ತುಮಕೂರು :

      ನಗರದ ಶಿರಾಗೇಟ್ ನಾಗಯ್ಯನಪಾಳ್ಯದ ಅನಿಕೇತನ ಶಾಲೆ ಬಳಿ ಗುರುವಾರ ಸಂಜೆ ನಡೆದ ಮಹಾಂತೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

      ಬಸವಣ್ಣನ ಪಾಳ್ಯದ ಸುಹಾಸ್ (19), ಮನೋಹರ್ (20) ಮತ್ತು ಯಶವಂತ್ (19) ಬಂಧಿತ ಆರೋಪಿಗಳು.

      ಗುರುವಾರ ಸಂಜೆ ಮಹಾಂತೇಶ್ ಮತ್ತು ಮಂಜುನಾಥ್ ಎಂಬುವವರ ಮೇಲೆ ಬಂಧಿತರು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮಹಾಂತೇಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

      ಆರೋಪಿಗಳ ಪತ್ತೆಗಾಗಿ ಎಸ್.ಪಿ ಡಾ.ಕೆ.ವಂಶಿಕೃಷ್ಣ ಹಾಗೂ ಎಎಸ್‍ಪಿ ಟಿ.ಜೆ.ಉದೇಶ್ ಮುಂದಾಗಿದ್ದರು. ಡಿವೈಎಸ್‍ಪಿ ತಿಪ್ಪೇಸ್ವಾಮಿ ಹಾಗೂ ಸಿಬಿಐ ನವೀನ್ ಉಸ್ತುವಾರಿಯಲ್ಲಿ ತನಿಖಾ ತಂಡ ರಚಿಸಿದ್ದರು.ಕಾರ್ಯಾಚರಣೆಯಲ್ಲಿ ಪಿಎಸ್‍ಐ ವಿಜಯಲಕ್ಷ್ಮಿ, ಕೃಷ್ಣೇಗೌಡ, ಸಿಬ್ಬಂದಿ ರಮೇಶ್, ನಾಗರಾಜ್, ಡಿ.ಮಂಜುನಾಥ್, ರಾಮಚಂದ್ರಯ್ಯ, ನವೀನ್ ಕುಮಾರ್, ಈರಣ್ಣ, ಸೈಯದ್, ಮುಕ್ತಿಯಾರ್, ಪ್ರಸನ್ನಕುಮಾರ್, ಜೈಪ್ರಕಾಶ್, ಸಿದ್ದೇಶ್ವರ್ ಪಾಲ್ಗೊಂಡಿದ್ದರು.ಹತ್ಯೆ ನಡೆದು 24 ಗಂಟೆಯ ಒಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ ಸಿಬ್ಬಂದಿಯನ್ನು ಎಸ್‍ಪಿ ಪ್ರಶಂಸಿಸಿದ್ದಾರೆ. ಅಲ್ಲದೆ ಆರೋಪಿಗಳ ಬಂಧನದ ಮೂಲಕ ನಾಗರಿಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ನಗರದಲ್ಲಿ ಒಂದು ವಾರದಲ್ಲಿ ನಡೆದ ಮೂರನೇ ಹತ್ಯೆ ಪ್ರಕರಣ ಇದಾಗಿತ್ತು. ಹತ್ಯೆಯಿಂದ ನಾಗರಿಕರು ಸಹ ಬೆಚ್ಚಿದ್ದರು.

(Visited 65 times, 1 visits today)