ಮಧುಗಿರಿ:
ಮಧುಗಿರಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಕೊರೊನಾ ವೈರಸ್ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮಧುಗಿರಿಯಲ್ಲಿ ವ್ಯಾಪಾರಸ್ಥರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ, ಬೇಕರಿ ಮತ್ತು ಸಣ್ಣಪುಟ್ಟ ಹೋಟೆಲ್ ಗಳು ಮತ್ತು ಬ್ಯಾಂಕುಗಳು ಹೊರತುಪಡಿಸಿ ಎಲ್ಲಾ ವ್ಯಾಪಾರಸ್ಥರು ಈ ಲಾಕ್ಡ್ ಡೌನ್ ನ್ನು ಬೆಂಬಲಿಸಿದ್ದಾರೆ ಮಾಂಸದ ಅಂಗಡಿಗಳು ಸಹ ತೆರೆಯದೆ ಬೆಂಬಲಿಸಿದ್ದು ವಿಶೇಷವಾಗಿದೆ.
ಕೆಎಸ್ಆರ್ಟಿಸಿ ಬಸ್ ಗಳು ಮಾತ್ರ ಸಂಚರಿಸಿದವು. ಮಳೆ ಬಂದಿದ್ದ ಕಾರಣ ರೈತರು ಗ್ರಾಮಿಣಭಾಗದಿಂದ ಅಗಮಿಸಿ ಬಿತ್ತನೆ ಕೆಲಸಕ್ಕೆ ಬೇಕಾಗುವ ರಸಗೊಬ್ಬರಗಳನ್ನು ಖರೀದಿಸಲು ಗೊಬ್ಬರದ ಅಂಗಡಿ ಗಳ ಮುಂದೆ ಜಮಾಯಿಸಿದ್ದರು.
ಮಧುಗಿರಿ ಪಟ್ಟಣದಲ್ಲಿ ಕರೋನಾ ಸೋಂಕು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಮೂರು ದಿನಗಳ ಕಾಲ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿವಿಧ ಸಂಘಟನೆಗಳು ತಹಶೀಲ್ದಾರ್ ಡಾ. ವಿಶ್ವನಾಥ್ ರವರಿಗೆ ಇತ್ತಿಚೆಗೆ ಮನವಿ ಸಲ್ಲಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಕರೋನ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ನಾಗರೀಕರು ಮತ್ತು ವ್ಯಾಪಾರಸ್ಥರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದ್ದು , ಭಯ ಭೀತರಾಗಿರುತ್ತಾರೆ. ಆದ್ದುದರಿಂದ ಮಧುಗಿರಿಯ ಎಲ್ಲಾ ಸಂಘ ಸಂಸ್ಥೆಗಳವರು ಸ್ವಯಂ ಪ್ರೇರಿತರಾಗಿ ಜೂ. 26, 27 ಮತ್ತು 28 ರಂದು ಒಟ್ಟು 3 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲು ಒಮ್ಮತದಿಂದ ಸಭೆಯಲ್ಲಿ ತೀರ್ಮಾನಿಸಿದ್ದು, ತದ ನಂತರ ಜೂ. 29 ರಿಂದ ಜುಲೈ 10 ನೇ ತಾರೀಖಿನ ತನಕ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಎಲ್ಲಾ ವಹಿವಾಟುಗಳನ್ನು ಮಾಡಿಕೊಂಡು, ನಂತರ ಮತ್ತೆ ಲಾಕ್ಡೌನ್ ಮಾಡಲು ನಾವುಗಳು ಸ್ವಯಂ ಪ್ರೇರಿತರಾಗಿ ಪಟ್ಟಣದ ಎಲ್ಲಾ ನಾಗರೀಕರು ಮತ್ತು ವ್ಯಾಪಾರಸ್ಥರು ಒಪ್ಪಿಕೊಂಡಿರುತ್ತೇವೆ ಇದಕ್ಕೆ ಮಧುಗಿರಿ ನಗರ ಧಾನ್ಯ ವರ್ತಕರು ಸಂಘ, ಕನ್ನಡಪರ ಸಂಘಟನೆಗಳು, ನಾಗರೀಕ ಸಮಿತಿ ಮತ್ತು ಇನ್ನಿತರ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದ್ದು, ಲಾಕ್ ಡೌನ್ ಮಾಡಿ ಮುಂದಿನ ದಿನಗಳಲ್ಲಿ ಮಧುಗಿರಿ ಪಟ್ಟಣದಲ್ಲಿ ಕೋರೊನ ಹಬ್ಬದಂತೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೋರಿಕೊಂಡಿದ್ದರು.
ಲಾಕ್ ಡೌನ್ ಗೆ ಸಹಕರಿಸಿದವರಿಗೆ ಮಧುಗಿರಿ ನಾಗರೀಕ ಹಿತರಕ್ಷಣಾ ಸಮಿತಿಯ ಪರವಾಗಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್. ಗಂಗಣ್ಣ, ತುಮುಲ್ ಮಾಜಿ ಅಧ್ಯಕ್ಷ ನಾಗೇಶ್ ಬಾಬು, ಪುರಸಭೆ ಸದಸ್ಯರಾದ ಮಂಜುನಾಥ್ ಆಚಾರ್, ಎಂ.ಆರ್. ಜಗನ್ನಾಥ, ಎಂ.ವಿ.ಗೋವಿಂದರಾಜು, ತಿಮ್ಮರಾಜು, ಚಂದ್ರಶೇಖರ್ ಬಾಬು, ಅರ್.ಎಲ್.ಎಸ್.ರಮೇಶ್.ರವಿಕಾಂತ್ ಕೃತಜ್ಞತೆಯನ್ನು ಸಲ್ಲಿಸಿದರು.