ಹುಳಿಯಾರು : 

      ಅತಿಥಿಗಳು ಮನೆಗೆ ಬಂದಾಗ ಜ್ಯೂಸ್, ಚಹ, ಹಣ್ಣು, ಹೂವು, ಸ್ನ್ಯಾಕ್ಸ್ ನೀಡುವುದು ಸಾಮಾನ್ಯ ಪದ್ಧತಿ. ಅದರಲ್ಲೂ ಸ್ವಾಮೀಜಿಗಳು ಬಂದರಂತೂ ಪಾದಪೂಜೆ ಮಾಡಿ ಡ್ರೈಪ್ರೂಟ್ಸ್, ಹಣ್ಣುಗಳನ್ನು ನೀಡುವುದು ವಾಡಿಕೆ. ಆದರೆ ಕೊರೊನಾದಿಂದಾಗಿ ಸತ್ಕಾರದ ಶೈಲಿ ಬದಲಾಗಿದ್ದು ಮಾಸ್ಕ್ ನೀಡುವ ಟ್ರೆಂಡ್ ಸೃಷ್ಠಿಯಾಗಿದೆ.

      ಹೌದು, ಹುಳಿಯಾರಿನ ಶ್ರೀಶಕ್ತಿ ಫರ್ನೀಚರ್ಸ್‍ನ ಮಾಲೀಕ ಎಚ್.ಎಸ್.ಪುಟ್ಟರಾಜು ಅವರು ಮಾಸ್ಕ್ ನೀಡುವ ಸಂಪ್ರದಾಯ ಆರಂಭಿಸಿದ್ದಾರೆ. ತಮ್ಮ ಅಂಗಡಿಗೆ ಬರುವ ಎಲ್ಲಾ ಸಾರ್ವಜನಿಕರಿಗೂ ಮಾಸ್ಕ್ ನೀಡಿ ಕಡ್ಡಾಯವಾಗಿ ಧರಿಸಿ ಕೊರೊನಾ ಓಡಿಸಿ ಎನ್ನುವ ಸಂದೇಶ ನೀಡುವ ಮೂಲಕ ಸುತ್ತಳ್ಳಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

       ಲಾಕ್‍ಡೌನ್ ತೆರವಾದ ದಿನದಿಂದಲೂ ಪುಟ್ಟರಾಜು ಅವರು ತಮ್ಮ ಅಂಗಡಿಗೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಜೊತೆಗೆ ಉಚಿತವಾಗಿ ಮಾಸ್ಕ್ ನೀಡುತ್ತಿದ್ದಾರೆ. ಇವರ ಮಾಸ್ಕ್ ಅಭಿಯಾನದಲ್ಲಿ ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಸಹ ಭಾಗಿಯಾಗಿದ್ದಾರೆ. ಪ್ರಯಾಣದ ಮರ್ಗ ಮದ್ಯೆ ಅಂಗಡಿಗೆ ಭೇಟಿ ನೀಡಿದ್ದ ಸ್ವಾಮೀಜಿಗೆ ಪುಟ್ಟರಾಜು ಅವರು ಫೇಸ್ ಶೀಲ್ಡ್ ಮಾಸ್ಕ್ ಹಾಕಿ ಆಶ್ಚರ್ಯಚಕಿತಗೊಳಿಸಿದ್ದಾರೆ. ಮಠ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಭಕ್ತರಿಗೆ ಆಶೀರ್ವದಿಸುವ ಸಂದರ್ಭದಲ್ಲಿ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಮಾಸ್ಕ್ ಧರಿಸಿದರೆ ಹೆಚ್ಚು ಸುರಕ್ಷಿತವೆಂದು ನೀಡುತ್ತಿರುವುದಾಗಿ ಕಾಳಜಿ ವ್ಯಕ್ತಪಡಿಸಿದ್ದಾರೆ.

      ಸ್ವಾಮೀಜಿ ಸಹ ಪುಟ್ಟರಾಜು ಅವರು ತಮ್ಮ ಆರೋಗ್ಯ ಬಗ್ಗೆ ತೋರಿದ ಕಳಕಳಿಗೆ ಭಾವಪರವಶರಾದರಲ್ಲದೆ ವ್ಯಾಪಾರ ದೃಷ್ಟಿಯಲ್ಲೇ ಗ್ರಾಹಕರನ್ನು ನೋಡುವ ವ್ಯಾಪಾರಸ್ಥರ ನಡುವೆ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ನಿಮ್ಮ ನಡೆ ಅಭಿನಂದನಾರ್ಹ ಎಂದಿದ್ದಾರೆ. ವೈಯಕ್ತಿಕವಾಗಿ ತಾವು ಕೈಕೊಂಡಿರುವ ಕೊರೊನಾ ಜಾಗೃತಿ ಅಭಿಯಾನ ಅನುಕರಣೀಯವಾಗಿದ್ದು ಜನರೂ ಸಹ ಕೊವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೊರೊನಾದಿಂದ ದೂರಾಗಲಿ ಎಂದು ಆಶಿಸಿದರು.

(Visited 26 times, 1 visits today)