ತುಮಕೂರು


ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಹೆಚ್ಚು ಪಾಲ್ಗೊಳ್ಳುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ರೇಣುಕ ಪ್ರಸಾದ್ ಕರೆ ನೀಡಿದರು.
ತುಮಕೂರು ತಾಲ್ಲೂಕು ದೊಡ್ಡವೀರನಹಳ್ಳಿಯಲ್ಲಿ ಹಾಲು ಒಕ್ಕೂಟದ ಕ್ಷೀರ ಸಂಜೀವಿನಿ ಯೋಜನೆಯಡಿಯಲ್ಲಿ ಸ್ಥಳೀಯ ಮಹಿಳಾ ಸಹಕಾರ ಸಂಘದ ಸದಸ್ಯರುಗಳಿಗಾಗಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಹಾಗೂ ರಾಸುಗಳ ಖರೀದಿಗೆ ಚೆಕ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಅತಿ ದೊಡ್ಡದಿದೆ. ಸಹಕಾರ ಕ್ಷೇತ್ರಕ್ಕೆ ಮಹಿಳೆಯರು ಪಾದಾರ್ಪಣೆ ಮಾಡುತ್ತಿರುವುದರಿಂದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಡೆಯಲು ಸಾಧ್ಯವಾಗಿದೆ. ಹೈನುಗಾರಿಕೆಯು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದರು.
ತುಮಕೂರು ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಹಿಳೆ ಮತ್ತು ಕಾನೂನು ಕುರಿತು ಮಾತನಾಡಿ ಬಹಳ ಹಿಂದಿನಿಂದ ಮಹಿಳೆಯನ್ನು ಕೆಲವು ಕಟ್ಟುಪಾಡುಗಳಲ್ಲಿ ಬಂಧಿಸಲಾಗಿತ್ತು. ನಮ್ಮ ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂಬ ಅಂಶ ಹಾಗೂ ವಿವಿಧ ವಿಶೇಷ ಕಾನೂನುಗಳು ಜಾರಿಯಾದ ನಂತರ ಮಹಿಳೆಯರ ಶೋಷಣೆಯನ್ನು ತಪ್ಪಿಸಲು ಸಾಧ್ಯವಾಗಿದೆ. ಆದರೂ ಕೆಲವೊಂದು ಕ್ಷೇತ್ರಗಳಲ್ಲಿ ಮಹಿಳಾ ದೌರ್ಜನ್ಯ ಬೇರೆ ಬೇರೆ ರೀತಿಯಲ್ಲಿ ಮುಂದುವರೆದಿದೆ. ಇದನ್ನು ತಪ್ಪಿಸಲೆಂದೇ ಕಾನೂನುಗಳನ್ನು ರಚನೆ ಮಾಡಲಾಗಿದ್ದು, ಅಗತ್ಯ ಬಿದ್ದಾಗ ಇವುಗಳ ಬಳಕೆ ಮಾಡಿಕೊಳ್ಳಬೇಕು ಎಂದರು.
ಇಂದಿಗೂ ಸಹ ಕೆಲವೊಂದು ಕಾರಣಗಳಿಗಾಗಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡಲಾಗುತ್ತಿದೆ. ಜವಾಬ್ದಾರಿ ಅರಿಯದ ಮಕ್ಕಳಿಗೆ ವಿವಾಹ ಮಾಡಿದರೆ ಅವರ ಸಂಸಾರ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಈ ಕಾಯ್ದೆ ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅದೇ ರೀತಿ ವರದಕ್ಷಿಣೆ ಕಿರುಕುಳ, ಕುಟುಂಬದಲ್ಲಿ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು ಸಮಾಜದಲ್ಲಿ ಕಂಡುಬರುತ್ತಿದ್ದು, ತೊಂದರೆಗೆ ಒಳಗಾದವರು ಕಾನೂನಿನ ಪ್ರಕ್ರಿಯೆ ಕೈಗೊಳ್ಳುವ ಮುನ್ನ ಸಾಂತ್ವನ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದರು.
ಆರೋಗ್ಯ ಮತ್ತು ಮಹಿಳೆ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಪ್ಪ ಮಾತನಾಡಿ ಸೊಪ್ಪು, ತರಕಾರಿ ಮತ್ತು ಹಣ್ಣು ಸೇವನೆಯಿಂದ ರಕ್ತ ಕಡಿಮೆಯ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಬಹುದು. ಸ್ವಚ್ಛತೆಯ ಕಡೆಗೆ ಜನತೆ ಗಮನ ಹರಿಸುತ್ತಿಲ್ಲ. ಋತುಸ್ರಾವದ ಸಂದರ್ಭದಲ್ಲಿ ರಕ್ತದ ಕೊರತೆ ನಿವಾರಿಸುವ ಜೊತೆಗೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ಟೆಪ್ ಯೋಜನೆಯ ಅಧಿಕಾರಿ ವೈ.ಎಸ್.ಮಧು ಫಲಾನುಭವಿಗಳಿಗೆ ಹಸು ಖರೀದಿಸಲು 25 ಸಾವಿರ ರೂ. ಬಡ್ಡಿರಹಿತ ಸಾಲ ನೀಡುತ್ತಿದ್ದು, ಪ್ರತಿ ತಿಂಗಳು ಕಂತು ಪಾವತಿಸುತ್ತಾ ಹೋಗಬೇಕು. ಗುಣಮಟ್ಟದ ಹಾಲು ಪೂರೈಸಬೇಕು. ಸಂಘಗಳ ಬಲವರ್ಧನೆಗೆ ಒಕ್ಕೂಟದಿಂದ ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತಿದ್ದು, ಇದರ ಪ್ರಯೋಜನ ಪಡೆದು ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿಸ್ತರಣಾಧಿಕಾರಿ ಚೈತ್ರಾ ಅವರು ರಾಸುಗಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆ, ಮೇವು ಕುರಿತು ಮಾತನಾಡಿದರು. ಸಂಘದ ಅಧ್ಯಕ್ಷೆ ಸಿದ್ಧಗಂಗಮ್ಮ, ಕಾರ್ಯದರ್ಶಿ ಮಮತ, ಸ್ಪೆಪ್ ಯೋಜನೆಯ ಭವ್ಯಶ್ರೀ ಮೊದಲಾದವರು ಪಾಲ್ಗೊಂಡಿದ್ದರು. ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.

(Visited 1 times, 1 visits today)