ಚಿಕ್ಕನಾಯಕನಹಳ್ಳಿ:

      ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಯಲು ಸರ್ಕಾರ ಯತ್ತೇಚ್ಛವಾಗಿ ಹಣ ನೀಡುತ್ತಿದೆ ಇದನ್ನು ಉಪಯೋಗಿಸಿಕೊಳ್ಳುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ರೈತರಿಗೆ ಸಲಹೆ ನೀಡಿದರು.

      ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಎಸ್.ಎಂ.ಎಫ್, ಎನ್.ಆರ್.ಇ.ಜಿ ಹಾಗೂ ಕೆ.ಎ.ಪಿ.ವೈ ಯೋಜನೆಯಡಿ ರೈತರಿಗೆ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳು ಹಾಗೂ ಯೋಜನೆಯ ರೂಪುರೇಷೆಗಳ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ನಮ್ಮ ಹಿರಿಯರು ತೋಪುಗಳು ನೆಡುತೋಪು, ಅರಣ್ಯ ಹಾಗೂ ಕೃಷಿ ಅರಣ್ಯ ಭೂಮಿಯಾಗಿ ವಿಂಗಡಿಸಿ ಮರಗಿಡಗಳನ್ನು ಬೆಳೆಸಿದ್ದರು. ಈಗ ವಿದ್ಯಾವಂತರಾಗುತ್ತಿದ್ದು, ಸ್ವಾರ್ಥ ಹೆಚ್ಚಾಗುತ್ತಿದೆ. ನಮ್ಮ ಕಣ್ಣುಮುಂದೆ ಏನು ನಡೆಯುತ್ತಿದ್ದರೂ ನಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದೇವೆ. ತಂಪಿರುವ ಕಡೆ ಮಳೆಯಾಗುತ್ತಿದ್ದು, ಮಳೆ ಇರುವ ಕಡೆ ತಂಪಿದೆ ಋತುಮಾನ ಬದಲಾದಂತೆ ಮಳೆ ಕಡಿಮೆಯಾಗುತ್ತಿದೆ. ಕರ್ನಾಟಕದ 7 ರಿಂದ 8 ಜಿಲ್ಲೆಗಳ ಭೂಮಿ ಬರಡಾಗುತ್ತಿದ್ದು, ನಾವು ಎಚ್ಚೇತ್ತುಕೊಳ್ಳದೆ ಹೋದರೆ ಮರುಭೂಮಿಯಾಗುವುದರಲ್ಲಿ ಅನುಮಾನವಿಲ್ಲ ಮರಗಿಡಗಳಿಲ್ಲದೇ ಹೋದರೆ ನಾವು ಉಸಿರಾಡಲು ಅಮ್ಲಜನಕ ದೊರೆಯುವುದಿಲ್ಲ ವಾತಾವರಣದಲ್ಲಿ ತೇವಾಂಶವಿಲ್ಲದೆ ಮರಗಿಡಗಳು ಒಣಗಿತ್ತಿವೆ ಎಂದರು.

       ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಎಲ್ಲೆಲ್ಲ ಖಾಲಿ ಜಮೀನುಗಳಿದ್ದವೋ ಅಂತಹ ಸ್ಥಳಗಳಲ್ಲಿ ಮರಗಿಡಗಳನ್ನು ಬೆಳೆಯುವಂತೆ ಅರಣ್ಯ ಇಲಾಖೆಗೆ ಆದೇಶ ನೀಡಿ ಮರಗಿಡಗಳನ್ನು ಬೆಳೆಸಲು ಕಾರಣರಾದರು. ಹೆದ್ದಾರಿ ಅಗಲೀಕರಣ ಹಾಗೂ ದೂರವಾಣಿ ಇಲಾಖೆಗಳು ಅಭಿವೃದ್ದಿಯ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕುತ್ತಿರುವುದರಿಂದಲೂ ಪರಿಸರ ನಾಶ ಪಡಿಸುತ್ತಿದ್ದಾರೆ ಎಂದ ಅವರು ಪ್ರಕೃತಿ ದತ್ತವಾದ ಮರಗಳನ್ನು ಕಡಿದು ಹಾಕಿ ಮರಗಿಡಗಳನ್ನು ಬೆಳೆಸಲು ಹತ್ತಾರು ವರ್ಷಗಳು ಬೇಕಾಗುತ್ತದೆ.

      ಆದ್ದರಿಂದ ರೈತರು ತಮ್ಮ ಮಕ್ಕಳಿಗೆ ಹಣದ ಬದಲು ಮರಗಿಡಗಳನ್ನು ಬೆಳೆದರೆ ಜೀವವಿಮೆ ಇದ್ದಂತೆ ಅದೇ ನಮ್ಮ ಮಕ್ಕಳಿಗೆ ಆಸ್ತಿಯಾಗುತ್ತದೆ. ಮರಗಿಡಗಳನ್ನು ಬೆಳೆಯದೇ ಹೋದರೆ ದೇಶ ರಾಜ್ಯಗಳು ಹಾಳಾಗುತ್ತದೆ ಆದ್ದರಿಂದ ಒಂದು ದಿನದ ಕಾರ್ಯಗಾರದಲ್ಲಿ ಭಾಗಿಯಾದ ರೈತರು ಮರಗಿಡಗಳನ್ನು ಬೆಳೆಯುವಂತೆ ಹಾಗೂ ತಮ್ಮ ಸುತ್ತಮುತ್ತಲು ರೈತರೂ ಬೆಳೆಯುವಂತೆ ಉತ್ತೇಜನ ನೀಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‍ಬಾಬು ರೈ, ಎ.ಸಿ.ಎಫ್‍ಗಳಾದ ಸಂತೋಷ್‍ನಾಯ್ಕ, ಸತ್ಯನಾರಾಯಣ, ಬೆಂಗಳೂರು ಜಿ.ಕೆ.ವಿ.ಕೆ.ವಿಜ್ಞಾನಿ ಮಂಜುನಾಥ್, ಆರ್.ಎಫ್.ಓ.ಗಳಾದ ಸುನೀಲ್‍ಕುಮಾರ್, ಸುಜಾತ, ಮತ್ತಿತರರು ಉಪಸ್ಥಿತರಿದ್ದರು.

(Visited 19 times, 1 visits today)