
ಹುಳಿಯಾರು: ಅಧಿಕಾರಿಗಳ ಕೈಮುಗಿದು, ಕಾಲಿಗೆ ಬಿದ್ದು ಅತ್ತರೂ ಕರಗದ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ದಂಡು, ಹುಳಿಯಾರು ಹೋಬಳಿಯ ಮುತುಗದಹಳ್ಳಿ ಸರ್ವೇ ನಂಬರ್ ೩೧ ರಲ್ಲಿ ಬರುವ ಬುಕ್ಕಾಪಟ್ಟಣ ಅರಣ್ಯ ವಲಯದ ರೈತರ ಸಾಗುವಳಿಯನ್ನು ಪಟ್ಟು ಹಿಡಿದು ತೆರವು. ರೈತರು ಕಳೆದ ಎರಡ್ಮೂರು ದಶಕಗಳಿಂದ ರಕ್ತ ಬೆವರಿನಂತೆ ಸುರಿಸಿ ಬೆಳೆಸಿದ್ದ ಸಾವಿರಾರು ಅಡಿಕೆ ಹಾಗೂ ತೆಂಗಿನ ಮರಗಳನ್ನು ನೆಲಸಮಗೊಳಿಸಲಾಯಿತು.
ಮುತುಗದಹಳ್ಳಿ ಸರ್ವೇ ನಂಬರ್ ೩೧ ರ ಅಸಲಿ ಕಥೆ!: ೧೯೮೨ ರಲ್ಲಿ ಈ ಸರ್ವೇ ನಂಬರಿನಲ್ಲಿ ಒಟ್ಟು ೫೯ ಮಂದಿ ರೈತರಿಗೆ ಸಾಗುವಳಿ ಮಂಜೂರಾಗಿತ್ತು. ತದನಂತರ ೧೯೯೦ ರಲ್ಲಿ ಈ ಜಮೀನನ್ನು ಎಸ್.ಮಲ್ಲಿಕಾರ್ಜುನಯ್ಯ ೨ ಎಕರೆ ಹಾಗೂ ಭಾಗ್ಯಮ್ಮ ಎಂಬುವವರು ೪.೩೮ ಎಕರೆ ಶುದ್ಧ ಕ್ರಯಕ್ಕೆ ಖರೀದಿಸಿದ್ದರು. ಕಳೆದ ೨೦ ವರ್ಷಗಳಿಂದಲೂ ಮಲ್ಲಿಕಾರ್ಜುನಯ್ಯ, ಭಾಗ್ಯಮ್ಮ ಹಾಗೂ ಗೀತಮ್ಮ ಎಂಬ ಮೂವರು ರೈತರು ಮಾತ್ರ ಈ ಜಮೀನಿನಲ್ಲಿ ಅಡಿಕೆ, ತೆಂಗು ಮತ್ತು ಬಾಳೆ ಬೆಳೆದು, ಜೀವನ ನಿರ್ವಹಿಸುತ್ತಿದ್ದರು. ಇನ್ನುಳಿದ ರೈತರು ಈ ಭೂಮಿಯಲ್ಲಿ ಮಳೆಗಾಲಕ್ಕೆ ತಕ್ಕಂತೆ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.
