ತುಮಕೂರು:

      ನಗರದ ಡಿವೈಎಸ್‍ಪಿ ಕಚೇರಿ ಬಳಿ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ಮತ್ತು ಪೊಲೀಸ್ ಠಾಣಾ ಸ್ವಚ್ಛತಗಾರರಿಗೆ ಆಹಾರ ಧಾನ್ಯ ಕಿಟ್ ಮತ್ತು ತರಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ ವಿತರಿಸಿದರು.

      ನಂತರ ಮಾತನಾಡಿದ ಅವರು, ಕೋವಿಡ್-19ರ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದರು.

      ವೈದ್ಯರು ಮತ್ತು ಪೊಲೀಸರಿಗೂ ಕೂಡ ತಪಾಸಣೆ ಮಾಡಬೇಕೆಂದು ಜಿಲ್ಲಾಡಳಿತ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮನೆಗೆ ಹೋಗುವಾಗ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

       ಅಲ್ಲದೇ ಮನೆಯವರಿಗೂ ಸಹ ಇದರ ಬಗ್ಗೆ ಅರಿವು ಮೂಡಿಸಬೇಕು. ವಯಸ್ಸಾದ ಹೋಂ ಗಾರ್ಡ್ ಸಿಬ್ಬಂದಿಗಳಿಗೆ ತಿಂಗಳಿಗೆ 2 ಬಾರಿ ತಪಾಸಣೆ ಮಾಡಲಾಗುವುದು. ಯಾವುದೇ ಸಮಸ್ಯೆಯಿದ್ದರೆ ಸಬ್‍ಇನ್ಸ್‍ಪೆಕ್ಟರ್‍ಗಳಿಗೆ ತಿಳಿಸಿ ಎಂದರು. ಲಾಕ್‍ಡೌನ್ ಮುಗಿದ ನಂತರವೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಕೆಲವು ನಿಯಮಗಳನ್ನು ಪಾಲಿಸಬೇಕು.

        ಈ ಸಂದರ್ಭದಲ್ಲಿ ಡಿವೈಎಸ್‍ಪಿ ತಿಪ್ಪೇಸ್ವಾಮಿ, ಸರ್ಕಲ್ ಇನ್ಸ್‍ಪೆಕ್ಟರ್ ನವೀನ್, ಸಬ್‍ಇನ್ಸ್‍ಪೆಕ್ಟರ್‍ಗಳಾದ ವಿಜಯಲಕ್ಷ್ಮಿ, ಮಂಗಳಮ್ಮ, ಗಂಗಮ್ಮ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 18 times, 1 visits today)