ಗುಬ್ಬಿ:

      ಅಪರೂಪದ ಬಾವಲಿ ಹಕ್ಕಿ ಸಂಕುಲ ಉಳಿಸಲು ಅವುಗಳ ವಾಸಸ್ಥಾನವಾದ ಎರಡು ಬೃಹತ್ ಮರಗಳನ್ನು ಕಡಿಯದಂತೆ ನ್ಯಾಯಾಲಯದ ಆದೇಶವಿದ್ದರೂ ಹಠಕ್ಕೆ ಬಿದ್ದಂತೆ ಹೆದ್ದಾರಿ ಪ್ರಾದಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮರ ಕಡಿಯುವ ಸಲುವಾಗಿ ಸರ್ವೆ ಮಾಡುವ ನೆಪದಲ್ಲಿ ಗ್ರಾಮಸ್ಥರಲ್ಲಿ ಗುಂಪು ಹುಟ್ಟುಹಾಕುತ್ತಿರುವ ಕಾರಣ ದಿಢೀರ್ ಪ್ರತಿಭಟನೆ ನಡೆಸಿ ಮರ ಕಡಿಯದಂತೆ ಒತ್ತಾಯಿಸಿದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಬಳಿ ನಡೆಯಿತು. ಹೆದ್ದಾರಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸೋಪನಹಳ್ಳಿ ಬಳಿಯ ಎರಡು ಬೃಹತ್ ಮರಗಳು ಸುಮಾರು ಐದು ಸಾವಿರ ಬಾವಲಿ ಹಕ್ಕಿಗಳ ವಾಸಸ್ಥಳವಾಗಿರುವ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಅರಣ್ಯ ಇಲಾಖೆಗೂ ಸಹ ಈ ಅಪರೂಪದ ಸಂಕುಲ ಉಳಿಸಲು ಮನವಿ ಮಾಡಿದ್ದ ಗ್ರಾಮಸ್ಥರು ಇಲ್ಲಿನ ಈ ಮರಗಳನ್ನು ಪೂಜೆ ಮಾಡುವ ತಮ್ಮ ಧಾರ್ಮಿಕ ಭಾವನೆಯನ್ನೂ ಸಹ ಹಂಚಿಕೊಂಡಿದ್ದರು. ಆ ಸಮಯದಲ್ಲಿ ಈ ಮರಗಳನ್ನು ಉಳಿಸುವ ಮಾತುಗಳಾಡಿದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಳೆದ ಆರು ತಿಂಗಳ ಹಿಂದೆ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಮುಂದಾದರು. ಅಂದಿನಿಂದ ವಿರೋಧವನ್ನೇ ಎದುರಿಸಿದ ಅಧಿಕಾರಿಗಳು ಕೆಲ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

       ಅರಣ್ಯ ಇಲಾಖೆ ಸಿಬ್ಬಂದಿ ಜಾಣ ಮೌನವಹಿಸಿರುವ ಕಾರಣ ರಸ್ತೆ ಗುತ್ತಿಗೆದಾರರು ಬಾವಲಿ ಹಕ್ಕಿಗಳ ಮಾರಣಹೋಮಕ್ಕೆ ಮುಂದಾಗಿದ್ದರು. ಆರು ತಿಂಗಳ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನಲೆ ತಡರಾತ್ರಿ ಸದ್ದಿಲ್ಲದೆ ಆಗಮಿಸಿ ಕ್ಷಣಾರ್ಧದಲ್ಲಿ ಮರದ ಒಂದು ಕೊಂಬೆ ಧರೆಗುರುಳಿಸಿದ್ದರು. ಅಲ್ಲಿದ್ದ ಸಾವಿರಾರು ಬಾವಲಿಗಳು ತಮ್ಮ ವಾಸಸ್ಥಾನಕ್ಕೆ ಚ್ಯುತಿ ಬಂದ ಕಾರಣ ದಿನವಿಡೀ ಆಕಾಶದಲ್ಲೇ ಹಾರಾಡಿ ಕರ್ಕಶವಾಗಿ ಕೂಗಿ ತಮ್ಮ ಆಕ್ರಂದನವನ್ನು ಅಲ್ಲಿಯೇ ಸುತ್ತಿ ಅಳಲು ತೋಡಿಕೊಂಡವು. ಅವುಗಳ ಅರಚಾಟಕ್ಕೆ ಕರಳು ಕಿತ್ತು ಬರುತ್ತಿತ್ತು ಎಂದು ಆಕ್ರೋಶ ಹೊರಹಾಕಿದ ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಹೆದ್ದಾರಿ ಅಧಿಕಾರಿಗಳು ಅಚಿದು ಮರಗಳಿಂದ ಹಕ್ಕಿ ಓಡಿಸಲು ಸಲ್ಲದ ನಾಟಕವಾಡಿದ್ದರು. ಹಕ್ಕಿಗಳು ಸ್ಥಳದಲ್ಲಿಲ್ಲ ಎಂದು ತೋರಲು ನಡೆಸಿದ ಹುನ್ನಾರ ಗ್ರಾಮಸ್ಥರ ಮುಂದೆ ನಡೆಯಲಿಲ್ಲ ಎಂದು ತಿಳಿಸಿದರು.

