
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯವನ್ನು ರಾಷ್ಟçಮಟ್ಟದಲ್ಲಿ ಕೀರ್ತಿಯ ಶಿಖರಕ್ಕೆ ಏರಿಸಿರುವ ಪ್ರೊ. ಎಂ. ವೆಂಕಟೇಶ್ವರಲು ಅವರ ಕಾರ್ಯ ವೈಖರಿ ಹೆಮ್ಮೆಯ ವಿಚಾರ. ಸರಳ ವ್ಯಕ್ತಿತ್ವ ಮತ್ತು ಶ್ರಮಜೀವಿ ಎಂಬ ಪದಗಳಿಗೆ ಅವರು ನಿದರ್ಶನವಾಗಿದ್ದಾರೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಶ್ಲಾಘಿಸಿದರು.
ನಗರದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ (ಪಾವಗಡ), ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ (ತುಮಕೂರು), ಶ್ರೀ ಶಿರಡಿ ಸಾಯಿ ಮಂದಿರ (ಆದರ್ಶ ನಗರ, ತುಮಕೂರು) ಹಾಗೂ ಪ್ರೊ. ಎಂ. ವೆಂಕಟೇಶ್ವರಲು ಅಭಿನಂದನಾ ಗ್ರಂಥ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಜು. ೧೭ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ಅವರ ಅಭಿನಂದನಾ ಸಮಾರಂಭ ಮತ್ತು ‘ಶಿಕ್ಷಣ ಸಿರಿ’ ಅಭಿನಂದನಾ ಗ್ರಂಥ ಲೋಕಾರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಕೇವಲ ಅಭಿನಂದನೆ ಸಲ್ಲಿಸುವುದಷ್ಟೇ ಅಲ್ಲ, ಗುಣಾಗ್ರಹಿಗಳಾಗಬೇಕು. ಸದಾ ಕೆಲಸಗಳಲ್ಲಿ ಮಗ್ನರಾಗಿರುವ ಪ್ರೊ. ವೆಂಕಟೇಶ್ವರಲು ಅವರ ಜೀವನ ಇತರರಿಗೆ ಆದರ್ಶವಾಗಿದೆ. ಎಐ ಕಾಲಘಟ್ಟದಲ್ಲೂ ಗುರು-ಹಿರಿಯರನ್ನು ಗೌರವಿಸುವ ಗುಣವನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಸುವ, ಒಳ್ಳೆಯ ನಾಯಕತ್ವದ ಗುಣಗಳನ್ನು ಇವರಲ್ಲಿ ಕಾಣಬಹುದು ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಮಾತನಾಡಿ, ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ, ಸ್ವಂತ ಶ್ರಮದಿಂದ ಕುಲಪತಿಗಳಾಗಿ ಹೊರಹೊಮ್ಮಿದವರು ವೆಂಕಟೇಶ್ವರಲು. ಅವರು ಸ್ನೇಹಮಯಿಯಾಗಿದ್ದು, ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುವುದರ ಜೊತೆಗೆ, ರಾಜಕಾರಣಿಗಳ ಒತ್ತಡವನ್ನೂ ಮೀರಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅವರ ಶ್ರಮ ವಿಕಸಿತ ಭಾರತದ ದೂರದೃಷ್ಟಿಯನ್ನು ಹೊಂದಿದೆ ಎಂದು ಪ್ರಶಂಸಿದರು.
ಅಭಿನAದನಾ ಗ್ರಂಥದ ಪ್ರಧಾನ ಸಂಪಾದಕರಾದ ಪ್ರೊ.ತಿಪ್ಪೆಸ್ವಾಮಿ ಜಿ. ಅವರು ಮಾತನಾಡಿ, “ಒ. ಅನಂತ ರಾಮಯ್ಯ ಅವರಿಂದ ಹಿಡಿದು ಇಂದಿನ ಪ್ರೊ. ವೆಂಕಟೇಶ್ವರಲು ಅವರವರೆಗೆ ವಿವಿಯನ್ನು ಕಟ್ಟಿದ ಕೀರ್ತಿ ಸಲ್ಲುತ್ತದೆ. ಜಿಲ್ಲೆಗೊಂದು ವಿವಿಯಾಗಿ ತುಮಕೂರು ವಿವಿಯನ್ನು ರಾಜ್ಯ ಮತ್ತು ದೇಶದಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದಿರುವುದು ವೆಂಕಟೇಶ್ವರಲು ಅವರ ಸಾಧನೆ. ಅನ್ನಪೂರ್ಣೇಶ್ವರಿ ಮಧ್ಯಾಹ್ನ ದಾಸೋಹ ಯೋಜನೆ ಆರಂಭಿಸಿ ವಿವಿಯ ಕಡೆಗೆ ಇಡೀ ದೇಶದ ಗಮನ ಸೆಳೆದಿದ್ದಾರೆ ಎಂದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ನನ್ನ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಾರ್ಯರೂಪಕ್ಕೆ ತರಲು ತುಮಕೂರು ವಿವಿ ಪೂರಕವಾಗಿತ್ತು. ನಡೆದಾಡುವ ದೇವರ ನೆಲದಲ್ಲಿ ಸೇವೆ ಸಲ್ಲಿಸಿದ್ದು ನನ್ನ ಸೌಭಾಗ್ಯ. ವಿಶ್ವವಿದ್ಯಾನಿಲಯವನ್ನು ಬರೀ ಕಟ್ಟಡಗಳಿಗಷ್ಟೇ ಸೀಮಿತಗೊಳಿಸದೆ, ಜ್ಞಾನ ಮತ್ತು ಸಂಶೋಧನೆಯ ಕೇಂದ್ರವನ್ನಾಗಿ ಮಾಡಲು ಶ್ರಮಿಸಿದ್ದೇನೆ. ನನ್ನ ಮೇಲಿದ್ದ ನಂಬಿಕೆಗೆ, ಜನಶಿರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶರಾದ ರತ್ನಾಕಲಾ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ವಿ. ರಾಮ್ ಪ್ರಸಾದ್, ಕರ್ನಾಟಕ ಆರ್ಯವೈಶ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ. ಜೆ. ಬಿ. ನಂದನ್ ಕುಮಾರ್ ಮಾತನಾಡಿದರು.
ತುಮಕೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಡಾ. ಸಿಬಂತಿ ಪದ್ಮನಾಭ ಅವರು ನಿರೂಪಿಸಿದರು. ಸಹಪ್ರಾಧ್ಯಾಪಕರಾದ ಡಾ. ಎಂ. ಎಸ್. ನಾಗರಾಜ್ ಸ್ವಾಗತಿಸಿದರು. ಅಧ್ಯಾಪಕರಾದ ಡಾ. ಅಜಯ್ ಕುಮಾರ್ ಎಂ. ವಿ. ವಂದಿಸಿದರು.