ಬರಸಿಡಿಲಿನ0ತೆ ಅಪ್ಪಳಿಸಿದ ಅರಣ್ಯ ಇಲಾಖೆ ನೋಟಿಸ್: ಹೀಗೆ ಸುಮಾರು ೩೦-೪೦ ವರ್ಷಕ್ಕೂ ಹೆಚ್ಚು ಕಾಲದಿಂದ ನೆಮ್ಮದಿಯಾಗಿ ಉಳುಮೆ ಮಾಡುತ್ತಿದ್ದ ರೈತರಿಗೆ, ಏಕಾಏಕಿ “ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು” ಎಂದು ಬಂದ ನೋಟಿಸ್ ಬರ ಸಿಡಿಲಿನಂತೆ ಅಪ್ಪಳಿಸಿತ್ತು. ಮಲ್ಲಿಕಾರ್ಜುನಯ್ಯ, ಗೀತಮ್ಮ ಹಾಗೂ ಭಾಗ್ಯಮ್ಮ ಅವರ ಜಮೀನನ್ನು ಬಿಟ್ಟು, ಉಳಿದ ರೈತರ ಎಲ್ಲಾ ಜಮೀನಿಗೂ ಸುತ್ತಲೂ ಟ್ರಂಚ್ (ಕಂದಕ) ಹೊಡೆಯುವ ಮೂಲಕ ಅರಣ್ಯ ಇಲಾಖೆಯ ಬೌಂಡರಿಯನ್ನು ಫಿಕ್ಸ್ ಮಾಡಲಾಯಿತು. ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಪ್ರಕ್ರಿಯೆಯ ನಂತರ, ತೋಟ ಮಾಡಿಕೊಂಡಿದ್ದ ಈ ಮೂವರು ರೈತರ ಜಮೀನಿನ ಪಹಣಿ ಸೇರಿದಂತೆ ಒಟ್ಟು ೫೯ ರೈತರ ಜಮೀನನ್ನು ಕೂಡ ಇಂಡಿಕರಣ ಮಾಡಿ, ಸಂಪೂರ್ಣವಾಗಿ ಅರಣ್ಯ ಇಲಾಖೆಯ ಹೆಸರಿಗೆ ಪಹಣಿ ಕೂರಿಸಲಾಯಿತು.
ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಾಗಲಿಲ್ಲ: ಇದನ್ನು ಪ್ರಶ್ನಿಸಿ ಮಲ್ಲಿಕಾರ್ಜುನಯ್ಯ, ಗೀತಮ್ಮ ಮತ್ತು ಭಾಗ್ಯಮ್ಮ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ, ತಾಂತ್ರಿಕ ದಾಖಲೆಗಳ ಆಧಾರದ ಮೇಲೆ “ಈ ಭೂಮಿ ಅರಣ್ಯ ಇಲಾಖೆಗೆ ಸೇರಿದೆ” ಎಂದು ಕೋರ್ಟ್ ತೀರ್ಪು ನೀಡಿತು. ಕೋರ್ಟ್ ಆದೇಶದ ಬೆನ್ನಲ್ಲೇ ತೆರವು ಮಾಡಿಕೊಳ್ಳು ನೋಟಿಸ್ ನೀಡಲಾಗಿತ್ತು. ಆ ಸಂದರ್ಭದಲ್ಲಿ ೫ ತಿಂಗಳ ಕಾಲವಕಾಶ ಕೋರಿ ಬೀಸೋ ದೊಣ್ಣೆ ತಪ್ಪಿಸಿಕೊಂಡಿದ್ದರು. ಆದರೆ ಈಗ ಪೊಲೀಸದ ದಂಡಿನೊAದಿಗೆ ಅರಣ್ಯ ಇಲಾಖೆ ಬಂದು ಕೈಮುಗಿದು, ಕಾಲಿಗೆ ಬಿದ್ದು ಅತ್ತರೂ ಸಹ ಕೇಳದೆ ಈ ಬೃಹತ್ ತೆರವು ಕಾರ್ಯಾಚರಣೆ ನಡೆಸಿತು. ನೀವು ಇವತ್ತು ತೆರವುಗೊಳಿಸಿದರೆ, ಸಾಯಂಕಾಲದೊಳಗೆ ನಾವು ವಿಷ ಕುಡಿದು ಸಾಯುವ ಪರಿಸ್ಥಿತಿ ಬರುತ್ತದೆ. ಈಗಾಗಲೇ ಮನೆಯಲ್ಲಿ ಎಲ್ಲರೂ ರಾತ್ರಿಯಿಡೀ ನಿದ್ದೆಯಿಲ್ಲದೆ ಅಳುತ್ತಿದ್ದಾರೆ ಎಂದು ಕಣ್ಣೀರಿಟ್ಟರು. ಆದರೆ ಅಧಿಕಾರಿಗಳು ಮಾತ್ರ ಕರಗಲಿಲ್ಲ. ಬಡ ರೈತರ ಹಸಿರು ತೋಪುಗಳು ಕಣ್ಣೆದುರೇ ಧೂಳೀಪಟವಾಗುತ್ತಿದ್ದ ದೃಶ್ಯ ಮಾತ್ರ ಇಡೀ ಹುಳಿಯಾರು ಹೋಬಳಿಯನ್ನೇ ಕಣ್ಣೀರು ಹಾಕಿಸುವಂತಿತ್ತು.

ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ.: ಈ ಇಡೀ ಘಟನೆಯ ಹಿಂದೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಸುಮಾರು ೪೦ ವರ್ಷಗಳ ಹಿಂದೆಯೇ ಇದು ಅರಣ್ಯ ಪ್ರದೇಶ ಎಂದು ತಿಳಿದಿದ್ದರೂ ಸಹ, ಅಂದಿನ ಅಧಿಕಾರಿಗಳು ೧೯೮೨ ರ ಅವಧಿಯಲ್ಲಿ ರೈತರಿಗೆ ಸಾಗುವಳಿ ಮಂಜೂರಾತಿ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಅಂದು ಮಂಜೂರಾತಿ ನೀಡಿ, ಇಂದು ಅದೇ ಜಾಗವನ್ನು ‘ಅರಣ್ಯ ಪ್ರದೇಶ’ ಎಂದು ಘೋಷಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಯಾವ ನ್ಯಾಯ ಎಂಬುದು ರೈತರ ಪ್ರಶ್ನೆಯಾಗಿದೆ. ರೈತನಿಗೆ ಮಾತ್ರ ಮರ ಕಡಿದು ಬದುಕು ಬೀದಿಗೆ ತಳ್ಳುವ ಶಿಕ್ಷೆ. ಆದರೆ ಅಂದು ಮಂಜೂರು ಮಾಡಿದ್ದ ಅಧಿಕಾರಿಗಳಿಗೆ ಯಾವ ಶಿಕ್ಷೆ ಎಂದು ರೈತರು ಕೇಳುತ್ತಿದ್ದಾರೆ.
ಆರ್ಎಫ್ಓ ಕಾಲಿಗೆ ಬಿದ್ದ ರೈತರು: ಕಷ್ಟಪಟ್ಟು ಸಾಲಾಸೂಲ ಮಾಡಿ ೨೦ ವರ್ಷಗಳಿಂದ ಅಡಿಕೆತೆಂಗು ಬೆಳೆದಿದ್ದೇವೆ. ನಮ್ಮನ್ನು ಒಕ್ಕಲೆಬ್ಬಿಸಬೇಡಿ ಎಂದು ಕಣ್ಣಿರು ಹಾಕಿದರು. ಉಪಲೋಕಾಯುಕ್ತರೇ ಫಸಲು ಕಿತ್ತುಕೊಳ್ಳಲು ಅವಕಾಶ ಕೊಡಿ ಎಂದು ನಿಮಗೆ ಹೇಳಿದ್ದಾರೆ ಆದರೂ ತೆರವಿಗೆ ಮುಂದಾಗುವುದು ಸರಿಯಲ್ಲ ಎಂದರು. ಅದಕ್ಕೆ ಆರ್ಎಫ್ಓ ಚಂದನ್ ಅವರು ಇದು ಕೋರ್ಟ್ ಆದೇಶದ ಅನ್ವಯ ನಡೆಯುತ್ತಿರುವ ಪ್ರಕ್ರಿಯೆ. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ‘ಅರಣ್ಯ’ ಎಂದು ಘೋಷಿತವಾದ ಜಾಗವನ್ನು ಎನ್ಒಸಿ ಇಲ್ಲದೆ ಮಂಜೂರು ಮಾಡುವಂತಿಲ್ಲ. ನಮ್ಮ ಕರ್ತವ್ಯ ಪಾಲನೆ ಮಾಡಲು ಬಿಡಿ ಎಂದು ಅವರೂ ಸಹ ಕೇಳಿಕೊಂಡರು. ಕೊನೆಗೆ ಆರ್ಎಫ್ಒ ಚಂದನ್ ಅವರ ಕಾಲಿಗೆ ಐದಾರು ಮಹಿಳೆಯರು ಬಿದ್ದರು. ಆದರೆ ಇದಕ್ಕೂ ಮನ ಕರಗಲಿಲ್ಲ.