       ಮರಗಳೆರಡು ಕಡಿದೇ ತೀರುವ ಹಠಕ್ಕೆ ಬಿದ್ದ ಗುತ್ತಿಗೆದಾರರು ಅಧಿಕಾರಿಗಳ ಕುಮ್ಮಕ್ಕಿನಲ್ಲಿ ಈಗ ಮರಗಳ ಕಡಿಯಲು ಸಲ್ಲದ ಮತ್ತೊಂದು ನಾಟಕವಾಡಿದ್ದಾರೆ. ಸೋಪನಹಳ್ಳಿ ಗ್ರಾಮಸ್ಥರಲ್ಲೇ ಎರಡು ಗುಂಪು ಮಾಡಿ ಮರಗಳನ್ನು ಗ್ರಾಮಸüರಿಂದಲೇ ತಗೆಸಲು ಹೊಸ ಕುತಂತ್ರ ನಡೆಸಿದ್ದಾರೆ. ಹೆದ್ದಾರಿ ಮಧ್ಯೆ ಡಿವೇಡರ್ ರಚಿಸಿ ಈ ಮರಗಳನ್ನು ಉಳಿಸಲು ನ್ಯಾಯಾಲಯ ಸೂಚಿಸಿದ್ದರೂ ರಸ್ತೆ ಮತ್ತೇ ಅಗಲೀಕರಣ ಮಾಡುತ್ತೇವೆ ಎಂದು ಅಳತೆ ಮಾಡುವ ನೆಪದಲ್ಲಿ ಅಲ್ಲಿನ ಕೆಲ ರೈತರಲ್ಲಿ ಭಯ ಹುಟ್ಟಿಸಿದ್ದಾರೆ. ನಿಮ್ಮ ಜಮೀನು, ಮನೆಗಳು ಹೋಗುತ್ತವೆ ಎಂದು ಬೆದರಿಸಿ ಈ ಮರಗಳನ್ನು ಕಡಿಯಬೇಕು ಎಂದು ಗ್ರಾಮಸüರಿಂದಲೇ ಹೇಳಿಸುವ ಪ್ರಯತ್ನ ಮಾಡಿರುವ ಅಧಿಕಾರಿಗಳ ಜಾಣತನಕ್ಕೆ ಪ್ರಶಸ್ತಿ ನೀಡಬೇಕು ಎಂದು ಕುಟಿಕಿದ ಅವರು ಗ್ರಾಮಸ್ಥರಲ್ಲಿ ಒಡಕು ಮೂಡಿಸಿ ಗುಂಪು ಕಟ್ಟುವ ಕೆಲಸ ಬಿಟ್ಟು ಈ ಮರಗಳನ್ನು ಉಳಿಸಿ ಸಾವಿರಾರು ಬಾವಲಿ ಹಕ್ಕಿ ಸಂಕುಲ ಉಳಿಸಿ ಎಂದು ಮನವಿ ಮಾಡಿದರು.

      ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಾದ ಯಶಸ್ವಿನಿ ಮತ್ತು ಸಿದ್ದರಾಮಪ್ಪ ಪ್ರತಿಭಟನಾನಿರತರೊಂದಿಗೆ  ಚರ್ಚಿಸಿ ರಸ್ತೆ ಅಗಲೀಕರಣ ಬಗ್ಗೆ ಆಲೋಚಿಸಿ ಈ ಮರಗಳನ್ನು ಕಡಿಯಲು ಸೂಚಿಸಿಲ್ಲ. ಈ ಮರಗಳು ಹಾಗೇಯೇ ಉಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಧಾರ್ಮಿಕ ಭಾವನೆಯ ಈ ಮರಗಳನ್ನು ಕಡಿಯುವ ಚಿಂತನೆ ಮಾಡಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿ ಸದ್ಯಕ್ಕೆ ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ರೈತ ಸಂಘದ ಮಹದೇವಯ್ಯ ಇತರರು ಇದ್ದರು.

 

(Visited 10 times, 1 visits today)