ತುಮಕೂರು


ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಮತ್ತು ಜವಾಬ್ದಾರಿಯಾಗಿದ್ದು, ಎಲ್ಲರೂ ತಪ್ಪದೇ ತಮ್ಮ ಜವಾಬ್ದಾರಿಯನ್ನು ಮತದಾನ ಮಾಡುವ ಮೂಲಕ ಚಲಾಯಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿದ್ಯಾಕುಮಾರಿ ಅವರು ತಿಳಿಸಿದರು.
ತುಮಕೂರು ನಗರದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವಿಪ್ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು(ದ) ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು, ತಪ್ಪದೇ ಮತಚಲಾಯಿಸಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿರುವ ನಾವು ದೇಶವನ್ನು ಉಳಿಸಿ, ಬೆಳೆಸಬೇಕಿದೆ. ನಮ್ಮ ಹಿರಿಯ ಹೋರಾಟಗಾರರ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ದೊರೆತು 75 ವರ್ಷವಗಳಾಗಿದೆ. ಹಾಗಾಗಿ ಪ್ರತಿಯೊಬ್ಬ ನಾಗರೀಕನೂ ಸಂವಿಧಾನದತ್ತವಾಗಿ ನಮಗೆ ನೀಡಿರುವ ಮತದಾನ ಮಾಡುವ ಹಕ್ಕನ್ನು ಚಲಾಯಿಸಬೇಕು. ಈ ನಿಟ್ಟಿನಲ್ಲಿ ಯುವ ಜನತೆ ತಪ್ಪದೇ ಮತದಾನ ಮಾಡಬೇಕು. ಅಲ್ಲದೆ ತಮ್ಮ ಸುತ್ತಮುತ್ತಲಿನ ಸಾರ್ವಜನಿಕರಿಗೂ ಮತದಾನದ ಕುರಿತು ಅರಿವು ಮೂಡಿಸುವಂತೆ ಕರೆ ನೀಡಿದರು.
ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಪ್ರಶಸ್ತಿ ಅಲ್ಲ. ಇಂದಿನ ಈ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ತಾಲ್ಲೂಕುಗಳಿಂದ ಹತ್ತಾರು ಮಕ್ಕಳು ಭಾಗವಹಿಸಿರುವುದು ಹೆಮ್ಮೆಯ ಸಂಗತಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಕಲಿಕೆ ಹಾಗೂ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಾರ್ಜಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ಅವರು, ಉತ್ತಮ ಪ್ರಜೆಗಳು ನಿರ್ಮಾಣವಾಗುವುದು ನಾಲ್ಕು ಗೋಡೆಯ ಮಧ್ಯೆ ಕಲಿಯುವ ಶಾಲೆಗಳಲ್ಲಿ ಎಂಬ ಡಾ. ಅಬ್ದುಲ್ ಕಲಾಂ ರವರ ಮಾತುಗಳನ್ನು ಸ್ಮರಿಸುತ್ತಾ, ಮತದಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಜಾಗೃತಿ ಹಾಗೂ ವಿವೇಚನೆಯಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ರೀಟಾ ಲಾರೆನ್ಸ್, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿಯ ಸಹಾಯಕ ನೋಡಲ್ ಅಧಿಕಾರಿ ಜಿ.ಆರ್.ಶ್ರೀನಿವಾಸ್, ವಿಷಯ ಪರಿವೀಕ್ಷಕರುಗಳಾದ ಸುನೀಲ್ ಕುಮಾರ್, ರವೀಶ್, ಹಾಗೂ ಶಿಕ್ಷಣ
ಸಂಯೋಜಕರಾದ ಚಂದ್ರಣ್ಣ, ತಾರಾಮಣಿ, ಐಇಸಿ ಸಂಯೋಜಕ ಟಿ.ಕೆ.ವಿನುತ್, ಮತ್ತಿತರರು ಹಾಜರಿದ್ದರು.

(Visited 1 times, 1 visits today)