ಕಾನೂನು ಪಾಲನೆ ಅನಿವಾರ್ಯ: ಸ್ಥಳಕ್ಕೆ ಆಗಮಿಸಿದ್ದ ತಹಶೀಲ್ದಾರ್ ಮಮತಾ ಅವರ ಮುಂದೆ ರೈತರು ತಮ್ಮ ಆಕ್ರೋಶ ಹೊರಹಾಕಿದಾಗ, ಇದು ೫-೧೦ ವರ್ಷಗಳ ಹಿಂದೆ ಆಗಿದ್ದಲ್ಲ, ೩೫-೪೦ ವರ್ಷಗಳ ಹಿಂದೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಆಗಿರುವ ಲೋಪ. ಅಂದು ಮಂಜೂರಾತಿ ಕೊಡುವಾಗ ಅರಣ್ಯ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಬೇಕಿತ್ತು. ಈ ಹಿಂದೆ ೩ ರಿಂದ ೫ ತಿಂಗಳ ಕಾಲಾವಕಾಶ ಕೇಳಿದ್ರಿ. ಅದಕ್ಕೆ ಒಪ್ಪಿಗೆ ಕೊಟ್ಟಿದ್ವಿ ಎಂದರಾದರೂ ೫ ತಿಂಗಳಿಗೆ ಅಡಿಕೆ ಫಸಲು ಬರುವುದಿಲ್ಲ. ಆದ್ದರಿಂದ ಡಿಸೆಂಬರ್ವರೆಗೆ ವಿಸ್ತರಿಸಿಕೊಡಿ ಎಂದು ಮತ್ತೊಮ್ಮೆ ಮನವಿ ಮಾಡಿದರಾದರೂ ಹೈಕೋರ್ಟ್ ಆದೇಶ ಇರುವುದರಿಂದ ನಾವು ನಿಯಮ ಮೀರಿ ರೈತರಿಗೆ ಜಮೀನು ಬಿಡಲು ಅಥವಾ ಬದಲಿ ಜಾಗ ನೀಡಲು ಸಾಧ್ಯವಿಲ್ಲ ಎಂದು ತಹಶೀಲ್ದಾರ್ ಅಸಹಾಯಕತೆ ವ್ಯಕ್ತಪಡಿಸಿದರು.
