ಹುಳಿಯಾರು: ಗಣಿ ದಂಡದ ಮನೆ ನೀಡುವ ಗುರಿಯನ್ನು ಹೆಚ್ಚಿಸಲು ಒತ್ತಾಯಿಸಿ ಧರಣಿ ಕುಳಿತ ಘಟನೆ ಹುಳಿಯಾರು ಹೋಬಳಿಯ ಗಾಣದಾಳು ಗ್ರಾಮ ಪಂಚಾಯ್ತಿಯ ಗುರುವಾಪುರ ಗ್ರಾಮದಲ್ಲಿ ನಡೆದಿದೆ.
ಗುರುವಾಪುರದಲ್ಲಿ ಮೇ ೨೬ ರಂದು ಗಾಣಿಬಾಧಿತ ಪ್ರದೇಶ ಮನೆಗಳ ಫಲಾನುಭವಿಗಳ ಆಯ್ಕೆಗೆ ವಾರ್ಡ್ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಭೆಯಲ್ಲಿ ಗಲಾಟೆಯಾದ ಪರಿಣಾಮ ಸೋಮವಾರ ಮತ್ತೆ ಅಧ್ಯಕ್ಷ ಬಾಪು ಗಿರೀಶ್, ನೋಡಲ್ ಅಧಿಕಾರಿ ಪಶು ವೈದ್ಯಕೀಯ ಇಲಾಖೆ ನಿರ್ದೇಶಕ ರೆ.ಮಾ. ನಾಗಭೂಷಣ್, ಪಿಡಿಒ ಕೋಕಿಲಾ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್.ಶ್ರೀನಿವಾಸ್ ಸೇರಿದಂತೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಭೆ ಏರ್ಪಡಿಸಿದ್ದರು.
ಸಭೆಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ವೇತನ ನಿಧಿಯಿಂದ ಗಾಣಧಾಳು ಗ್ರಾಮ ಪಂಚಾಯಿತಿಗೆ ೫೩ ಮನೆಗಳನ್ನು ಮಂಜೂರಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಯಾಗಿ ಗುರುವಾರಪುರ ಮತ್ತು ಸೋಮನಹಳ್ಳಿ ಗ್ರಾಮಗಳು ಗಣಿಪ್ರದೇಶದ ಸಮೀಪವಿರುವದರಿಂದ ೨೫ ಮನೆಗಳನ್ನು ನೀಡುವಂತೆ ಒತ್ತಾಯಿಸಿದರು.
ನಿಯಮ ಮೀರಿ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನೋಡೆಲ್ ಅಧಿಕಾರಿ ತಿಳಿಸಿದರು. ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು ತೆರಳಿ ಮಾಹಿತಿ ನೀಡಿದರೂ ಒಪ್ಪದ ಗ್ರಾಮಸ್ಥರು ಅಧಿಕಾರಿಗಳಿಗೆ ಫೇರಾವ್ ಹಾಕಿದರು. ಸಂಜೆ ವೇಳೆಗೆ ಪರಿಸ್ಥಿತಿ ಬಿಗಾಡಾಯಿಸುವುದನ್ನು ಅರಿತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಅಧಿಕಾರಿಗಳಿಗೂ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದು ಮತ್ತೆ ಫಲಾನುಭವಿಗಳ ಆಯ್ಕೆ ಗೊಂದಲದ ಗೂಡಾಯಿತು.
ಕೆಂಕೆರೆ ಗ್ರಾಮ ಸಭೆ ಮುಂದೂಡಿಕೆ
ಗಾಣಿಬಾಧಿತ ಪ್ರದೇಶ ಮನೆಗಳ ಫಲಾನುಭವಿಗಳ ಆಯ್ಕೆಗಾಗಿ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯ್ತಿಯಿAದಲೂ ಸೋಮವಾರ ವಾರ್ಡ್ ಸಭೆ ಕರೆಯಲಾಗಿತ್ತು. ಆದರೆ ಆಂಭದಲ್ಲೇ ಗ್ರಾಪಂ ಅಧ್ಯಕ್ಷರು ಮತ್ತು ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆ ರದ್ದಾಗಿ ಮುಂದೂಡಲಾಯಿತು.
ಕರ ಪತ್ರದಲ್ಲಿ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಮಂಜುನಾಥ್ ಹಾಗೂ ಶಾಸಕರಾದ ಸಿ.ಬಿ.ಸುರೇಶ್ಬಾಬು ಇಬ್ಬರ ಹೆಸರನ್ನು ನಮೂದು ಮಾಡಿರುವುದು ಸರಿಯಲ್ಲ. ಇದರಿಂದ ನನ್ನ ಹಕ್ಕುಚ್ಯುತಿ ಆಗಿದೆ ಎಂದು ಅಧ್ಯಕ್ಷ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ ಗಣಿ ಪ್ರದೇಶದಿಂದ ೦.೫ ಕಿಮೀ ದೂರದಲ್ಲಿರುವ ಗ್ರಾಮಗಳಿಗೆ ಮೂಲಬೂತ ಸೌಲಭ್ಯಗಳನ್ನು ಕಲ್ಪಿಸದೆ ಹತ್ತನ್ನೆರಡು ಕಿಮೀ ದೂರದಲ್ಲಿರುವ ಗ್ರಾಮಗಳಿಗೆ ಗಣಿ ದಂಡದ ಹಣವನ್ನು ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದರು.
ಜೊತೆಗೆ ಗ್ರಾಮ ಸಭೆಯ ನಿಯಮದಂತೆ ಒಂದು ವಾರದ ಮುಂಚೆ ಪ್ರಚಾರ ಮಾಡಬೇಕು. ಆದರೆ ಎರಡ್ಮೂರು ದಿನಗಳ ಪ್ರಚಾರ ಮಾಡಿ ಏಕಾಏಕಿ ವಾರ್ಡ್ ಸಭೆ ನಡೆಸಿದ್ದಾರೆ. ಕೆಎಂಆರ್ಸಿ ನಿಯಮದ ಪ್ರಕಾರ ನಿವೇಶನ ರಹಿತರ ಪಟ್ಟಿ ಮಾಡಿ ಸೂಕ್ತ ನಿವೇಶನ ಗುರುತಿಸಿ ಅವರಿಗೆ ನೀಡಬೇಕಿದೆ. ಆದರೆ ನಿವೇಶನ ರಹಿತರ ಮನವಿಯನ್ನೇ ವಾರ್ಡ್ ಸಭೆಯಲ್ಲಿ ಪಡೆಯುತ್ತಿಲ್ಲ. ಇದು ನಿಯಮದ ಸ್ಪಷ್ಟ ಉಲ್ಲಘಂನೆಯಾಗಿದೆ ಎಂದು ಮೊದಲ ವಾರ್ಡ್ ಸಭೆಯಲ್ಲಿ ಆರೋಪಿಸಲಾಯಿತು. ಪರಿಣಾಮ ಸಭೆಯನ್ನು ಅಧ್ಯಕ್ಷರ ಸೂಚನೆಯ ಮೇರೆಗೆ ಪಿಡಿಒ ತಿಪ್ಪೇಸ್ವಾಮಿ ಮುಂದೂಡಿದ್ದಾರೆ.