ಕೊರಟಗೆರೆ:

     ಅನಾರೋಗ್ಯದಿಂದ ಬಳಲುತ್ತೀದ್ದ ಕೊರಟಗೆರೆ ಪೊಲೀಸ್ ಠಾಣೆಯ ಗೃಹರಕ್ಷಕ ದಳದ ಘಟಕಾಧಿಕಾರಿ ಹನುಮಂತರಾಜು ಹೃದಯಘಾತದಿಂದ ತುಮಕೂರು ನಗರದ ಶ್ರೀದೇವಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ಜರುಗಿದೆ.

      ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ವಾಸಿಯಾದ ರಂಗಯ್ಯನ ಮಗನಾದ ಹನುಮಂತರಾಜು(35) ಮೃತ ದುರ್ದೈವಿ. ಪ್ರಸ್ತುತ ಈಗ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

      ಮೃತ ಹನುಮಂತರಾಜು ಏ.29ರ ಬುಧವಾರ ತಡರಾತ್ರಿ ಕೊರಟಗೆರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ತುಮಕೂರಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಸೂಚನೆಯಂತೆ ನಗರದ ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿ ಮೇ.1ರ ತನಕ ಚಿಕಿತ್ಸೆ ಪಡೆದಿದ್ದಾರೆ. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ.

      ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಘಟಕಾಧಿಕಾರಿ ಆಗಿ ಕರ್ತವ್ಯದಲ್ಲಿದ್ದ ಹನುಮಂತರಾಜು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ತುಮಕೂರು, ಮಧುಗಿರಿ, ಕೊರಟಗೆರೆ, ಕೋಳಾಲ ಮತ್ತು ಹೊಳವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2002ರಿಂದ 2020ರವರೇಗೆ 18ವರ್ಷ ಸೇವೆ ಸಲ್ಲಿಸಿದ್ದಾರೆ.

      ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಮೃತ ಹನುಮಂತರಾಜುವಿನ ಕೊರೊನಾ ಪರೀಕ್ಷೆಯನ್ನು ತುಮಕೂರಿನ ವೈದ್ಯರು ನಡೆಸಿದ್ದಾರೆ. ಶ್ರೀದೇವಿ ಆಸ್ಪತ್ರೆಗೆ ಕೊರಟಗೆರೆ ಪಿಎಸೈ ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 144 times, 1 visits today)