ಶಿರಾ:

     ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನಸೆಳೆಯುತ್ತಿರೋ ತುಮಕೂರಿನ ಶಿರಾ ಕ್ಷೇತ್ರ ಮತ್ತಷ್ಟು ರಂಗೇರಿದೆ. ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಪಕ್ಷ ಈ ಬಾರಿಯ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದಂತಿದೆ. ಶಿರಾ ಕ್ಷೇತ್ರವನ್ನ ತಮ್ಮದಾಗಿಸಿಕೊಳ್ಳಲು ಪಣತಟ್ಟಿರೋ ಮೂರು ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ.

      ಶಿರಾಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಶಿರಾ ಪಟ್ಟಣದ ದೇವಮೂಲೆಯಲ್ಲಿರೋ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರೋದ್ರಿಂದ ಈ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಉಪಚುನಾವಣೆಗೆ ಬಿಜೆಪಿ ಸಜ್ಜಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಶಿರಾದಲ್ಲೂ ಖಾತೆ ತೆರೆಯಲ್ಲಿದ್ದು, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದಿಲ್ಲ ಎಂದು ವಿರೋಧ ಪಕ್ಷ ಬೊಬ್ಬೆ ಹೊಡೆದಿದ್ರು, ನಮ್ಮನ್ನ ಲೆಕ್ಕಕೆ ತೆಗೆದುಕೊಂಡಿರಲಿಲ್ಲ. ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ವಿ. ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇವೆ. ಅದೇ ರೀತಿ ಶಿರಾದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಸದ್ದಿಲ್ಲದೇ ಮತಬೇಟೆ ಶುರುಮಾಡಿರೋ ಉಭಯ ಪಕ್ಷಗಳು ತಮ್ಮದೇ ಕಾರ್ಯತಂತ್ರ ರೂಪಿಸುತ್ತಿವೆ. ಈ ನಡುವೆ ಶಿರಾದಲ್ಲಿ ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಪಕ್ಷ ಕೆ.ಆರ್.ಪೇಟೆ ಮಾದರಿಯಲ್ಲಿ ಉಪಚುನಾವಣೆ ಎದುರಿಸಲು ಸಜ್ಜಾಗಿದ್ದು ಫೀಲ್ಡಿಗಿಳಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಶಿರಾದಲ್ಲಿ ಕಮಲ ಅರಳಿಸೋ ಪಣತೊಟ್ಟಿದ್ದಾರೆ.

      ಈ ನಡುವೆ ಇನ್ನೂ ಉಪಚುನಾವಣೆಯಲ್ಲಿ ಶಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸೋ ವಿಚಾರ ಮುನ್ನೆಲೆಗೆ ಬಂದಿದ್ದು, ಈ ಹಿಂದೆ ಮದಲೂರು ಕೆರೆಗೆ ಹೇಮಾವತಿ ಹರಿಸಬಾರದು ಅಂತಾ ಪತ್ರ ಬರೆದಿದ್ದ ಬಿಜೆಪಿ ಶಾಸಕರ ಪತ್ರ ಇದೀಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಸುರೇಶ್ ಗೌಡ, ಹೇಮಾವತಿ ನಾಲೆ ವ್ಯಾಪ್ತಿಯ ನಿಗದಿಪಡಿಸಿದ್ದ ಕೆರೆಗಳಿಗೆ ನೀರು ಹರಿಸಿ ಬಳಿಕ ಬೇರೆ ಕೆರೆಗಳಿಗೆ ಹರಿಸಿ ಎಂದು ಪತ್ರ ಬರೆದಿದ್ದೇವೆಯೇ ಹೊರತು ಮದಲೂರು ಕೆರೆಗೆ ನೀರು ಹರಿಸಬೇಡಿ ಎಂದು ನಾವು ಪತ್ರ ಬರೆದಿಲ್ಲ ಅಂತಾ ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ.

      ಇನ್ನೂ ಅಭ್ಯರ್ಥಿಯನ್ನ ಫೈನಲ್ ಮಾಡದ ಬಿಜೆಪಿ, ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಕಾರ್ಯ ನಡೆಸುತ್ತಿದೆ. ತಮ್ಮದೇ ಪಕ್ಷದ ಶಾಸಕರನ್ನ ಕಳೆದುಕೊಂಡು, ಸಿಂಪತಿ ಗಿಟ್ಟಿಸಿಕೊಂಡಿರೋ ಜೆಡಿಎಸ್ ಹಾಗೂ ಮಾಜಿ ಸಚಿವ, ಹಿರಿಯ ನಾಯಕ ಟಿ.ಬಿ.ಜಯಚಂದ್ರ ಅವರ ವರ್ಚಸ್ಸು, ಈ ನಡುವೇ ಆಡಳಿತ ಪಕ್ಷ ಬಿಜೆಪಿ, ಮೂರು ಪಕ್ಷಗಳು ತಮ್ಮದೇ ಕಾರ್ಯತಂತ್ರದ ಮೂಲಕ ಮತಬೇಟೆಗೆ ಮುಂದಾಗಿದ್ದು, ಯಾರ ಸ್ರ್ಟಾಟಜಿ ವರ್ಕ್ ಆಗುತ್ತೆ ಅನ್ನೋದನ್ನ ಮಾತ್ರ ಕಾದು ನೋಡಬೇಕಿದೆ.

(Visited 12 times, 1 visits today)