ಚಿಕ್ಕನಾಯಕನಹಳ್ಳಿ:
ಹೇಮಾವತಿ ನಾಲೆಯಿಂದ ತಾಲ್ಲೂಕಿನ 22 ಕೆರೆಗಳಿಗೆ ಕುಡಿಯುವ ನೀರಿಗಾಗಿ ನೀರುಣಿಸುವ ಯೋಜನೆಯ ಕಾಮಗಾರಿಯ ಒಂದು ಭಾಗ ಮುಗಿದಿದ್ದು ಪ್ರಾಯೋಗಿಕವಾಗಿ ನಾಲೆಯಲ್ಲಿ ನೀರು ಹರಿಸಲಾಗಿದೆ.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಸಾಸಲು ಕೆರೆಯವರೆಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಕಾಮಗಾರಿ ಈಚೆಗೆ ಭರದಿಂದ ನಡೆಯುತ್ತಿತ್ತು. ಈ ಕಾಮಗಾರಿ ಕೆಲತಿಂಗಳಹಿಂದಯೇ ಮುಗಿಯಬೇಕಿತ್ತು ಆದರೆ ಭೂ ಸಂತ್ರಸ್ಥರ ಪರಿಹಾರ, ಗುತ್ತಿಗೆದಾರರ ಸಮಸ್ಯೆ, ಲಾಕ್ಡೌನ್ ಹಾಗೂ ಮಳೆಯಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಇದೆಲ್ಲದರ ತೊಡಕುಗಳನ್ನು ಶೀಘ್ರವಾಗಿ ನಿವಾರಿಸಿ ಕಾಮಗಾರಿ ಅತ್ಯಂತ ತ್ವರಿತಗತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತೋರಿದ ಆಸ್ಥೆಯಿಂದ ಒಂದುಭಾಗದ ಕಾಮಗಾರಿ ಪೂರ್ಣಗೊಂಡಿದ್ದು ಈಗ ಸಾಸಲುಕೆರೆವರೆಗಿನ ಕಾಮಗಾರಿಯನ್ನು ಮುಗಿಸಲಾಗಿದೆ. ಇಂದು ನಾಲೆಯಿಂದ ನೀರನ್ನು ಪ್ರಾಯೋಗಿಕವಾಗಿ ಹರಿಯಬಿಡಲಾಗಿದ್ದು ನಾಲೆಯಲ್ಲಿ ನೀರಿನ ಹರಿಯುವಿಕೆಯ ಸಮಯದಲ್ಲಿ ಆಗುವ ಮಣ್ಣುಕುಸಿತ ಮುಂತಾದ ತೊಡಕುಗಳನ್ನು ನಾಲಾ ಅಧಿಕಾರಿಗಳು ಗಮನಿಸಿ ನೀರು ಹರಿಯುವ ನಡುವೆಯೇ ಕುಸಿದ ಮಣ್ಣು ಕಲ್ಲುಗಳನ್ನು ಜೆಸಿಬಿ ಯಂತ್ರದ ಮೂಲಕ ತೆಗೆಯಲಾಗುತ್ತಿತ್ತು.
ಈಗ ನೀತಿ ಸಂಹಿತೆ ಜಾರಿಯಿರುವುದರಿಂದ ಸಧ್ಯದಲ್ಲಿಯೇ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದೆನ್ನಲಾಗಿದೆ.
ಈ ಯೋಜನೆಗಳು ಸಂಪೂರ್ಣಗೊಂಡರೆ ತಾಲ್ಲೂಕಿನಸುಮಾರು ಅರ್ಧಭಾಗಕ್ಕೂ ಮಿಗಿಲಾಗಿ ಭೂ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಲಿದೆ. 20ವರ್ಷಗಳಿಂದಲೂ ಮಿಗಿಲಾಗಿ ನಡೆದು ಬಂದ ಹಲವು ಹೋರಾಟಗಳ ಫಲದಂತೆ ಕಾಮಗಾರಿ ಕುಂಟುತ್ತಾಸಾಗಿದ್ದು ಇದೀಗ ಕೈಗೂಡುತ್ತಿರುವುದು ತಾಲ್ಲೂಕಿನ ಜನತೆಗೆ ಹರ್ಷಮೂಡಿಸಿದೆ.