ತುಮಕೂರು


ಹಿಂದಿನ ದಿನಗಳಲ್ಲಿನ ಓದಿಗೂ ಮತ್ತು ಇಂದಿನ ಓದಿಗೂ ವ್ಯತ್ಯಾಸ ಬಹಳ ಇದೆ. ಇಂದು ವೈವಿಧ್ಯಮಯ ಅವಕಾಶಗಳ ಆಗರವೇ ವಿದ್ಯಾರ್ಥಿಗಳ ಮುಂದಿದೆ. ಭಾರತ ಇಂದು 5ನೇ ದೊಡ್ಡ ಆರ್ಥಿಕತೆ ಹೊಂದಿದ ದೇಶ, 2028ರ ಹೊತ್ತಿಗೆ ಭಾರತ 3ನೇ ದೊಡ್ಡ ಆರ್ಥಿಕತೆ ಹೊಂದುವ ದೇಶವಾಗಿ ಹೊರಹೊಮ್ಮಲಿದೆ ಎಂದು, ಬೆಂಗಳೂರಿನ ಸೈಟ್ ಕೇರ್ ಆಸ್ಪತ್ರೆಯ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಫರ್ಜಾನ್ ಎಂಜಿನೀರ್ ಅವರು ಪ್ರತಿಪಾದಿಸಿದರು.
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ (ಅಕ್ಟೋಬರ್ 29 ರಂದು )ನಡೆದ ಸಾಹೇ(ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 11 ನೇ ಘಟಿಕೋತ್ಸದಲ್ಲಿ ಮಾತನಾಡಿದ ಅವರು, ಇಂದು ಭಾರತ ರಾಷ್ಟ್ರ ಸೇವಾ ಕ್ಷೇತ್ರ ಮಾತ್ರವಲ್ಲದೆ ಉತ್ಪಾದನಾ ರಂಗದಲ್ಲೂ ಮುಂಚೂಣಿಗೆ ಬಂದು ನಿಂತಿದೆ. ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾತ್ರವಲ್ಲ ಕೌಶಲ್ಯವಂತರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾ ಸಂಸ್ಥೆಗಳ ಮೇಲಿದೆ ಎಂದರು.
ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನ, ಸಂಶೋಧನೆಗೂ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ವಿದ್ಯಾರ್ಥಿಗಳಾದ ನೀವು ಇಂದು ಸಿದ್ಧಾರ್ಥ ಮಹಾವಿದ್ಯಾಲಯದಿಂದ ಪಡೆಯುತ್ತಿರುವ ಪದವಿ ಮಹತ್ವದ್ದು, ಏಕೆಂದರೆ ಸಂಸ್ಥೆ ವಿಶ್ವದಾದ್ಯಂತ ಹೆಸರು ಪಡೆದಿದೆ ಮತ್ತು ಸಂಶೋಧನೆಯಲ್ಲೂ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮತ್ತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಂಸ್ಥೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಎಂದು ಅವರು ತಿಳಿಸಿದರು.
ಇಂದಿನ ಜನಾಂಗಕ್ಕೆ ವೈಭವೋಪೇತ ಜೀವನ ದೊರೆತಿರುವುದಷ್ಟೇ ಅಲ್ಲದೆ ಅನ್ವೇಷಣೆ ಮತ್ತು ಸಂಶೋಧನೆಗೆ ಅವಕಾಶವಿರುವ ಪರಿಸರವೂ ಸುಲಭವಾಗಿ
ದೊರೆತಿದೆ. ಉಳಿಯುವುದಕ್ಕಾಗಿ ಇಂದಿನ ವಿದ್ಯಾರ್ಥಿಗಳು ಹೋರಾಟ ಮಾಡಬೇಕಾದ ಅವಶ್ಯಕತೆ ಇಲ್ಲ, ಬದಲಾಗಿ ತಮ್ಮ ಜೀವನವನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಪದವಿಗಳಿಸಿದ ನಂತರ ವೃತ್ತಪರತೆ ಉತ್ತಮ ನಡತೆ, ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ಸಮಾಜದ ಅಭಿವೃದ್ದಿ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆಯನ್ನು ಭೋದಿಸಿದ ಸಾಹೇ ವಿಶ್ವವಿದ್ಯಾಲಯದ ಕು¯ಪತಿಗಳಾದ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಇಂಜಿನಿಯರಿಂಗ್ ವೈದ್ಯಕೀಯ ಮತ್ತು ಡೆಂಟೆಲ್ ಕೋರ್ಸ್
ಮುಗಿಸಿದವರಿಗೆ ಘಟಿಕೋತ್ಸವದಲ್ಲಿ ಪದವಿಗಳನ್ನು ಘೋಷಿಸಿದರು. ಡಾಕ್ಟರೇಟ್ ಪದವಿ-10,
ಇಂಜಿನಿಯರಿಂಗ್-596 ವೈದ್ಯಕೀಯ-214, ದಂತ ವೈದ್ಯಕೀಯ-26 ಸೇರಿದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ವಿತರಿಸಲಾಯಿತು.
ಸಾಹೇ ವಿವಿ ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ ಅವರು ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸೈಟ್ ಕೇರ್ ಆಸ್ಪತ್ರೆಯ ಸಹ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಫರ್ಜಾನ್ ಎಂಜಿನೀರ್ ಅವರನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹೇ ರಿಜಿಸ್ಟ್ರಾರ್ ಡಾ. ಎಮ್.ಝೆಡ್.ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸುಶಿಲ್‍ಚಂದ್ರ ಮಹಾಪಾತ್ರ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ್, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾಂ.ಎಸ್.ರವಿಪ್ರಕಾಶ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಎ.ಎಸ್.ರಾಜು ಘಟಿಕೋತ್ಸವ ಮೇಲ್ವಿಚಾರಕರು ಮತ್ತು ಉಪ ಕುಲಸಚಿವರು ಆದ ಡಾ.ಸುಧೀಪ್ ಕುಮಾರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ. ಕರುಣಾಕರ್ ಸಾಹೇ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

(Visited 10 times, 1 visits today)