ಕೊನೆಯ ಕ್ಷಣದವರೆಗೂ ಕಣ್ಣೀರಿಟ್ಟ ರೈತರು: ಬಅಧಿಕಾರಿಗಳು ಜೆಸಿಬಿ ಯಂತ್ರಗಳೊAದಿಗೆ ಮುನ್ನುಗ್ಗುತ್ತಿದ್ದಾಗ ರೈತರು ಕಣ್ಣೀರು ಹಾಕುತ್ತಾ ಕೊನೆಯ ವಿನಂತಿ ಮಾಡಿಕೊಂಡರು. “ನಾವು ಕಾನೂನು ಗೌರವಿಸುತ್ತೇವೆ. ಇವತ್ತೇ ಬೇಕಿದ್ದರೆ ನಮ್ಮ ತೆಂಗಿನ ಮರಗಳನ್ನು ಕತ್ತರಿಸಿಕೊಳ್ಳಿ, ಅದಕ್ಕೆ ನಾವೇ ಸಹಕರಿಸುತ್ತೇವೆ. ಆದರೆ ಅಡಿಕೆ ಮರಗಳನ್ನು ಮಾತ್ರ ಡಿಸೆಂಬರ್ ತಿಂಗಳವರೆಗೆ ಬಿಡಿ. ಕೊನೆಪಕ್ಷ ಈ ವರ್ಷದ ಫಸಲನ್ನಾದರೂ ಪಡೆದುಕೊಳ್ಳಲು ಬಿಡಿ ಈ ವರ್ಷದ ಫಸಲು ಸಿಕ್ಕರೆ ನಮ್ಮ ಮಕ್ಕಳ ಕಾಲೇಜು ವಿದ್ಯಾಭ್ಯಾಸಕ್ಕೆ ಹಣ ಸಿಗುತ್ತದೆ ಎಂದು ರೈತರು ಕೈಮುಗಿದು ಕೇಳಿಕೊಂಡರು.
ಜನವರಿ ೧ ಕ್ಕೆ ನಾವೇ ನಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ತಂದು ಇಡೀ ಜಾಗವನ್ನು ಕ್ಲೀನ್ ಮಾಡಿ ಇಲಾಖೆಗೆ ಕೊಡುತ್ತೇವೆ, ಬೇಕಿದ್ದರೆ ಲಿಖಿತವಾಗಿ ಬಾಂಡ್ ಬರೆದುಕೊಡುತ್ತೇವೆ ಎಂದು ರೈತರು ತಹಶೀಲ್ದಾರ್ ಹಾಗೂ ಆರ್ಎಫ್ಒ ಬೇಡಿಕೊಂಡರು. ಆದರೆ, ಅಧಿಕಾರಿಗಳು ರೈತರ ಈ ಕೊನೆಯ ಆಶಯಕ್ಕೂ ಮಣಿಯಲಿಲ್ಲ.
ಭಾರಿ ಸಿದ್ಧತೆಯೊಂದಿಗೆ ನಡೆದ ಮರಗಳ ಮಾರಣಹೋಮ: ಅರಣ್ಯ ಇಲಾಖೆಯು ಇಂಧನ ಅಭಾವವಾಗದಂತೆ ನೂರಾರು ಲೀಟರ್ ಪೆಟ್ರೋಲ್ ದಾಸ್ತಾನು ಇಟ್ಟುಕೊಂಡು, ೫-೬ ಜೆಸಿಬಿ ಹಾಗೂ ನೂರಕ್ಕೂ ಹೆಚ್ಚು ನುರಿತ ಕಾರ್ಮಿಕರು ೬೦ ಕ್ಕೂ ಹೆಚ್ಚು ಅತ್ಯಾಧುನಿಕ ಮರ ಕೊಯ್ಯುವ ಯಂತ್ರಗಳೊAದಿಗೆ ಕಾರ್ಯಾಚರಣೆಗೆ ಇಳಿದಿತ್ತು. ರೈತರು ಕಣ್ಣೀರು ಸುರಿಸುತ್ತಿದ್ದರೆ, ಕಳೆದ ೨೦-೨೫ ವರ್ಷಗಳಿಂದ ಸಾಕಿ ಸಲಹಿದ್ದ ಸಾವಿರಾರು ಅಡಿಕೆ ಮತ್ತು ತೆಂಗಿನ ಮರಗಳನ್ನು ಕ್ಷಣಾರ್ಧದಲ್ಲಿ ಧರೆಗುರುಳಿಸಿ, ಟ್ರಾ÷್ಯಕ್ಟರ್ಗಳಲ್ಲಿ ತುಂಬಿಕೊAಡು ಯಾವುದೇ ಕುರುಹು ಇಲ್ಲದಂತೆ ಸ್ಥಳವನ್ನು ಖಾಲಿ ಮಾಡಲಾಯಿತು.

