್ಧವಾಗಬೇಕು. ಸ್ಮಾರ್ಟ್ ಸಿಟಿ ಯೋಜನೆ ಘೋಷಣೆಯಾಗಿದ್ದರೂ ತುಮಕೂರಿನಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಎಲ್ಲ ಯೋಜನೆಗಳು ಪೂರ್ಣಗೊಳಿಸಲು ವರ್ಷಾನುಗಟ್ಟಲೆ ತೆಗೆದುಕೊಳ್ಳಬೇಡಿ. ಶೀಘ್ರವೇ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

      ಸಭೆಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಉಪಮುಖ್ಯಮಂತ್ರಿ ಗಳ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಭೂ ಬಾಲನ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 19 times, 1 visits today)