ತುಮಕೂರು :

      ನಗರದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ವತಿಯಿಂದ ನಗರದ ಎಲ್ಲಾ ವಾರ್ಡುಗಳಲ್ಲಿಯೂ ಸಾಮೂಹಿಕ ಸಾನಿಟೈಜರ್ ಸಿಂಪರಣೆ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ.

      ಸುಮಾರು 10 ಕಿ.ಮಿ.ಸುತ್ತಳತೆಯನ್ನು ಹೊಂದಿರುವ ತುಮಕೂರು ನಗರದಲ್ಲಿ 35 ವಾರ್ಡುಗಳಿದ್ದು, 3.50 ಲಕ್ಷಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದು,ವಿವಿಧ ಕೆಲಸಗಳಿಗಾಗಿ ತುಮಕೂರು ನಗರಕ್ಕೆ ಬರುವವರು, ಇಲ್ಲಿಂದ ಬೇರೆಡೆಗೆ ಹೋಗುವವರ ಸಂಖ್ಯೆಯೂ ಹೆಚ್ಚಿದ್ದು, ಅದರಲ್ಲಿಯೂ ಬೆಂಗಳೂರು ನಗರಕ್ಕೆ ದಿನವೊಂದಕ್ಕೆ 9 ರಿಂದ 10 ಸಾವಿರ ಜನರು ವೃತ್ತಿ ನಿರತರಾಗಿ ಪ್ರತಿದಿನ ಬಸ್ಸು,ರೈಲುಗಳಲ್ಲಿ ಸಂಚರಿಸುವವರಿದ್ದಾರೆ. ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ತುಮಕೂರು ನಗರದ ಮೇಲು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರಪಾಲಿಕೆ ಜನವರಿ 11 ರಿಂದ ನಗರದಾದ್ಯಂತ ಸಾಮೂಹಿಕ ಸಾನಿಟೈಜರ್‍ಗೆ ಮುಂದಾಗಿದೆ.

     ಜನವರಿ11ರ ಮಂಗಳವಾರ ನಗರಪಾಲಿಕೆಯ ಕಚೇರಿ, ಕೆ.ಎಸ್.ಆರ್.ಟಿ.ಸಿ, ಖಾಸಗಿ ಬಸ್ ನಿಲ್ದಾಣಗಳು ಹಾಗೂ 14ನೇ ವಾರ್ಡಿನ ಕೆಲ ಬಡಾವಣೆಗಳಿಗೆ ಸಾಮೂಹಿಕ ಸಾನಿಟೈಜರ್ ಸಿಂಪರಣೆ ನಡೆಸಿದ ಪಾಲಿಕೆಯ ಸಿಬ್ಬಂದಿ,ಜನವರಿ 12 ರಂದು ವಾರ್ಡುನಂ 15 ಹಾಗೂ 32ರಲ್ಲಿ ಪ್ರತಿ ಬೀದಿಗಳು,ಖಾಲಿ ಜಾಗಗಳು, ನನಿಬೀಡ ಪ್ರದೇಶಗಳಲ್ಲಿ ಸೋಡಿಯ ಹೈಫೋ ಕ್ಲೋರೈಡ್ ದ್ರಾವಣವನ್ನು ಒಂದು ಲೀಟರ್‍ಗೆ ಒಂದು ಮಿಲಿ ಗ್ರಾಂನಂತೆ ಬೆರೆಸಿ,ಚರಂಡಿ, ರಸ್ತೆಯ ಅಕ್ಕಪಕ್ಕದ ಮರಗಳು,ಮುಖ್ಯವಾಗಿ ಶಾಲಾ, ಕಾಲೇಜುಗಳ ಬಸ್ಸುಗಳಿಗೆ ಸಂಪಡಿಸಲಾಗುತ್ತಿದೆ.

       ಪಾಲಿಕೆಯ 15ನೇ ವಾರ್ಡಿನ ಕಾರ್ಪೋರೇಟರ್ ಶ್ರೀಮತಿ ಗಿರಿಜಾಧನಿಯಕುಮಾರ್ ಈ ವೇಳೆ ಮಾತನಾಡಿ,ನಮ್ಮ ವಾರ್ಡಿನಲ್ಲಿ ರೈಲ್ವೆ ನಿಲ್ದಾಣದ ಜೊತೆಗೆ, ಟೌನ್‍ಹಾಲ್,ಭದ್ರಮ್ಮ ವೃತ್ತ, ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ವಿವಿಧ ಶೈಕ್ಷಣಿಕ ಕಟ್ಟಡಗಳಿಗೆ ಇಂದು ಸಾನಿಟೈಜರ್ ಮಾಡಲಾಗಿದೆ. ಈ ಭಾಗದಲ್ಲಿ ಖಾಸಗಿ ಶಾಲೆಗಳನ್ನು ಹೊರತು ಪಡಿಸಿ, ಸರಕಾರಿ ಸಂಸ್ಥೆಗಳಲ್ಲಿಯೇ ಸುಮಾರು 8 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ರೈಲ್ವೆ ನಿಲ್ದಾಣವೂ ಈ ಭಾಗದಲ್ಲಿಯೇ ಇದ್ದು, ಬಹುಬೇಗ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಂದು ಸಿಎಸ್‍ಐ ಬಡಾವಣೆ, ಎಸ್.ಎಸ್.ಪುರಂ ಹಾಗು ರೈಲ್ವೆ ನಿಲ್ದಾಣದ ಕಡೆಗೆ ಸಾನಿಟೈಜರ್ ಸಿಂಪಡಿಸಲಾಗಿದೆ.ಕೋವಿಡ್ ಮೂರನೇ ಅಲೆ ಇರುವ ಕಾರಣ ಸಾರ್ವಜನಿಕರು ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವುದು, ಸಾನಿಟೈಜರ್ ಬಳಸುವುದು ಮತ್ತು ಕನಿಷ್ಠ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಕ್ಷಿತ ಮಾತನಾಡಿ, ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 11 ರಿಂದ 31ವರೆಗೆ ನಗರದ ಎಲ್ಲಾ ವಾರ್ಡುಗಳಲ್ಲಿಯೂ ಸಾಮೂಹಿಕ ಸಾನಿಟೈಜರ್ ನಡೆಸಲು ಮುಂದಾಗಿದ್ದೇವೆ. ಒಂದು ದಿನಕ್ಕೆ ಎರಡು ವಾರ್ಡುಗಳಂತೆ ದಿನವೊಂದಕ್ಕೆ 25-30 ಲೀಟರ್ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಬಳಸಿ ಸಾನಿಟೈಜರ್ ನಡಸಲಾಗುತ್ತಿದ್ದು,ಸಾರ್ವಜನಿಕರು ಸಾನಿಟೈಜರ್ ವಾಹನ ತಮ್ಮ ಬಡಾವಣೆಗಳಿಗೆ ಬಂದಾಗ,ಅಡ್ಡಿಪಡಿಸದೆ ದ್ರಾವಣ ಸಿಂಪರಣೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.

(Visited 1 times, 1 visits today)