ತುಮಕೂರು:

       ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಕಳ್ಳತನಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಇದಕ್ಕೆ ತುಮಕೂರು ಗ್ರಾಮಾಂತರದ ಶಾಸಕರೂ ಸಾಥ್ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಬಿ.ಸುರೇಶ್ ಗೌಡ ಆರೋಪಿಸಿದರು.

      ಪತ್ರಿಕಾಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡಿದರು. ಸರಣಿ ಕಳ್ಳತನದ ಪ್ರಕಟರಣಗಳ ಪಟ್ಟಿ ತಯಾರಿಸಿ ಎಸ್ಪಿ ಅವರಿಗೂ ಕೊಟ್ಟಿದ್ದೇವೆ. ಪೊಲೀಸರು ಕಳ್ಳತನದ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿ, ಚಾರ್ಜ್‍ಶೀಟ್ ಹಾಕುತ್ತಿಲ್ಲ. ಕಾನೂನು ಬಾಹಿರ ಚಟುವಟಿಕೆಗಳು ಕಾಣುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.

        ಪಿಎಸ್‍ಐ  10 ಲಕ್ಷ, ಸಿಪಿಐ  15 ಲಕ್ಷ ಮತ್ತು ಡಿವೈಎಸ್ಪಿ  25 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ ಎಂಬ ಮಾತುಗಳನ್ನು ಪೊಲೀಸರೇ ಹೇಳುತ್ತಿದ್ದಾರೆ. ಲಂಚ ಕೊಟ್ಟು ಬಂದವರು ಪ್ರತಿ ತಿಂಗಳು ಶಾಸಕರಿಗೆ ಮಾಮೂಲಿ ಕೊಡಬೇಕು. ನಿಮ್ಮ ಕಷ್ಟಗಳನ್ನು ಶಾಸಕರಿಗೆ ಹೋಗಿ ಹೇಳಿ ಎಂದು ಹಣ, ಒಡವೆ ಕಳೆದುಕೊಂಡ ಸಂತ್ರಸ್ತರಿಗೆ ಪೊಲೀಸರು ಹೇಳುತ್ತಿದ್ದಾರೆ ಎಂದು ಬಿ.ಸುರೇಶ್ ಗೌಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

      ಮೂರು ವರ್ಷಗಳಿಂದ 200 ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಹೆಬ್ಬೂರಿನ ಇನ್‍ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಸರ್ಕಲ್ ಇನ್‍ಸ್ಪೆಕ್ಟರ್ ಕಳ್ಳತನಕ್ಕೆ ಸಹಕರಿಸುತ್ತಿದ್ದಾರೆ ಎಂದು ಹೆಸರು ಉಲ್ಲೇಖಿಸಿದರು.

(Visited 26 times, 1 visits today)