ತುಮಕೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಉದ್ದೇಶ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಸುವುದರಲ್ಲಿ ರಾತ್ರಿ ಹಗಲಲೆನ್ನದೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಿಂದ ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೈದಾಳ, ಬೈರಸಂದ್ರ ಹಾಗೂ ಗೊಲ್ಲರಹಟ್ಟಿ ಚೋಳoಬಳ್ಳಿ ಗ್ರಾಮಗಳಲ್ಲಿ ಮತ್ತು ಸಿಮೆಂಟ್ ರಸ್ತೆ ಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆಯ ೫.೦೦ ಕೋಟಿ ರೂ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ ಸುರೇಶ್ ಗೌಡ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಗೂಳೂರು ಗ್ರಾಮದಿಂದ ಇತಿಹಾಸ ಪ್ರಸಿದ್ಧ ಚೆನ್ನಕೇಶವನ ನೆಲೆ ಕೈದಾಳ ಗ್ರಾಮದವರೆಗೆ ಸುಸಜ್ಜಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಎರಡು ಕೋಟಿ ಐವತ್ತು, ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದೇನೆ.
ಈ ರಸ್ತೆಯು ಐವತ್ತು ವರ್ಷಗಳಾದರೂ ಕೂಡ ಹಾಳಾಗಬಾರದು ಆ ರೀತಿಯಲ್ಲಿ ಸುಸಜ್ಜಿತವಾಗಿ ಉತ್ತಮ ಗುಣಮಟ್ಟದಿಂದ ಕಾಮಗಾರಿ ಅನುಷ್ಠಾನ ಮಾಡುವಂತೆ ಗುತ್ತಿಗೆದಾರನಿಗೆ ಮತ್ತು ಅಧಿಕಾರಿಗಳಿಗೆ ಶಾಸಕ ಬಿ. ಸುರೇಶ್ ಗೌಡ ಸೂಚಿಸಿದರು.
ಕೈದಾಳ ಗ್ರಾಮಕ್ಕೆ ಪ್ರತಿನಿತ್ಯ ನೂರಾರು ಯಾತ್ರಿಕರು ಪ್ರವಾಸಿಗರು ಮತ್ತು ಅಧ್ಯಯನಕ್ಕಾಗಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ ಇದೊಂದು ಇತಿಹಾಸ ಪ್ರಸಿದ್ಧ ಗ್ರಾಮವು ಕೂಡ ಹೌದು ಈ ಹಿನ್ನೆಲೆಯಲ್ಲಿ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದೆಂದು ಸೂಚಿಸಿದರು.
ಸುಸಜ್ಜಿತವಾಗಿ ನಿರ್ಮಾಣ ಮಾಡಿರುವ ಚೆನ್ನಕೇಶವ ಸ್ಮಾರಕ ಭವನಕ್ಕೆ ಅಂತಿಮ ಸ್ವರೂಪ ನೀಡುತ್ತಿದ್ದು ಶೀಘ್ರದಲ್ಲೇ ಜನೋಪಯೋಗಕ್ಕಾಗಿ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಹೇಳಿದರು.
ಹೊನ್ನುಡಿಕೆ ಗ್ರಾಮ ಪಂಚಾಯಿತಿ ಗೊಲ್ಲರಹಟ್ಟಿ ಹಾಗೂ ಚೋಳಂಬಳ್ಳಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ಶುದ್ಧ ಗಂಗೆ ನೀಡಲು ರೂ ೯೫ ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದ್ದೇನೆ.
ಈ ಅನುದಾನದಲ್ಲಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿಕೊಡಲಾಗುವುದೆಂದು ಹೇಳಿದರು.
ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಅನುಷ್ಠಾನ ಮಾಡುವಾಗ ಯಾವುದೇ ರಸ್ತೆಗೆ ತೊಂದರೆ ಆಗದಂತೆ ಪೈಪ್ ಲೈನ್ ತೆಗೆದುಕೊಂಡು ಹೋಗಬೇಕು ಎಂದು ಸೂಚಿಸಿದರು.
ಒಂದೇ ಒಂದು ರಸ್ತೆ ಹಾಳಾದರೂ ಕೂಡ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದರು.
