ತುಮಕೂರು :

      ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ರುದ್ರ ನರ್ತನ ಮಾಡುತ್ತಿದ್ದು, ಶಿರಾ, ಮಧುಗಿರಿ,ಪಾವಗಡ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ಸೇರಿದಂತೆ ಎಲ್ಲೆಡೆ ಕೊರೊನಾ ಸೋಂಕು ರೌದ್ರ ನರ್ತನ ಮಾಡುತ್ತಿದೆ.

     ಗ್ರಾಮೀಣ ಪ್ರದೇಶದ ಜನತೆಯನ್ನ ಬಿಟ್ಟು ಬಿಡದಂತೆ ಕಾಡುತ್ತಿರುವ ಕೊರೊನಾ ಸೋಂಕು ಯಾವುದೇ ರೀತಿಯಲ್ಲಿ ಯಾರಿಂದ ಯಾರಿಗೆ ಸುಳಿವು ನೀಡದೇ ಎಲ್ಲರಲ್ಲೂ ಆವರಿಸುತ್ತಿದೆ.

ತಾಲ್ಲೂಕುವಾರು ಸೋಂಕಿತರ ವಿವರ :

ಶಿರಾ-3

ತುಮಕೂರು-4

ತಿಪಟೂರು-1

ಚಿಕ್ಕನಾಯಕನಹಳ್ಳಿ-1

ಪಾವಗಡ-4

ಗುಬ್ಬಿ-1

ಮಧುಗಿರಿ-1

       ಸಮುದಾಯ ಮಟ್ಟದಲ್ಲಿ ಹಬ್ಬುತ್ತಿರುವ ಸೋಂಕು ಎಲ್ಲಿ ಇಡೀ ಜಿಲ್ಲೆಯನ್ನೇ ಆಹುತಿ ಪಡೆದುಕೊಳ್ಳುತ್ತದೆಯೋ ಎಂಬ ಭಯದ ವಾತಾವರಣ ಜಿಲ್ಲೆಯ ಜನರಲ್ಲಿ ಕಾಡುತ್ತಿದ್ದು, ಗ್ರಾಮೀಣ ಜನತೆ ನೆಮ್ಮದಿಯ ಜೀವನ ಸಾಗಿಸುವುದು ದುಸ್ಸಾಹಸವಾಗಿದೆ.

     ಲಾಕ್‍ಡೌನ್ ಸಡಿಲಿಕೆಯ ನಂತರ ಎಲ್ಲರೂ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದು, ಯಾರಿಗೆ ಯಾರಿಂದ ಸೋಂಕು ಹರಡುತ್ತಿದೆ ಎಂಬ ಅರಿವಿಲ್ಲ.

      ಕೊರೊನಾದ ಕಬಂದ ಬಾಹುಗಳು ಸಿಕ್ಕಸಿಕ್ಕವರನ್ನು ಅಪ್ಪಿಕೊಳ್ಳುತ್ತಿದೆ. ಮಾರ್ಚ್ ತಿಂಗಳಿಂದ ಕೋವಿಡ್-19 ಕಾರ್ಯದಲ್ಲಿ ಮಗ್ನರಾಗಿದ್ದ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಹಗಲಿರುಳೆನ್ನದೇ ಶ್ರಮಿಸಿ ಹೈರಾಣಾಗಿದ್ದಾರೆ.

     ಇತ್ತೀಚೆಗೆ ಕೊರೊನಾ ಬಗೆಗಿನ ಭಯ ಸಾರ್ವಜನಿಕವಾಗಿ ಕಡಿಮೆಯಾಗುತ್ತಿದ್ದು ಅದು ಸಮುದಾಯ ಮಟ್ಟದಲ್ಲಿ ಹಬ್ಬಲು ಬಹುಮುಖ್ಯ ಕಾರಣವೆಂದು ಹೇಳಲಾಗುತ್ತಿದೆಯಾದರೂ ಜಿಲ್ಲೆಯಲ್ಲಿ ಇಂದು ಬಂದಿರುವ 15 ಪಾಸಿಟೀವ್ ಪ್ರಕರಣವನ್ನ ಒಮ್ಮೆ ಅವಲೋಕಿಸಿದರೆ, ಜಿಲ್ಲೆಯ ಜನರ ಮುಂದಿನ ಸ್ಥಿತಿ ಭೀಬತ್ಸವಾಗಬಹುದೆಂಬ ಆತಂಕ ಇದೆ.

(Visited 2,965 times, 1 visits today)