ತುಮಕೂರು


ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಿಂದ ಕೊಳಚೆ ನಿಮೂರ್ಲನಾ ಮಂಡಳಿಗೆ ನೀಡಿರುವ 433 ಕೋಟಿ ರೂಗಳನ್ನು ಕೂಡಲೇ ಹಿಂಪಡೆಯಬೇಕು, ಆರ್ಹ ಫಲಾನುಭವಿಗಳ ವಸತಿ ಯೋಜನೆಗೆ ಅನುದಾನ ನೀಡುವಂತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಟೋಬರ್ 17 ರಂದು ರಾಜ್ಯದಾದ್ಯಂತ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2006ರಲ್ಲಿ ಜಾರಿಗೆ ಬಂದ ಕಾರ್ಮಿಕ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ಮಂತ್ರಿಗಳು,ಅಧಿಕಾರಿಗಳು ಬೇಕಾಬಿಟ್ಟು ಖರ್ಚು ಮಾಡಲು ಹೊರಟಿದ್ದಾರೆ.ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ಹಲವಾರು ಹೋರಾಟಗಳ ಫಲವಾಗಿ 2006ರಲ್ಲಿ ಜಾರಿಗೆ ಬಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 48 ಲಕ್ಷ ಜನ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದು, ಇವರಲ್ಲಿ ಶೇ 50ರಷ್ಟು ಜನರು ನಕಲಿ ಕಾರ್ಮಿಕರನ್ನು ಅಧಿಕಾರಿಗಳು ಸೇರಿಸಿದ್ದಾರೆ. ಮೊದಲು ಇವರ ನೊಂದಾವಣೆಯನ್ನು ಕೈಬಿಡಬೇಕು, ಹಾಗೆಯೇ ಸೆಸ್ ಹಣದಲ್ಲಿ 1 ಲಕ್ಷ ಕಾರ್ಮಿಕರಿಗೆ ಮಾಸಿಕ 1400 ರೂಗಳಂತೆ ಬಸ್ ಪಾಸ್ ನೀಡಿದೆ. ಇದರಲ್ಲಿ ಬಹಳ ಅವ್ಯವಹಾರ ನಡೆದಿದ್ದು,ಕೂಡಲೇ ವಿತರಿಸಿರುವ ಎಲ್ಲಾ ಬಸ್ ಪಾಸ್ ರದ್ದುಗೊಳಿಸಿ, ಕಾರ್ಮಿಕರಿಗೆ ಮಂಡಳಿ ಹೆಸರಿಸಿರುವ ಸವಲತ್ತುಗಳನ್ನು ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಗಿರೀಶ್ ತಿಳಿಸಿದರು.
ಕೋರೋನ ಸಂದರ್ಭದಲ್ಲಿ ಸರಕಾರ ಕಾರ್ಮಿಕ ಬೆವರಿನ ಹಣದಲ್ಲಿ ಕಿಟ್ ನೀಡಿ, ತಾನು ಪ್ರಚಾರ ಪಡೆಯಲು ಮುಂದಾಗಿದೆ. ನಮ್ಮಲ್ಲಿ ಸುಮಾರು 40 ವಿವಿಧ ರೀತಿಯ ಕೆಲಸ ಮಾಡುವ ಕಟ್ಟಡ ಕಾರ್ಮಿಕರಿದ್ದು, ಅವರಲ್ಲಿ ಪ್ಲಂಬರ್, ಏಲೆಕ್ಟ್ರೇಷನ್,ಬಾರ್ ಬೆಂಡರ್,ಪೈಂಟರ್ ಮತ್ತು ಗಾರೆ ಕೆಲಸ ಮಾಡುವವರಿಗೆ ಮಾತ್ರ ಕಿಟ್ ನೀಡಿ, ಇತರೆ ವರ್ಗದ ಕೆಲಸಗಾರರಿಗೆ ನೀಡಿಲ್ಲ. ಅಲ್ಲದೆ ಕಾರ್ಮಿಕ ಮಂಡಳಿಯ ನಿಯಮವನ್ನು ಮೀರಿ,ಕೊಳಚೆ ನಿಮೂರ್ಲನಾ ಮಂಡಳಿ ಮೂಲಕ ಕೊಳಗೇರಿಗಳಲ್ಲಿ ವಾಸವಿರುವ ಜನರಿಗೆ ಈ ಹಣದಲ್ಲಿ ಮನೆ ನಿರ್ಮಿಸಿಕೊಡಲು ಮುಂದಾಗಿರುವುದು ಕಾನೂನು ಬಾಹಿರವಾಗಿದ್ದು,ಈ ವಿಚಾರವಾಗಿ ಅಕ್ಟೋಬರ್ 17ರ ಬೃಹತ್ ಹೋರಾಟದ ಜೊತೆಗೆ,ಕಾನೂನು ಸಮರ ನಡೆಸಲಿದೆ ಎಂದು ಕರ್ನಾಟಕ ಕಟ್ಟಡ ಮತ್ತು ಕಲ್ಲು ಕ್ವಾರಿ ಕೆಲಸಗಾರರ ಸಂಘ(ರಿ) ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ಅಕ್ಟೋಬರ್ 17ರ ಸೋಮವಾರದಂದು ಮೊದಲಿಗೆ ಟೌನ್‍ಹಾಲ್ ವೃತ್ತದಲ್ಲಿ ಸೇರುವ ಸಾವಿರಾರು ಕಟ್ಟಡ ಮತ್ತು ಕಲ್ಲುಕ್ಯಾರಿ ಇತರೆ ನಿರ್ಮಾಣ ಕಾರ್ಮಿಕರು,ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಕೆಲ ಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ.ಸರಕಾರ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಮನೆ ಮುತ್ತಿಗೆಯಂತಹ ಹೋರಾಟವನ್ನು ಎಐಟಿಯುಸಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದು ಗಿರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ(ರಿ) ರಾಜ್ಯ ಸಮಿತಿ ಸದಸ್ಯರಾದ ದೇವರಾಜು,ಕೃಷ್ಣಕುಮಾರಿ,ಜಿಲ್ಲಾ ಖಜಾಂಚಿ ಅಶ್ವಥನಾರಾಯಣ,ಶ್ರೀನಿವಾಸ್, ಶಂಕರಪ್ಪ, ಶಿವಾನಂದ್, ಗೋವಿಂದ ರಾಜು, ರಾಘವೇಂದ್ರ,ವಸಂತರಾಜು, ಕುಮಾರ್, ಬಸವರಾಜು, ಪುನಿತ್ ಮತ್ತಿತರರು
ಉಪಸ್ಥಿತರಿದ್ದರು.

(Visited 3 times, 1 visits today)