ತುಮಕೂರು :

      ಕೋವಿಡ್-19ರ ನಿಯಂತ್ರಣದ ಹಿನ್ನಲೆಯಲ್ಲಿ ಲಾಕ್‍ಡೌನ್ ಆಗಿರುವುದರಿಂದ ಮನೆ ಮನೆಗೆ ಹಣ್ಣು-ತರಕಾರಿ ತಲುಪಿಸುವ ಮಾದರಿಯಲ್ಲೇ ದೇಸಿ ತಳಿಯ ಕುರಿ ಮತ್ತು ಮೇಕೆ ಮಾಂಸವನ್ನು ತಲುಪಿಸುವ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಇಂದು ಚಾಲನೆ ನೀಡಿದರು.

      ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಬೆಂಗಳೂರು ವತಿಯಿಂದ ತುಮಕೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕುವೆಂಪು ನಗರದಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಚಾಲನೆ ನೀಡಿ, ಮಾತನಾಡಿದ ಅವರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ರಾಜ್ಯದಲ್ಲೇ ಪ್ರಥಮ ಬಾರಿಗೆ ತುಮಕೂರಿನಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆಯನ್ನು ಸ್ಥಾಪಿಸಿದೆ. ಇದಕ್ಕೆ ಮಹಾನಗರ ಪಾಲಿಕೆಯು ಸಹಕಾರ ನೀಡುತ್ತಿದೆ ಎಂದರು.

      ಲಾಕ್‍ಡೌನ್ ಜಾರಿಯಲ್ಲಿ ಇರುವ ಈ ಅವಧಿಯಲ್ಲಿ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರವನ್ನು ಹುಡುಕುವ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ಮಾಂಸ ತಿನ್ನುವವರಿಗೆ ಮನೆ ಮನೆಗೆ ಮಾಂಸ ತಲುಪಿಸುವ ಉದ್ದೇಶದಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಈ ಕಾರ್ಯವನ್ನು ಆರಂಭಿಸಲಾಗಿದೆ. ಲಾಕ್‍ಡೌನ್ ಇರುವುದರಿಂದ ಪ್ರತಿ ಕೆ.ಜಿ. ಮಾಂಸಕ್ಕೆ 650 ರೂ. ನಿಗಧಿಪಡಿಸಲಾಗಿದ್ದು, ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

      ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಜಿ.ಎಂ.ನಾಗರಾಜು ಮಾತನಾಡಿ, ನಿರುದ್ಯೋಗಿ ಯುವಕ-ಯುವತಿಯರಿಗೆ ಆರ್ಥಿಕ ನೆರವು ನೀಡಿ ಮಾಂಸ ಮತ್ತು ಮಾಂಸದಿಂದ ತಯಾರಾಗುವ ವಿವಿಧ ಖಾದ್ಯಗಳ ಪದಾರ್ಥಗಳ ಮಾರಾಟಕ್ಕೆ ಸಂಚಾರಿ ಮಾರಾಟ ಮಳಿಗೆ ಸ್ಥಾಪಿಸಲಾಗಿದೆ. ಈ ಮಳಿಗೆಯಲ್ಲಿ ದೇಸಿ ತಳಿಯ ಕುರಿ ಮತ್ತು ಮೇಕೆ ಮಾಂಸವನ್ನು ಸುಲಭ ದರದಲ್ಲಿ ಕುರಿ/ಮೇಕೆ ಸಾಕಾಣಿಕೆದಾರರಿಂದ ಖರೀದಿಸಿ ಗ್ರಾಹಕರಿಗೆ ನೀಡಲಾಗುವುದು ಎಂದರು.

      ಆಸಕ್ತ ಗ್ರಾಹಕರು ನಗರ ನಿವಾಸಿಗಳು ಕುವೆಂಪು ನಗರದ ಲಕ್ಷ್ಮಿದೇವಮ್ಮ ಮತ್ತು ರಮೇಶ್ ಅವರ ಮೊ: 9900391897ನ್ನು ಸಂಪರ್ಕಿಸಿದರೆ ಸುಲಭವಾದ ದರದಲ್ಲಿ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಎಂದು ಅವರು ಹೇಳಿದರು. ಅರ್ಧ ಹಾಗೂ ಒಂದು ಕಿ.ಗ್ರಾಂ ತೂಕದ ಪೊಟ್ಟಣಗಳಲ್ಲಿ ಮಾಂಸ ಈ ಸಂಚಾರಿ ಮಳಿಗೆಯಲ್ಲಿ ಲಭ್ಯ ಇರುತ್ತದೆ.

     ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಶ್ರೀನಿವಾಸ್, ಧನಿಯಾಕುಮಾರ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್, ವ್ಯವಸ್ಥಾಪಕ ಮಹೇಶ್, ಮಾಂಸ ವಿತರಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

(Visited 10 times, 1 visits today)