ತುಮಕೂರು


ಬಿಜೆಪಿಯು ಪ್ರಪಂಚದಲ್ಲೇ ಅತಿಹೆಚ್ಚು ಸದಸ್ಯರನ್ನು ಹೊಂದಿದ ರಾಜಕೀಯ ಪಕ್ಷವಾಗಿದ್ದು, ಭಾರತದ ಸರ್ವ ಜನರಲ್ಲಿ ಹಿತಾಶಕ್ತಿ, ರಾಷ್ಟ್ರಭಕ್ತಿ-ರಾಷ್ಟ್ರಪ್ರೇಮ ಮೂಡಿಸಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೇಳಿದರು.
ಇವರು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿಯ 43ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 1980 ಏಪ್ರಿಲ್ 06ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಸಂಘದ ಅಂದಿನ ಪ್ರಮುಖರಾದ ಅಟಲ್‍ಬಿಹಾರಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾನಿರವರ ನೇತೃತ್ವದಲ್ಲಿ ಆರಂಭಗೊಂಡು ಇಂದು ದೇಶ, ವಿದೇಶಗಳಲ್ಲಿ ಅತಿಹೆಚ್ಚು ಜನಮನ್ನಣೆ ಪಡೆದ ಪಕ್ಷವಾಗಿದೆ. ಕಾಂಗ್ರೆಸ್ ಹೇರಿದ ತುರ್ತುಪರಿಸ್ಥಿತಿ ವಿರುದ್ಧ ಒಂದಾದ ಪ್ರತಿಪಕ್ಷಗಳು ಜನತಾ ಪಕ್ಷದೊಂದಿಗೆ ಅಂದಿನ ಜನಸಂಘ ವಿಲೀನಗೊಂಡಿತ್ತು. ಜನತಾ ಪಕ್ಷದ ಆಂತರಿಕ ದ್ವಿಸದಸ್ಯತ್ವದ ಪ್ರಶ್ನೆಯಿಂದ ಹೊರಬಂದ ಜನಸಂಘದ ಪ್ರಮುಖರು, ಕಾರ್ಯಕರ್ತರು ಭಾರತೀಯ ಜನತಾ ಪಕ್ಷವು ದೇಶದ ಸಮಗ್ರ ವಿಕಾಸ-ಅಭಿವೃದ್ಧಿ ದೃಷ್ಠಿಯಿಂದ ಆರಂಭಗೊಂಡಿತು ಎಂದರು.
ಜನಸಂಘ, ಬಿಜೆಪಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ಆಧಾರಸ್ತಂಭವಾಗಿದ್ದ ಹಿರಿಯ ಚೇತನಗಳಿಗೆ ಕೃತಜ್ಞತೆ ಸಲ್ಲಿಸಿದ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಇಂದು ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಬಿಜೆಪಿ ಪ್ರಕಾಶಿಸುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಷಾರವರ ಮಾರ್ಗದರ್ಶನದಲ್ಲಿ ರಾಜ್ಯದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿಯ ಶಕೆಯೇ ಆರಂಭಗೊಂಡಿದೆ ಎಂದು ವಿವರಿಸಿದರು.
ಬಲಿಷ್ಠ, ಸಧೃಡ ಭಾರತ ನಿರ್ಮಾಣ : ನಂದಗಿರೀಶ್
ಜನಸಂಘದ ಹಾದಿಯು ಕಷ್ಟ, ದುರ್ಗಮ ಹಂತ, ತ್ಯಾಗ, ಬಲಿದಾನ ಹಾಗೂ ಪರಿಶ್ರಮದಿಂದ ಬೆಳೆಯಿತು. ಬಿಜೆಪಿ ಆರಂಭಗೊಂಡ ನಂತರ ದೇಶ ಸಮಗ್ರ ಅಭಿವೃದ್ಧಿಯ ಬುನಾದಿ ಹಾದಿಯಲ್ಲಿ ಸಾಗಿ, ಇಂದು ಸರ್ವ ಜನರು ಮೆಚ್ಚಿದ ಮತ್ತು ಪ್ರಶಂಶಿಸುತ್ತಿರುವ ರಾಜಕೀಯ
ಪಕ್ಷಗಳಲ್ಲಿ ಬಿಜೆಪಿ ಅಗ್ರಗಣ್ಯವಾಗಿ 5 ತಲೆಮಾರಿನವರ ಪರಿಶ್ರಮದಿಂದ ಬೃಹದಾಕಾರವಾಗಿ ಬೆಳೆದಿದೆ. ಬಲಿಷ್ಟ ಹಾಗೂ ಸಧೃಡ ಭಾರತ ನಿರ್ಮಾಣಕ್ಕೆ ಬಿಜೆಪಿ ಕಟಿಬದ್ಧವಾಗಿ ಎಲ್ಲಾ ವರ್ಗ, ಸಮುದಾಯದವರ ಮೆಚ್ಚುಗೆಗೆ ಪಾತ್ರವಾಗಿ, ದೇಶ-ರಾಜ್ಯಗಳನ್ನು ಅಭಿವೃದ್ಧಿಯ ವಿಕಾಸದೆಡೆಗೆ ಕೊಂಡ್ಯೊಯುತ್ತಿದೆ ಎಂದು ತುಮಕೂರು ನಗರ ಮಂಡಲ ವಿಸ್ತಾರಕ ನಂದಗಿರೀಶ್ ಸವಿಸ್ತಾರವಾಗಿ ಬಿಜೆಪಿಯ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಸರ್ಕಾರಗಳ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಮೆಚ್ಚಿದ ಮತದಾರರು ಇಂದು ಗ್ರಾಮ ಪಂಚಾಯಿತಿಯಿಂದ ಸಂಸತ್‍ನವರೆಗೆ ಅತಿಹೆಚ್ಚು ಚುನಾಯಿತ ಪ್ರತಿನಿಧಿಗಳನ್ನು ಪಡೆದಿರುವ ಪಕ್ಷವಾಗಿ ಬೃಹತ್ ಮಟ್ಟದಲ್ಲಿ ಬೆಳೆಸಿ, ಆಶೀರ್ವಾದಿಸಿದ್ದಾರೆ ಎಂದರು.
ಸಮಾರಂಭದ ವೇದಿಕೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ಶಾಸಕ ಜಿ.ಬಿ ಜ್ಯೋತಿಗಣೇಶ್, ವಿಧಾನಪರಿಷತ್ ಮಾಜಿ ಸದಸ್ಯ ಡಾ|| ಎಂ.ಆರ್.ಹುಲಿನಾಯ್ಕರ್, ತುಮಕೂರು ವಕೀಲ ಸಂಘದ ಅಧ್ಯಕ್ಷ ಬಿ.ಡಿ.ಗೋಪಾಲಕೃಷ್ಣ ಉಪಸ್ಥಿತರಿದ್ದರು.

(Visited 5 times, 1 visits today)