
ಹುಳಿಯಾರು: ಮತದಾರರ ಪಟ್ಟಿಯನ್ನು ಅತ್ಯಂತ ನಿಖರ ಹಾಗೂ ನವೀಕೃತವಾಗಿಡುವ ಉದ್ದೇಶದಿಂದ, ಹುಳಿಯಾರು ಪಟ್ಟಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಇದರ ಅಂಗವಾಗಿ ನಿಯೋಜನೆಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಪಟ್ಟಣದಾದ್ಯಂತ ಮನೆ ಮನೆಗೆ ಭೇಟಿ ನೀಡಿ, ಮತದಾರರಿಗೆ ಅಗತ್ಯವಿರುವ ಗಣತಿ ನಮೂನೆ ಅರ್ಜಿಗಳನ್ನು (ಎನ್ಯೂಮರೇಷನ್ ಫಾರಂ) ವಿತರಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅರ್ಜಿ ಸಲ್ಲಿಸಲು ಅಧಿಕಾರಿಗಳ ಮನವಿ: ಮನೆ ಮನೆಗೆ ತೆರಳುತ್ತಿರುವ ಅಧಿಕಾರಿಗಳು ಸಾರ್ವಜನಿಕರಲ್ಲಿ ಗಣತಿ ನಮೂನೆಗಳನ್ನು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ, ನಿಖರವಾಗಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳು ಹಾಗೂ ಭಾವಚಿತ್ರವನ್ನು ಲಗತ್ತಿಸಿ ನಿಗದಿತ ಅವಧಿಯೊಳಗೆ ತಮಗೆ ಸಲ್ಲಿಸಬೇಕೆಂದು ಮನವಿ ಮಾಡುತ್ತಿದ್ದಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? : ಈ ವಿಶೇಷ ಪರಿಷ್ಕರಣೆಯ ಕುರಿತು ಬಿಎಲ್ಒ ರಂಗನಾಥ್ ಅವರು ಮಾಹಿತಿ ನೀಡಿ, ೧೮ ವರ್ಷ ತುಂಬಿದ ಹೊಸ ಮತದಾರರ ಹೆಸರನ್ನು ಪಟ್ಟಿಗೆ ಸೇರ್ಪಡೆ ಮಾಡಲು, ನಿಧನರಾದ ಮತದಾರರ ಹೆಸರನ್ನು ಕೈಬಿಡಲು, ಮನೆ ಖಾಲಿ ಮಾಡಿ ಬೇರೆಡೆ ವಲಸೆ ಹೋದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಹಾಗೂ ಮತದಾರರ ವೈಯಕ್ತಿಕ ವಿವರಗಳಲ್ಲಿ ಯಾವುದೇ ತಪ್ಪುಗಳಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಈ ಪ್ರಕ್ರಿಯೆಯಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಒಂದಕ್ಕಿAತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ, ನಿಯಮಾನುಸಾರ ಒಂದೆಡೆ ಮಾತ್ರ ಉಳಿಸಿಕೊಳ್ಳಲು ಸಹ ಈ ವೇಳೆ ಅವಕಾಶವಿದೆ ಎಂದು ವಿವರಿಸಿದರು.
ಸಾರ್ವಜನಿಕರ ಸಹಕಾರಕ್ಕೆ ಮುಖ್ಯಾಧಿಕಾರಿ ಕರೆ : ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಅವರು ಮಾತನಾಡಿ, “ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಎಲ್ಲ ಅರ್ಹ ಮತದಾರರು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಕರೆ ನೀಡಿದರು.
ರಸೀದಿ ಪಡೆದುಕೊಳ್ಳಲು ಸೂಚನೆ: ಪರಿಷ್ಕರಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ೨೦೨೦ ರ ಜೂನ್ ೧೬ ರವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿ ಮತದಾರರ ಮನೆಗೂ ಭೇಟಿ ನೀಡಿ ಗಣತಿ ನಮೂನೆಯನ್ನು ತಲುಪಿಸಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಮನೆಗೆ ಬಂದಾಗ ಸಾರ್ವಜನಿಕರು ಸೂಕ್ತವಾಗಿ ಸ್ಪಂದಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು ನೀಡುವಾಗ ಅಧಿಕಾರಿಗಳು ಕೊಡುವ ಎರಡು ಪ್ರತಿಗಳಲ್ಲಿ ಒಂದನ್ನು ಅಧಿಕಾರಿಗಳಿಗೆ ಹಿಂದಿರುಗಿಸಿ, ಮತ್ತೊಂದರಲ್ಲಿ ಅವರ ಸಹಿ ಪಡೆದು ಮತದಾರರು ರಸೀದಿಯಾಗಿ ತಮ್ಮ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಆರ್ಒ ಶೃತಿ ಬನಾರ, ಬಿಎಲ್ಒ ರಂಗನಾಥ್, ಬಿಎಲ್ಎ ರಾಜ್ಕುಮಾರ್ ಮತ್ತು ಸನತ್ ಹಾಗೂ ಇತರೆ ಪ್ರಮುಖರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