ಹರಳೂರು ಗ್ರಾಮ ಪಂಚಾಯಿತಿ ಬಸವಣ್ಣನ ಗುಡಿ ಸರ್ಕಲ್ ನಿಂದ ಬೈರಸಂದ್ರದವರೆಗೆ ಸುಸಜ್ಜಿತ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಒಂದು ಕೋಟಿ ಅರವತ್ತು ಲಕ್ಷ ರೂಪಾಯಿಗಳ ಅನುದಾನವನ್ನು ಒದಗಿಸಿದ್ದೇನೆ ಈ ಅನುದಾನದಲ್ಲಿ ಉತ್ತಮವಾದ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದರು.
ನಿಗದಿತ ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಭಾಗದಲ್ಲಿ ಹಿರೇಹಳ್ಳಿ ಕೈಗಾರಿಕಾ ಪ್ರದೇಶ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿರುವುದರಿಂದ ಬೃಹತ್ ಗಾತ್ರದ ಲಾರಿಗಳು ವಾಹನಗಳು ಸಂಚರಿಸುತ್ತವೆ.
ಆದ್ದರಿಂದ ರಸ್ತೆ ಹಾಳಾಗದಂತೆ ಇಂಜಿನಿಯರ್ ಅಂದಾಜು ಪತ್ರಿಕೆಯಲ್ಲಿ ನೀಡಿರುವ ಸಿಮೆಂಟ್ ಕಬ್ಬಿಣ ಮತ್ತು ಜಲ್ಲಿ ಉತ್ತಮ ಗುಣಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬೇಕು ಮತ್ತು ಉತ್ತಮ ಗುಣಮಟ್ಟದ ಸಿಮೆಂಟ್ ಬಳಕೆ ಮಾಡುವಂತೆ ಶಾಸಕರು ಸೂಚಿಸಿದರು.
ಇದೆ ಸಂದರ್ಭದಲ್ಲಿ ಸಿಮೆಂಟ್ ಜೆಲ್ಲಿ ಮತ್ತು ಮರಳು ಮಿಶ್ರಣ ಮಾಡುವಾಗ ಗ್ರಾಮಸ್ಥರು ಗಮನಿಸಬೇಕು ಸಿಮೆಂಟ್ ಕಡಿಮೆ ಹಾಕಿದರೆ ಕೂಡಲೇ ನನ್ನ ಗಮನಕ್ಕೆ ತರಬೇಕು ಎಂದು ಹೇಳಿ ಶಾಸಕರು ದೂರವಾಣಿ ಸಂಖ್ಯೆ ನೀಡಿದರು.
ಕಾಮಗಾರಿ ಮುಗಿದ ತರುವಾಯ ಕ್ಯೂರಿಂಗ್ ಬಹಳ ಮುಖ್ಯ ಅನೇಕ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆಗಳು ಹಾಳಾಗಲು ಕ್ಯೂರಿಂಗ್ ಇಲ್ಲದಿರುವುದು ಕೂಡ ಮುಖ್ಯ ಕಾರಣವಾಗಿದೆ. ಉತ್ತಮ ರೀತಿಯಲ್ಲಿ ಕ್ಯೂರಿಂಗ್ ಮಾಡುವಂತೆ ಶಾಸಕರು ಗುತ್ತಿಗೆದಾರನಿಗೆ ಸೂಚಿಸಿದರು .
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವಕುಮಾರ್ ಸಿದ್ದೇಗೌಡ ಮುಖಂಡರಾದ ಶಂಕರ್, ಅಪ್ಪಿ ರಾಮಕೃಷ್ಣ, ಕೈದಾಳ ಉಮಾಶಂಕರ್, ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರುಗಳು, ಮುಖಂಡರುಗಳಾದ ಕಿಟ್ಟಣ್ಣ ರಾಜು, ಜಾಕೀರ್, ರಘು, ರಾಜೇಶ್, ಗಿರೀಶ್, ಹನುಮಂತರಾಯಪ್ಪ, ಮಂಜುಳಮ್ಮ ನಾಗರತ್ನಮ್ಮ,,ಬಸವರಾಜು, ಸುರೇಶ್,ಗೋಪಾಲ,ಅಣ್ಣಪ್ಪ ಹಾಗೂ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.