ತುಮಕೂರು: ಜಿಲ್ಲೆಯ ಪೊಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ೧೩೦ ಪ್ರಕರಣಗಳನ್ನು ಭೇದಿಸಿದ್ದು, ೫.೬೧ ಕೋಟಿ ಮೊತ್ತದ ಚಿನ್ನಾಭರಣ, ಕಾರು, ಬೈಕ್ ಹಾಗೂ ನಗದು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕಳೆದ ಫೆಬ್ರುವರಿಯಿಂದ ಈವರೆಗೆ ವಿವಿಧ ಪ್ರಕರಣಗಳಲ್ಲಿ ೧೭೦ ಕಳ್ಳರನ್ನು ಬಂಧಿಸಲಾಗಿದೆ. ಒಂದು ಕೊಲೆ ಪ್ರಕರಣ, ೩ ದರೋಡೆ, ೫ ಸುಲಿಗೆ, ೨೧ ಸರಗಳವು, ೩೮ ಮನೆ ಕಳವು, ೫೩ ಸಾಮಾನ್ಯ ಕಳ್ಳತನ ಸೇರಿದಂತೆ ೧೩೦ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಇಲ್ಲಿ ಮಂಗಳವಾರ ತಿಳಿಸಿದರು.
೪.೦೩ ಕೋಟಿ ಮೌಲ್ಯದ ೪.೩೧ ಕೆ.ಜಿ ಚಿನ್ನಾಭರಣಗಳು, ೭.೨೦ ಲಕ್ಷ ಬೆಲೆ ಬಾಳುವ ೭.೨೦೭ ಕೆ.ಜಿ ಬೆಳ್ಳಿ ಆಭರಣಗಳು, ೧.೧೧ ಕೋಟಿ ಮೊತ್ತದ ೯೯ ಬೈಕ್, ೪ ಕಾರು, ೨ ಟ್ರ್ಯಾಕ್ಟರ್, ಆಟೊ, ೩೬.೭೩ ಲಕ್ಷದ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದು, ೩ ಲಕ್ಷ ಮೌಲ್ಯದ ಜಾನುವಾರುಗಳನ್ನು ಪತ್ತೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತುಮಕೂರು ಉಪವಿಭಾಗದಲ್ಲಿ ಒಂದು ದರೋಡೆ, ೨ ಸುಲಿಗೆ, ೮ ಸರಗಳವು, ೭ ಮನೆ ಕಳ್ಳತನ ಪತ್ತೆಯಾಗಿದೆ. ಒಟ್ಟು ೪೮ ಮಂದಿಯನ್ನು ಬಂಧಿಸಿ ೧.೪೬ ಕೋಟಿ ವಸ್ತು ಜಪ್ತಿ ಮಾಡಲಾಗಿದೆ. ಕುಣಿಗಲ್ ವಿಭಾಗದಲ್ಲಿ ದರೋಡೆ, ಸುಲಿಗೆ, ೩ ಸರಗಳವು, ೧೦ ಮನೆ ಕಳ್ಳತನ ಭೇದಿಸಿದ್ದು, ೪೬ ಆರೋಪಿಗಳನ್ನು ಬಂಧಿಸಿ, ೧.೬೬ ಕೋಟಿ ಮೌಲ್ಯದ ಮಾಲು ಜಪ್ತಿಯಾಗಿದೆ. ಶಿರಾ ವಿಭಾಗದಲ್ಲಿ ಸುಲಿಗೆ, ೩ ಸರಗಳ್ಳತನ ಸೇರಿ ವಿವಿಧ ಪ್ರಕರಣಗಳಲ್ಲಿ ೧೩ ಮಂದಿ ಬಂಧಿಸಲಾಗಿದೆ. ೪೫.೧೧ ಲಕ್ಷ ಮೊತ್ತದ ವಸ್ತು ಜಪ್ತಿ ಮಾಡಲಾಗಿದೆ. ತಿಪಟೂರು ವಿಭಾಗದಲ್ಲಿ ಮಹಿಳೆ ಕೊಲೆ ಪ್ರಕರಣ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧುಗಿರಿ ವಿಭಾಗದಲ್ಲಿ ೪೮ ಮಂದಿ ಬಂಧಿಸಿ, ೧.೬೫ ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ವಾಹನ ನಿಲುಗಡೆ ನಿಷೇಧ: ನಗರದ ಬಿಜಿಎಸ್ (ಟೌನ್ಹಾಲ್) ವೃತ್ತದಿಂದ ಗಾಯಿತ್ರಿ ಚಿತ್ರಮಂದಿರದ ವರೆಗೆ ಬಿ.ಎಚ್.ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸುವ ಬಗ್ಗೆ ಚಿಂತನೆ ನಡೆದಿದೆ. ಆಟೊ ಹೊರತುಪಡಿಸಿ ಇತರೆ ವಾಹನಗಳ ನಿಲುಗಡೆ ನಿಷೇಧಿಸಲಾಗುತ್ತದೆ ಎಂದು ಅವರು ಹೇಳಿದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದ ಬಳಿ ಮುಂಗಡ ಹಣ ಪಾವತಿಸಿ ಆಟೊದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಲಾಗುವುದು. ಆಟೊ ನಿಲ್ದಾಣ ವ್ಯವಸ್ಥೆ ಸರಿಪಡಿಸಿದ ನಂತರ ಆಟೊಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಗೋಪಾಲ್, ಎಂ.ಎಲ್.ಪುರುಷೋತ್ತಮ್ ಇತರರು ಉಪಸ್ಥಿತರಿದ್ದರು.
ರಾಜೇಂದ್ರ ಹತ್ಯೆ ಯತ್ನ: ಮುಗಿಯದ ತನಿಖೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕೊಲೆಯತ್ನ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಕೆ.ವಿ.ಅಶೋಕ್ ತಿಳಿಸಿದರು. ಕೊಲೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ರಾಜೇಂದ್ರ ನೀಡಿದ ದೂರಿನ ಮೇರೆಗೆ ಮಾರ್ಚ್ ೨೮ರಂದು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ‘ಕೊಲೆ ಪ್ರಯತ್ನಕ್ಕೆ ಸಂಬAಧಿಸಿದAತೆ ನೀಡಿದ ಆಡಿಯೊ ಹಾಗೂ ಇತರೆ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು. ‘ಸಚಿವ ಕೆ.ಎನ್.ರಾಜಣ್ಣ ಮಾಡಿದ್ದ ಹನಿಟ್ರ್ಯಾಪ್ ಪ್ರಕರಣದಲ್ಲಿ ಹುರುಳಿಲ್ಲ ಸಾಕ್ಷಿಗಳು ಲಭ್ಯವಾಗಿಲ್ಲ’ ಎಂದು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ವರದಿ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಆ ಬಗ್ಗೆ ಎಫ್ಐಆರ್ ದಾಖಲಾಗಿರಲಿಲ್ಲ. ರಾಜೇಂದ್ರ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಹಂತದಲ್ಲಿದೆ’ ಎಂದರು.
ಹೋಟೆಲ್ಗೆ ರಾತ್ರಿ ೧ ಗಂಟೆವರೆಗೆ ಅವಕಾಶ: ನಗರ ಹಾಗೂ ಇತರೆಡೆಗಳಲ್ಲಿ ಮಧ್ಯರಾತ್ರಿ ೧ ಗಂಟೆ ವರೆಗೂ ಹೋಟೆಲ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಭದ್ರತೆ ಸುರಕ್ಷತೆ ಇರುವ ಸ್ಥಳಗಳಲ್ಲಿ ಸರ್ಕಾರದ ಹೊಸ ಆದೇಶದಂತೆ ೧ ಗಂಟೆ ವರೆಗೂ ಹೋಟೆಲ್ ನಡೆಸಬಹುದಾಗಿದೆ ಎಂದು ಕೆ.ವಿ.ಅಶೋಕ್ ಹೇಳಿದರು. ಅಸುರಕ್ಷಿತ ಭದ್ರತೆ ಬೆಳಕಿನ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಮಾತ್ರ ಹೋಟೆಲ್ಗಳನ್ನು ಮುಚ್ಚಿಸಲಾಗುತ್ತಿದೆ. ಉಳಿದೆಡೆಗಳಲ್ಲಿ ನಿಯಮ ಪಾಲಿಸಲಾಗುತ್ತಿದೆ ಎಂದರು.