ತುಮಕೂರು:

      ಯುವ ಸಮೂಹ ದೇಶ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ದೇಶಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಶ್ಲಾಘನೀಯವಾದ ಕಾರ್ಯ ಎಂದು ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗಸ್ವಾಮೀಜಿ ತಿಳಿಸಿದರು.

     ನಗರದ ಬೀರೇಶ್ವರ ಕನ್ವೆಷನ್ ಹಾಲ್ ನಲ್ಲಿ ಆರ್.ಆರ್.ಅಭಿಮಾನಿ ಬಳಗದ ವತಿಯಿಂದ ಕೊರೋನಾ ಸಂಕಷ್ಟದಲ್ಲಿರುವವರಿಗೆ ಆಹಾರ ವಿತರಣಾ ಕಾರ್ಯವನ್ನು ವೀಕ್ಷಿಸಿ ಮಾತನಾಡಿದ ಅವರು, ಯುವ ಸಮೂಹ ಒಟ್ಟಾಗಿ ಸಂಕಷ್ಟದಲ್ಲಿ ಇರುವವರ ಸೇವೆಗೆ ತೊಡಗಿರುವುದು ಸಂತಸದ ವಿಚಾರ, ಇಂತಕ್ಕೆ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. 

       ದೇಶವಷ್ಟೇ ಅಲ್ಲದೇ ಪ್ರಪಂಚಾದ್ಯಂತ ಕೊರೋನಾ ವ್ಯಾದಿ ಹಬ್ಬಿದ್ದು, ಇದರಿಂದ ನಿಜವಾಗಿಯೂ ತೊಂದರೆಗೆ ಒಳಗಾಗಿರುವುದು ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಅವರ ಹೊಟ್ಟೆ ತುಂಬಿಸುವ ಕೆಲಸಕ್ಕೆ ರಾಜೇಂದ್ರ ಅವರ ನೇತೃತ್ವದಲ್ಲಿ ಯುವಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಾತ್ಮಗಾಂಧಿ ಅವರು ಹೇಳಿದಂತೆ ಯುವಕರು ಈ ದೇಶದ ಆಸ್ತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

      ಕೊರೋನಾ ವ್ಯಾದಿಯನ್ನು ದೂರ ಮಾಡುವ ನಿಟ್ಟಿನಲ್ಲಿ ಎಲ್ಲರೂ ಯೋಧರಂತೆ ಕಾರ್ಯ ನಿರ್ವಹಿಸಬೇಕಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೋನಾ ದೂರ ಮಾಡಬೇಕಿದೆ, ಲಾಕ್ ಡೌನ್ ಬಂದ ನಂತರ ದೇಶದಲ್ಲಿ ಅನೇಕ ನಿಯಮಗಳನ್ನು ಜಾರಿಗೊಳಿಸಿದ್ದರಿಂದಲೇ ದೇಶದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಎಂದರು.

          ಸಂಕಷ್ಟದ ಸಮಯದಲ್ಲಿ ಮಾನವೀಯತೆಯನ್ನು ತೋರುವುದು ಅವಶ್ಯಕವಾಗಿದ್ದು, ಗುಣಮಟ್ಟದ ಊಟವನ್ನು ಹಸಿವಿನಲ್ಲಿರುವವರಿಗೆ ನೀಡುವ ಮೂಲಕ ದಾಸೋಹವನ್ನು ನಡೆಸುತ್ತಿದ್ದಾರೆ, ಇದಕ್ಕೆ ಯಾವುದೇ ಬೇಧವಿಲ್ಲದೇ ಸಹಕಾರವನ್ನು ನೀಡಬೇಕು ಎಂದು ಹೇಳಿದರು.

      ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣವನ್ನು ಮಾಡಲು ಶುಚಿತ್ವ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ, ಭಾರತದಲ್ಲಿ ಇಷ್ಟು ಜನಸಂಖ್ಯೆ ಇದ್ದರು ವ್ಯಾದಿ ಹರಡದೇ ಇರುವುದರಿಂದ ಆದಷ್ಟು ಬೇಗ ಕೊರೋನಾ ದೂರವಾಗಲಿದ್ದು, ಇಂತಹ ಸಮಯದಲ್ಲಿ ಕೊರೋನಾ ವಾರಿಯರ್ಸ್ ಗಳ ಸೇವೆಯನ್ನು ಸ್ಮರಿಸಬೇಕು ಎಂದು ಹೇಳಿದರು.

       ಆರ್.ಆರ್.ಬಳಗ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಮಾ.26ರಿಂದ ಆರಂಭಗೊಂಡ ದಾಸೋಹ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠವೇ ಪ್ರೇರಣೆಯಾಗಿದ್ದು, ದಾಸೋಹ ಪ್ರಾರಂಭಕ್ಕೆ ಸಿದ್ಧಗಂಗಾ ಮಠದಿಂದ ಅಕ್ಕಿ ಕಳುಹಿಸಲಾಗಿತ್ತು, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ದಾಸೋಹ ನಡೆಯುತ್ತಿದೆ ಎಂದು ಆರ್.ರಾಜೇಂದ್ರ ತಿಳಿಸಿದರು.

      ಈ ದಾಸೋಹ ಕಾರ್ಯಕ್ಕೆ ಈಗ ಅನೇಕರು ಸಹಕಾರ ನೀಡುತ್ತಿದ್ದು, ಅನೇಕ ಮುಖಂಡರು ದಾನವನ್ನು ನೀಡುತ್ತಿದ್ದಾರೆ, ಬೀರೇಶ್ವರ ಕಲಗಯಾಣ ಮಂಟಪವನ್ನು ಉಚಿತವಾಗಿ ನೀಡಿದ್ದಾರೆ. ಅನೇಕ ಗೆಳೆಯರ ಸಹಕಾರದಿಂದ ಈ ದಾಸೋಹವನ್ನು ನಡೆಸುತ್ತಿದ್ದು, ಲಾಕ್ ಡೌನ್ ಮುಗಿಯುವವರೆಗೆ ಈ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿದರು.

      ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್, ಪ್ರಕಾಶ್, ಶಶಿಹುಲಿಕಲ್ ಮಠ್, ರಾಜೇಶ್ ದೊಡ್ಡಮನೆ, ಮೋಹನ್ ಸೇರಿ?ದದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಆರ್.ಆರ್.ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

(Visited 16 times, 1 visits today)