ತುಮಕೂರು :

      ನಗರದ ಸೋಮೇಶ್ವರ 15ನೇ ಕ್ರಾಸ್‍ನಲ್ಲಿ ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ಸಾರ್ವಜನಿಕರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ, ಸ್ಮಾರ್ಟ್‍ಸಿಟಿ ಎಂಜಿನಿಯರ್ ದರ್ಶನ್ ಅವರನ್ನು ಮೇಯರ್ ಫರೀದಾಬೇಗಂ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

      ನಗರದ ಸೋಮೇಶ್ವರನ 15ನೇ ಅಡ್ಡರಸ್ತೆಯಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ನೀರು, ವಿದ್ಯುತ್ ಹಾಗೂ ಯುಜಿಡಿ ಸಂಪರ್ಕ ಕಡಿತಗೊಂಡಿತ್ತು, ಕಾಮಗಾರಿಯಿಂದ ಫಣೀಂದ್ರ(ಸುರಭಿ) ಅವರ ಮನೆಯಲ್ಲಿ ಶಾರ್ಟ್‍ಸಕ್ರ್ಯೂಟ್ ಸಂಭವಿಸಿದೆ, ಸುರಕ್ಷ ಕ್ರಮಗಳನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಕಾಮಗಾರಿಯನ್ನು ನಿರ್ವಹಿಸಲಾಗಿದ್ದು, ಸ್ಮಾರ್ಟ್‍ಸಿಟಿ ಎಂಜನಿಯರ್‍ಗಳು ಸ್ಪಂದಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

       15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಸ್ಮಾರ್ಟ್‍ಸಿಟಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಗೌರವ ಕೊಡುತ್ತಿಲ್ಲ, ಕಾಮಗಾರಿ ಪ್ರಾರಂಭಿಸದಂತೆ ಸೂಚಿಸಿದ್ದರು, ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಈ ಕಾಮಗಾರಿಯಿಂದ ಹೇಮಾವತಿ ಪೈಪ್‍ಲೈನ್ ಕಡಿತಗೊಂಡಿದ್ದು, ನೀರು ಪೋಲಾಗಿದೆ, ಜನರು ಹಾಗೂ ಜನಪ್ರತಿನಿಧಿಗಳು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಕರೆ ಮಾಡಿದರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್‍ಸಿಟಿಗೆ ಕಾಮಗಾರಿ ನಿರ್ವಹಿಸಲು ನೀಡಿರುವ ಅನುಮತಿ ಉಲ್ಲಂಘಿಸಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ, ಕಾಮಗಾರಿ ನಿರ್ವಹಿಸುವ ವೇಳೆ ಬೆಸ್ಕಾಂ ಹಾಗೂ ಪಬ್ಲಿಂಗ್ ಸಿಬ್ಬಂದಿಯನ್ನು ಜೊತೆಯಲ್ಲಿರಿಸಿಕೊಳ್ಳಬೇಕಾದ ನಿಯಮವಿದ್ದರೂ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಅದನ್ನು ಉಲ್ಲಂಘಿಸುತ್ತಿದ್ದಾರೆ, 25 ಮೀಟರ್ ಅಗೆದು ಕಾಮಗಾರಿ ಪೂರ್ಣಗೊಳಿಸಿ, ನಂತರ ಬೇರೆಡೆ ಅಗೆಯಬೇಕೆಂದು ಸೂಚಿಸಿದ್ದರು, ಅಧಿಕಾರಿಗಳು ಮನಸೋ ಇಚ್ಛೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ದೂರಿದರು.

      15ನೇ ವಾರ್ಡ್ ವ್ಯಾಪ್ತಿಯಲ್ಲಿರುವ ವೀರಸಾರ್ವಕರ್ ಉದ್ಯಾನ ಹಾಳಾಗಿದ್ದು, ತುಮಕೂರು ಮಹಾನಗರ ಪಾಲಿಕೆ ಉದ್ಯಾನಗಳ ನಿರ್ವಹಣೆಯನ್ನು ಮಾಡುತ್ತಿಲ್ಲ, ಬೆಂಗಳೂರು, ಶಿವಮೊಗ್ಗ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಉದ್ಯಾನಗಳ ನಿರ್ವಹಣೆ ಅನುದಾನ ನೀಡುತ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಅನುದಾನ ನೀಡುತ್ತಿಲ್ಲ, ಕಳೆದ 10 ವರ್ಷಗಳಿಂದ ನಿರ್ವಹಣೆಯ ಕಾರಣಕ್ಕೆ ಚೆನ್ನಾಗಿದ್ದ ಪಾರ್ಕ್ ಈಗ ನಿರ್ವಹಣೆ ಇಲ್ಲದೇ ಹಾಳಾಗಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆ ತಾಣ ಮಾರ್ಪಟ್ಟಿದ್ದು, ಪಾಲಿಕೆ ನಿರ್ವಹಣೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

      ಪಾಲಿಕೆ ಮೇಯರ್ ಫರೀದಾಬೇಗಂ ಅವರು ಪಾರ್ಕ್ ಹಾಗೂ ಸ್ಮಾರ್ಟ್‍ಸಿಟಿಯಿಂದ ಉಂಟಾಗಿರುವ ತೊಂದರೆಯ ಬಗ್ಗೆ ಪರಿಶೀಲನೆ ನಡೆಸಿ, ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿ ಅರ್ಧಗಂಟೆ ಕಳೆದರೂ ಸ್ಮಾರ್ಟ್‍ಸಿಟಿಯ ಎಂಜನಿಯರ್‍ಗಳು ಸ್ಥಳಕ್ಕೆ ಬಾರದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಜನಪ್ರತಿನಿಧಿಗಳು ಬೇಡ ಎಂದರೂ ಕಾಮಗಾರಿ ಮಾಡಿದವರು ಯಾರು, ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

      ಸ್ಮಾರ್ಟ್‍ಸಿಟಿ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ತೊಂದರೆಯಾಗಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಾಮಗಾರಿ ನಿರ್ವಹಿಸುತ್ತಿರುವುದು ಸ್ಪಷ್ಟವಾಗಿದ್ದು, ಸ್ಮಾರ್ಟ್‍ಸಿಟಿ ಎಂಜನಿಯರ್ ದರ್ಶನ್ ಅವರು ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ, ವಾಹನಗಳು ಓಡಾದಂತೆ ಕನಷ್ಠ ಕ್ರಮವನ್ನು ವಹಿಸಿಲ್ಲ, ಈ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

      ಈ ವೇಳೆ ಸ್ಥಳೀಯರಾದ ತಿಪ್ಪೇಸ್ವಾಮಿ ಜಗದೀಶ್, ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಸಿದ್ದರಾಜು, ಸೇರಿದಂತೆ ಇತರೆ ಇದ್ದರು.

(Visited 10 times, 1 visits today)