
ತುಮಕೂರು: ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ ೬ ಗಂಟೆಗೆ ಕಾಕಡ ಆರತಿ, ೭ ಗಂಟೆಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಅಲಂಕಾರ, ೮ ಗಂಟೆಗೆ ರುದ್ರಾಭಿಷೇಕ, ೧೦ ಗಂಟೆಗೆ ೧೦೮ ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನೆರವೇರಿತು. ಭಕ್ತಾದಿಗಳಿಗಾಗಿ ಬೆಳಿಗ್ಗೆಯಿಂದ ರಾತ್ರಿ ವರೆಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಾಮಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ ೧೦೮ ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ ೪ ವೇದ ಮತ್ತು ೧೮ ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು.
ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ನ್ಯೂಟನ್ನಗೆ ಭೂಮಿ ತಾಯಿಯೇ ಗುರುವಾಗಿ ಪರಿಣಿಮಿಸಿದಳು. ಗುರುವಿನ ಕೃಪೆ ಭಕ್ತ ಮತ್ತು ಭಗವಂತನ ನಡುವೆ ಇರುವಂತಹ ಸೇತುವೆ. ಈ ಸೇತುವೆ ಬಲಿಷ್ಠವಾದಷ್ಟು ಭಗವಂತನೆಡೆಗೆ ಹೋಗುವ ಪ್ರಯಾಣಕ್ಕೆ ಸಾರ್ಥಕತೆ, ಧನ್ಯತೆ ಇರುತ್ತದೆ ಎಂದು ಹೇಳಿದರು.
ಭಕ್ತ ಮತ್ತು ಭಗವಂತನ ನಡುವೆ ಗುರು ಇರಬೇಕು. ಕತ್ತಲಿನಿಂದ ಬೆಳಕಿನೆಡೆಗೆ ಮಾರ್ಗ ದರ್ಶನ ತೋರುವವನು ಗುರು. ದೇವರನ್ನು ನೋಡುವ ಮಾರ್ಗ ಸರಿಯಾಗಿರಬೇಕು. ರಾಮ ಕೃಷ್ಣ ನಗರದ ಭಕ್ತರೆಲ್ಲರೂ ಸೇರಿ ಸಾಯಿ ಬಾಬಾ ಮಂದಿರದಲ್ಲಿ ಜಿ.ಎಸ್. ಬಸವರಾಜು ನೇತೃತ್ವದಲ್ಲಿ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮನುಷ್ಯ ವಯಸ್ಸಾದ ನಂತರ ಧಾರ್ಮಿಕತೆಯತ್ತ ವಾಲುವುದು ಬಹಳ ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ತಾವು ಸಹ ಸಾಯಿಬಾಬಾ ಸೇವೆ ಮಾಡುತ್ತಾ ಧಾರ್ಮಿಕತೆಯತ್ತ ಸಾಗುತ್ತಿ ದ್ದೇನೆ. ಪ್ರತಿಯೊಬ್ಬರೂ ಸಹ ಬದುಕಿನಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆಷಾಢಮಾಸದಲ್ಲಿ ಬರುವ ಬಹಳ ಪವಿತ್ರವಾದ ಗುರು ಪೂರ್ಣಿಮೆಯನ್ನು ನಮ್ಮ ಸಾಯಿನಾಥ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಆ ಚರಿಸಿಕೊಂಡು ಬರಲಾಗುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿ ಗಳು ಮಂದಿರಕ್ಕೆ ಬಂದು ಸಾಯಿಬಾಬಾನ ದರ್ಶನ ಪಡೆಯುತ್ತಿದ್ದಾರೆ ಎಂದರು.
ಸಾಯಿಬಾಬಾ ಅವರು ಕನಸಿನಲ್ಲಿ ನನಗೆ ಬಂತು ಪ್ರೇರಣೆಯಾಗಿದ್ದರಿಂದ ದೇವಾಲಯ ನಿರ್ಮಿಸಲಾಯಿತು. ಬಾಬಾ ಹಳ್ಳಿ ಹಳ್ಳಿ ತಿರುಗಿ ಜನರ ಕಷ್ಯ ಕಾರ್ಪಣ್ಯಗಳಿಗೆ ಭಾಗಿಯಾಗುತ್ತಿದ್ದರು. ನೊಂದವರಿಗೆ ಸಾಂತ್ವನ ಹೇಳಿ, ಕಷ್ಟ ನಿವಾರಣೆ ಮಾಡುವಂತಹ ಕೆಲಸ ಮಾಡುತ್ತಿದ್ದರು. ಬಾಬಾ ಹೋದ ಹಳ್ಳಿಗಳಲೆಲ್ಲಾ ಸಸಿ ನೆಟ್ಟು ಬರುತ್ತಿದ್ದರು. ಹಾಗೆಯೇ ರಸ್ತೆಯ ಎರಡು ಬದಿಗಳಲ್ಲಿ ಸಸಿಗಳನ್ನು ನೆಡುವಂತೆ ಕರೆ ನೀಡುತ್ತಿದ್ದರು. ಅದರಂತೆ ರಸ್ತೆಯ ಎರಡು ಬದಿಗಳಲ್ಲಿ ಮರದ ಸಾಲುಗಳನ್ನು ನಾವು ನೋಡಬಹುದಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಹಲವಾರು ವರ್ಷಗಳ ಹಿಂದೆ ರಾಮಕೃಷ್ಣನಗರದಲ್ಲಿ ಸ್ಥಾಪನೆಯಾಗಿರುವ ಸಾಯಿ ಬಾಬಾ ಶಿರಡಿ ಮಂದಿರದಲ್ಲಿ ಪ್ರತಿ ವರ್ಷವೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆ ಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಶ್ರದ್ಧೆಯ ಸಂದರ್ಭದಲ್ಲಿ ತುಮಕೂರಿನ ನಾಗರಿಕರು ದೇವಾಲಯಕ್ಕೆ ಭೇಟಿ ನೀಡಿ ಬಾಬಾರವರ ಆಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.
ದೇವಾಲಯಕ್ಕೆ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಅಧಿಕಾರಿಗಳು, ಗಣ್ಯರು ಹಾಗೂ ಭಕ್ತಾದಿಗಳು ಭೇಟಿ ನೀಡಿ ಬಾಬಾ ರವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಗುರುಸಿದ್ದಪ್ಪ, ರಂಗನಾಥ್, ಶಿರಡಿಯ ಪ್ರಮೋದ್ ಮೇಡಿ ಮತ್ತಿತರರು ಪಾಲ್ಗೊಂಡಿದ್ದರು.
(Visited 1 times, 1 visits today)