ಮಧುಗಿರಿ:

      ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತಕ್ಕೆ ಮಧುಗಿರಿಯ ಕಾಂಗ್ರೆಸ್ಸಿನ ಮುಖಂಡರಾಗಿರುವ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಬಾರಿಗೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಪ್ರವೇಶ ಪಡೆದಿದ್ದಾರೆ.

      ಬಿ.ನಾಗೇಶ್ ಬಾಬು ತುಮುಲ್ ಗೆ ಮೂರು ಬಾರಿ ನಿರ್ದೇಶಕರಾಗಿ ಚುನಾಯಿತರಾಗಿ ಒಂದು ಬಾರಿ ಅಧ್ಯಕ್ಷರೂ ಸಹ ಆಗಿದ್ದರು. ಕೆ.ಎಂ.ಎಫ್ ನಿರ್ದೇಶಕರಾಗಿದ್ದರು. ಈ ಹಿಂದೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎರಡು ಬಾರಿ ಸ್ಪರ್ದಿಸಿ ಸೋತಿದ್ದರು. ಬಿ.ನಾಗೇಶ್ ಬಾಬು ಆಯ್ಕೆಯಾಗಿರುವ ಕ್ಷೇತ್ರದಿಂದ ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊಂಡವಾಡಿ ಚಂದ್ರಶೇಖರ್ ಆಯ್ಕೆಯಾಗಿ ಉಪಾಧ್ಯಕ್ಷರೂ ಸಹ ಆಗಿದ್ದರು ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಿ.ನಾಗೇಶ್ ಬಾಬು ಜೆ.ಡಿಎಸ್ ತೊರೆದು ಕೆ.ಎನ್ ರಾಜಣ್ಣನವರ ನಾಯಕತ್ವದಡಿ ಕಾಂಗ್ರೆಸ್ ಸೇರಿದ ನಂತರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂಚಿಟಿಗ ಜನಾಂಗದ ಅಭ್ಯರ್ಥಿಗಳೇ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ.

     ಅಭಿನಂದನೆ: ಮಾಜಿ ಶಾಸಕ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎನ್ ರಾಜಣ್ಣರವರನ್ನು ಅವರ ಸ್ವಗೃಹದಲ್ಲಿ ಬಿ.ನಾಗೇಶ್ ಬಾಬು ರವರು ಅಭಿನಂದಿಸಿದರು. ಈ ವೇಳೆ ಹಿರಿಯ ಮುಖಂಡ ಬಿ.ವಿ ನಾಗರಾಜು , ಮರುವೇಕೆರೆ ವಿಎಸ್‍ಎಸ್‍ಎನ್ ಅಧ್ಯಕ್ಷ ಫಾಜಿಲ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ್, ಗುತ್ತಿಗೆದಾರ ಡಿ.ಹೆಚ್.ನಾಗರಾಜು, ಪುರಸಭಾ ಚುನಾಯಿತಾ ಸದಸ್ಯರಾದ ತಿಮ್ಮರಾಜು, ಲಾಲಾಪೇಟೆ ಮಂಜುನಾಥ್, ಕುಂಚಿಟಿಗ ಸಂಘದ ನಿರ್ದೇಶಕ ಬಂದ್ರೇಹಳ್ಳಿ ಕುಮಾರ್, ಶಂಭೋನಹಳ್ಳಿ ರಮೇಶ್ ಹಾಗೂ ಅಪಾರ ಬೆಂಬಲಿಗರು ಹಾಜರಿದ್ದರು.

(Visited 9 times, 1 visits today)