ತುಮಕೂರು:
ವ್ಯಾಟ್ಸ್ಆ್ಯಪ್ ಕರೆಗಳ ಮೂಲಕ ಉದ್ಯಮಿಯೊಬ್ಬರಿಗೆ ಬೆದರಿಕೆ ಕರೆ ಹಾಕಿ ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳನ್ನು ಎನ್ಇಪಿಎಸ್ ಪೊಲೀಸರು ಬಂಧಿಸಿದ್ದಾರೆ.
ನಗರದ ಮಂಡಿಯಲ್ಲಿ ಆಯಿಲ್ ಮಿಲ್ ಇಟ್ಟುಕೊಂಡಿರುವ ಉದ್ಯಮಿಯೊಬ್ಬರಿಗೆ ವ್ಯಾಟ್ಸ್ಆ್ಯಪ್ ಸಂದೇಶಗಳನ್ನು ಕಳುಹಿಸುವ ಮೂಲಕ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಸದರಿ ಉದ್ಯಮಿಯು ವಾಲ್ಮೀಕಿ ನಗರದ ತಮ್ಮ ಮನೆಗೆ ತೆರಳುವ ವೇಳೆ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಹಲ್ಲೆ ನಡೆಸಿ ಬೆದರಿಕೆಯನ್ನು ಸಹ ಹಾಕಿದ್ದರು.
ಈ ಸಂಬಂಧ ಹೊಸಬಡಾವಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳಾದ ಅಲಿ ಹುಸೇನ್(40), ಶಾನ್ ವಾಜ್ ಪಾಷ(40), ಮೆಹಬೂಬ್ ಖಾನ್ (40), ಸೈಯದ್ ಶವರ್(34), ಇವರನ್ನು ಬಂದಿಸಿದ್ದು, ಸ್ಟೈಲ್ ಇಮ್ರಾನ್ ಎಂಬ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ. ಇವನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೇಲ್ಕಂಡ ಆರೋಪಿಗಳು ಕೃತ್ಯಕ್ಕಾಗಿ ಬಳಸಿದ್ದ ಆರು ಮೊಬೈಲ್ ಮತ್ತು ಸಿಮ್ಗಳು, 1 ಆಟೋರಿಕ್ಷಾ, ಒಂದು ಮೊಪೆಡ್, ಬೈಕ್, ಮಚ್ಚು ಹಾಗೂ ಹಲವು ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಬೇಧಿಸಲು ಎಎಸ್ಪಿ ಉದ್ದೇಶ್ ಮತ್ತು ಡಿವೈಎಸ್ಪಿ ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ ಶ್ರಮಿಸಿದ ಸಿಪಿಐ ನವೀನ್.ಬಿ ಮತ್ತು ಪಿಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂಧಿಸಿದ್ದಾರೆ.