
ತುಮಕೂರು: ತುಮಕೂರು ವಿವಿಯಲ್ಲಿ ದೇಹಕ್ಕೆ ಹಾಗೂ ಮೆದುಳಿಗೆ ಎರಡಕ್ಕೂ ಪ್ರಸಾದದ ರೂಪದಲ್ಲಿ ಆಹಾರ ಹಾಗೂ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮೀ ಜಪಾನಂದ ಜೀ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಅನ್ನ ಪೂರ್ಣೇಶ್ವರಿ ಮಧ್ಯಾಹ್ನದ ಭೋಜನ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಾತನಾಡಿ, ಇನ್ನು ಮುಂದೆ ವಾರದಲ್ಲೊಂದು ದಿನ ಸಿಹಿತಿನಿಸು ಹಾಗೂ ಮಜ್ಜಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಈ ಯೋಜನೆಯಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸುಧಾರಿಸಿದೆ. ಸುಸಂಸ್ಕೃತ ಪ್ರಜೆಯನ್ನು ರೂಪಿಸುವಲ್ಲಿ ನಮ್ಮ ಈ ಯೋಜನೆಯು ಮುಖ್ಯ ಪಾತ್ರ ವಹಿಸಿದೆ. ಇದರಿಂದಾಗಿ ಪ್ರವೇಶಾತಿ ಕೂಡ ಗಣನೀಯವಾಗಿ ಏರಿಕೆಯಾಗಿದೆ ಎಂದರು.
ಉದ್ಯಮಿಗಳಾದ ಡಾ. ಹೆಚ್. ಜಿ. ಚಂದ್ರಶೇಖರ್, ಡಾ. ಆರ್. ಎಲ್. ರಮೇಶ್ ಬಾಬು, ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ರಾದ ನಟರಾಜ್ ಶೆಟ್ಟಿ, ಘಟಕ ಕಾಲೇಜುಗಳ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್ ಎಂ. ಶೇಟ್ ಮತ್ತು ಪ್ರೊ. ಬಿ.ಕರಿಯಣ್ಣ, ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪರಶುರಾಮ್ ಕೆ. ಜಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

 
									 
					


