ತುಮಕೂರು
ತುಮಕೂರು ಸ್ಮಾರ್ಟ್ಸಿಟಿಯು ನಗರದ ವಾಯುಮಾಲಿನ್ಯ ನಿಯಂತ್ರಣ ಮಾಡಲು ಎಲೇಕ್ಟ್ರಿಕಲ್ ಬೈಕ್ ಮತ್ತು ವಿನೂತನ ತಂತ್ರಜ್ಞಾನವುಳ್ಳ ಯಾಣ ಬೈಸಿಕಲ್ನ್ನು ಹೊರತಂದಿದೆ. ಸುಲಭವಾಗಿ ಮೋಬೈಲ್ ಅಪ್ಲಿಕೇಶನ್ನಲ್ಲಿ ಪಾವತಿ ಮಾಡುವ ಮೂಲಕ ಉಪಯೋಗಿಸಬಹುದು ಎಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಟಿ. ರಂಗಸ್ವಾಮಿ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತುಮಕೂರು ಸ್ಮಾರ್ಟ್ ಸಿಟಿಲಿಮಿಟೆಡ್ ಹಾಗೂ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವರ ಸಹಯೋಗದಲ್ಲಿ ‘ಆನ್ಸ್ಟ್ರೀಟ್ ಸೈಕ್ಲಿಂಗ್-ಎಲೇಕ್ಟ್ರೀಕಲ್ ಬೈಕ್’ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೈಕಲ್ಗಳು ಇಂಗಾಲದ-ಡೈ-ಆಕ್ಸೈಡ್ ಮುಕ್ತ ವಾಹನವಾಗಿದೆ. ಜಿಪಿಎಸ್ ಅಳವಡಿಸಿರುವುದರಿಂದ ವಾಹನ ಇರುವಿಕೆಯನ್ನು ಗುರುತಿಸಬಹುದಾಗಿದೆ. ಸ್ಮಾರ್ಟ್ಸಿಟಿ ಮಿಷನ್ ಅಡಿಯಲ್ಲಿ ಅನುμÁ್ಠನಗೊಳಿಸುತ್ತಿರುವ ಮತ್ತೊಂದು ಪ್ರಮುಖ ಯೋಜನೆಯಾಗಿದೆ ಎಂದು ಅವರು ವಿವರಿಸಿದರು.
ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಂಜಸವಾದ ಬೆಲೆಯಲ್ಲಿ ಬೈಸಿಕಲ್ಗಳನ್ನು ಲಭ್ಯವಾಗುವಂತೆ ಸ್ಮಾರ್ಟ್ ಯೋಜನೆಯಲ್ಲಿ ಅವಕಾಶ ಮಾಡಿದ್ದಾರೆ. ನಗರದಾದ್ಯಂತ ವಿವಿಧ ಕಾಲೇಜುಗಳೊಂದಿಗೆ ಪಾಲುದಾರರಾಗಿರುವುದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಯಾಣ ಬೈಸಿಕಲ್ ಕಂಪನಿ ಮ್ಯಾನೇಜರ್ ಅನಿಲ್ ಮಾತನಾಡಿ, ‘ಯಾಣ’ ಸುರಕ್ಷಿತ ಮತ್ತು ಪರಿಸರ ಸ್ನೇಹಿ ವಾಹನವಾಗಿದೆ. ಇದು ಬೈಸಿಕಲ್ ಹಂಚಿಕೆ ಸೇವೆಯಾಗಿದ್ದು, ನಗರದ ಪ್ರಯಾಣಕ್ಕಾಗಿ ಬಳಸಬಹುದು. ಹತ್ತಿರದಲ್ಲಿ ಗೊತ್ತುಪಡಿಸಿದ ಸೈಕಲ್ ಪಾಕಿರ್ಂಗ್ ನಿಲ್ದಾಣದಲ್ಲಿ ನಿಲ್ಲಿಸಬಹುದು ಎಂದರು.
ಜಾಗೃತಿ ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ.ಕುರಿಯನ್, ಡೀನ್ ಡಾ.ಎಂ.ಸಿದ್ದಪ್ಪ, ತರಬೇತಿ ಮತ್ತು ನೇಮಕಾತಿ ವಿಭಾಗದ ಡಾ.ಅಶೋಕ ಮೇಹ್ತಾ, ಐಕ್ಯೂಎಸಿ ಡಾ. ಆರ್ ಪ್ರಕಾಶ್, ಎನರ್ಜಿ ಕ್ಲಬ್ ಎಂ. ಪ್ರದೀಪ್, ಎನರ್ಜಿ ಕ್ಲಬ್ ಮಾರ್ಗದರ್ಶಿ ಡಾ.ಎಲ್ ಸಂಜೀವ್ಕುಮಾರ್, ಪ್ರಾಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.