ತುಮಕೂರು : 

       ಕೋವಿಡ್-19 ವ್ಯಾಪಕವಾಗಿ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಆದೇಶಿಸಿದ್ದಾರೆ.

        ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ ಇತ್ಯಾದಿ ಬಳಕೆ ಮಾಡಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್‍ಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದ್ದು, ಸೋಂಕು ದೇಹದ ಇತರೆ ಭಾಗಗಳಿಗೆ ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು.

       ಈ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕಿತರು ಪಾನ್‍ಮಸಾಲ, ತಂಬಾಕು ಉತ್ಪನ್ನಗಳನ್ನು ಜಿಗಿದು ಉಗುಳುವುದರಿಂದ ಕೋವಿಡ್-19 ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕ ಆರೋಗ್ಯ ಹಿತದೃಷ್ಠಿಯಿಂದ ಮುಂದಿನ ಆದೇಶದವರೆಗೂ ತಂಬಾಕು ಉತ್ಪನ್ನಗಳು ಹಾಗೂ ಪಾನ್‍ಮಸಾಲ, ಜರ್ದಾ, ಖೈನಿ ಉತ್ಪನ್ನಗಳನ್ನು ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು ನಿಷೇಧಿಸಲಾಗಿದೆ.

      ಒಂದು ವೇಳೆ ಉಲ್ಲಂಘನೆ ಮಾಡಿ ಮಾರಾಟ ಮತ್ತು ಬಳಕೆ ಮಾಡಿದರೆ ಸಾಂಕ್ರಾಮಿಕ ರೋಗಗಳ ಕಾಯಿದೆ-1897 ವಿಪತ್ತು ನಿರ್ವಹಣಾ ಕಾಯಿದೆ-2005, ಐಪಿಸಿ-ಕಾಲಂ-188.268.269 ಮತ್ತು 270 ಸಿಆರ್‍ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

(Visited 6 times, 1 visits today)