ತುಮಕೂರು:

      ತುಮಕೂರು ನಗರದ ಅಭಿವೃದ್ಧಿಗೆ ಪೂರಕವಾಗಿ ಸರಕಾರ ಪಾಲಿಕೆಗೆ ನಾಮನಿರ್ದೇಶನ ಮಾಡಿರುವ ಸದಸ್ಯರು ನಡೆದುಕೊಳ್ಳುವಂತೆ ಶಾಸಕ ಜಿ.ಬಿ.ಜೋತಿಗಣೇಶ್ ಸಲಹೆ ನೀಡಿದ್ದಾರೆ.

      ನಗರದ ಪಾಲಿಕೆ ಸಭಾಂಗಣದಲ್ಲಿ ಸರಕಾರದವತಿಯಿಂದ ಪಾಲಿಕೆಗೆ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಮೋಹನ್ ಡಿ.ಎ.ಬಿನ್ ಲೇಟ್ ಆನಂತನಾರಾಯಣಶೆಟ್ಟಿ, ಶಿವರಾಜು ಕೆ.ಎನ್.ಬಿನ ನಟರಾಜಯ್ಯ, ನರಸಿಂಹಸ್ವಾಮಿ ಬಿನ್ ಚಂದ್ರಶೇಖ ರಾಚಾರ್,ತ್ಯಾಗರಾಜಸ್ವಾಮಿ ಬಿನ್ ರಾಮಚಂದ್ರಯ್ಯ ಎಂ, ಹಾಗೂ ವಿಶ್ವನಾಥ್ ಟಿ.ವಿ. ಬಿನ್ ಲೇಟ್ ವೆಂಕಟೇಶ್ ಅವರುಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಮನಿರ್ದೇಶನ ಸದಸ್ಯರಿಗೆ ಇಂತಹದ್ದೇ ವಾರ್ಡುಗಳೆಂಬುದಿಲ್ಲ. ನಗರದ 35ವಾರ್ಡುಗಳಲ್ಲಿಯೂ ಕೆಲಸ ಮಾಡಲು ಅವಕಾಶವಿದೆ.ಆದರೆ ಹಾಲಿ ಸದಸ್ಯರ ಜೊತೆಗೆ ಜಿದ್ದಾಜಿದ್ದಿಗೆ ಬೀಳದೆ,ಅವರಿಗೆ ಪೂರಕವಾಗಿ ಕೆಲಸ ಮಾಡುವ ಮೂಲಕ ನಗರದಲ್ಲಿ ಉದ್ಬವಿಸಿರುವ ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳಲು ಸಹಕಾರ ನೀಡಬೇಕೆಂದರು.

      ಕಳೆದ 45 ದಿನಗಳ ಹಿಂದೆಯೇ ಸರಕಾರ ಮೇಲಿನ ಐವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅವರನ್ನು ನಗರಪಾಲಿಕೆಗೆ ಪರಿಚಯಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಪರಿಚಯಿಸುವ ಕೆಲಸ ಮಾಡಲಾಗಿದೆ. ಮುಂದೆ ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ಸಹಕಾರ ಮತ್ತ ಸಲಹೆ ನೀಡುವ ಮೂಲಕ ನಗರ ಅಭಿವೃದ್ದಿಯಲ್ಲಿ ತಮ್ಮ ಕೈಲಾದ ಸೇವೆ ಮಾಡುವಂತೆ ನಾಮನಿರ್ದೇಶಿತ ಸದಸ್ಯರಿಗೆ ಮನವಿ ಮಾಡಿದರು.

      ಮೇಯರ್ ಶ್ರೀಮತಿ ಫರೀಧಾ ಬೇಗಂ ಮಾತನಾಡಿ,ಸರಕಾರ ವಿವಿಧ ಕ್ಷೇತ್ರಗಳ ಐದು ಜನರನ್ನು ತುಮಕೂರು ಮಹಾನಗರಪಾಲಿಕೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ. ಅವರೆಲ್ಲರಿಗೂ ಆಡಳಿತ ಮಂಡಳಿಯ ಪರವಾಗಿ ಸ್ವಾಗತ ಕೋರುತ್ತೇನೆ.ತುಮಕೂರು ನಗರ ವೇಗವಾಗಿ ಬೆಳೆಯುತ್ತಿದ್ದು,ನಗರ ವ್ಯವಸ್ಥಿತವಾಗಿ ಅಭಿವೃದ್ದಿ ಹೊಂದುವ ನಿಟ್ಟಿನಲ್ಲಿ ನಮ್ಮಲ್ಲರ ಸಹಕಾರ, ಸಲಹೆ ಮುಖ್ಯವಾಗಿದೆ. ನಿಮ್ಮ ಅನುಭವಗಳ ಆಧಾರದಲ್ಲಿ ತುಮಕೂರು ನಗರದ ಬೆಳೆವಣಿಗೆಗೆ ಸಹಕರಿಸುವಂತೆ ಕೋರಿದರು.

      ಪಾಲಿಕೆಯ ಆಯುಕ್ತೆ ಶ್ರೀಮತಿ ರೇಣುಕಮ್ಮ ನೂತನ ನಾಮನಿರ್ದೇಶಿತ ಸದಸ್ಯರಿಗೆ ಸ್ವಾಗತ ಕೋರಿ ಮಾತನಾಡಿ,ತುಮಕೂರು ನಗರದ ಅಭಿವೃದ್ದಿ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ, ಇಂದು ಸದಸ್ಯರ ಸಂಖ್ಯೆ 40ಕ್ಕೆ ಹೆಚ್ಚಾಗಿದೆ.ಸರಕಾರದಿಂದ ಅನುದಾನ ಪಡೆಯುವುದು ಸೇರಿದಂತೆ ಎಲ್ಲಾ ರೀತಿ ಅಭಿವೃದ್ದಿಯಲ್ಲಿಯೂ ತಮ್ಮ ಸಲಹೆ, ಸಹಕಾರ ಬಯಸುವುದಾಗಿ ತಿಳಿಸಿದರು.

      ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಟಿ.ಜಿ.ಕೃಷ್ಣಪ್ಪ,ರಮೇಶ್,ವಿಷ್ಣುವರ್ಧನ್,ಮಂಜುನಾಥ್, ಗಿರಿಜಾ ಧನಿಯಕುಮಾರ್, ಮಂಜುಳ ಆದರ್ಶ,ನಿರ್ಮಲ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

(Visited 9 times, 1 visits today)