ಕೊರಟಗೆರೆ : 

      ಕರುನಾಡಿನ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರವಾದ ಕೊರಟಗೆರೆ ಪಪಂಯ ಆಡಳಿತ ಚುಕ್ಕಾಣಿ ಜೆಡಿಎಸ್ ಪಕ್ಷದ ಪಾಲಾಗಿದೆ. ಗುರುವಾರ ನಿಗದಿಯಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲಿತ ಮಂಜುಳ ಅಧ್ಯಕ್ಷೆ ಮತ್ತು ಕೆ.ವಿ.ಭಾರತಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಘಟನೆ ನಡೆದಿದೆ.

      ಪಟ್ಟಣದ ಪಪಂಯ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ 8ನೇ ವಾರ್ಡಿನ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯೆ ಮಂಜುಳ ಸತ್ಯನಾರಾಯಣ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ 15ನೇ ವಾರ್ಡಿನ ಕೆ.ವಿ.ಭಾರತಿ ಸಿದ್ದಮಲ್ಲಪ್ಪ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಮಾತ್ರ ನಾಮಪತ್ರ ಸಲ್ಲಿಸಿರುವ ಪರಿಣಾಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

      ಕೊರಟಗೆರೆ ಪಟ್ಟಣ ಪಂಚಾಯಿತಿ ಪರಿಮಿತಿಯಲ್ಲಿ ಪ್ರಸ್ತುತ ಒಟ್ಟು 14ಜನ ಚುನಾಯಿತ ಸದಸ್ಯರಿದ್ದಾರೆ. ಅದರಲ್ಲಿ 8ಜನ ಜೆಡಿಎಸ್, 4ಜನ ಕಾಂಗ್ರೇಸ್, ಬಿಜೆಪಿ-1, ಪಕ್ಷೇತರ-1 ಸೇರಿದಂತೆ ಸಂಸದ ಮತ್ತು ಶಾಸಕರ ಮತವನ್ನು ಒಳಗೊಂಡಿದೆ. ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಯಾರು ನಾಮಪತ್ರ ಸಲ್ಲಿಸದಿರುವ ಪರಿಣಾಮ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ನಾಯಕತ್ವದಲ್ಲಿ ಪಪಂ ಗದ್ದುಗೆ ಜೆಡಿಎಸ್ ಪಾಲಾಗಿದೆ.

      ಚುನಾವಣೆಯ ವೇಳೆ ಪಪಂಯ ಜೆಡಿಎಸ್ ಬೆಂಬಲಿತ ಸದಸ್ಯರಾದ ಕಾವ್ಯಶ್ರೀ, ಹುಸ್ತಪಾರಿಯಾ, ಅನಿತಾ, ಮಂಜುಳ, ಲಕ್ಷ್ಮೀನಾರಾಯಣ, ಪುಟ್ಟನರಸಯ್ಯ, ಕೆ.ವಿ. ಭಾರತಿ, ಬಿಜೆಪಿಯ ಪ್ರದೀಪ್‍ಕುಮಾರ್ ಮತ್ತು ಪಕ್ಷೇತರ ಸದಸ್ಯ ನಟರಾಜು ಸೇರಿ 9ಜನ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನೂಳಿದಂತೆ ಜೆಡಿಎಸ್‍ನ ಭಾಗ್ಯಮ್ಮ ಮತ್ತು ಕಾಂಗ್ರೇಸ್‍ನ ಓಬಳರಾಜು, ಬಲರಾಮಯ್ಯ, ನಾಗರಾಜು, ಹೇಮಾಲತಾ ಗೈರಾಗಿದ್ದಾರೆ.

      ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ಕೊರಟಗೆರೆ ಪಟ್ಟಣದ ಜನತೆಯ ಆರ್ಶಿವಾದ ಮತ್ತು ಬೆಂಬಲದಿಂದ ಪಪಂಯ ಆಡಳಿತ ಜೆಡಿಎಸ್ ಪಕ್ಷಕ್ಕೆ ಲಭಿಸಿದೆ. ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ ಬಿಜೆಪಿಯ ಸದಸ್ಯ ಪ್ರದೀಪ್ ಮತ್ತು ಪಕ್ಷೇತರ ನಟರಾಜ್‍ಗೆ ತುಂಬು ಹೃದಯದ  ಧನ್ಯವಾದ. ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಪಂಯ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಸದಸ್ಯರ ನೇತೃತ್ವದ ತಂಡ ಹಗಲು ರಾತ್ರಿ ಕೆಲಸ ಮಾಡಲಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು.

ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಶಿವರಾಮಯ್ಯ, ಮುಖಂಡರಾದ ವೀರಕ್ಯಾತರಾಯ, ಆನಂದ್, ನರಸಿಂಹರಾಜು, ಕಲೀವುಳ್ಳ, ರಮೇಶ್, ಕುದುರೆ ಸತೀಶ್, ಸಿದ್ದಮಲ್ಲಪ್ಪ, ಪ್ರಹ್ಮಾನಾದ, ಸೈಯದ್‍ಸೈಪುಲ್ಲಾ, ರಾಜಣ್ಣ, ಲಕ್ಷ್ಮೀಶ, ಲಕ್ಷ್ಣಣ್ ಸೇರಿದಂತೆ ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು.

(Visited 22 times, 1 visits today)