ತಿಪಟೂರು : 

      ಕಳೆದ 11 ದಿನಗಳಿಂದ ಸೂಕ್ತ ಅಂಡರ್ಪಾಸ್‍ಗಾಗಿ ನಗರದ ಕೆಂಚರಾಯ ನಗರ, ಬಿಳಿಕಲ್ಲ ನಗರ, ಹಳೆಪಾಳ್ಯದ ಸಾರ್ವಜನಿಕರು ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸುತ್ತಿದ್ದು, ಬಿ.ಜೆ.ಪಿ ಮುಖಂಡ ಲೋಕೇಶ್ವರ್ ಹಾಗೂ ರಾಷ್ಟ್ರೀಯ ಹೆದ್ದಾರಿ 206ರ ಯೋಜನಾಧಿಕಾರಿ ಶಿರೀಷ್ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಇನ್ನು 30 ದಿನಗಳಲ್ಲಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

      ಶಿವಮೊಗ್ಗ ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪತ ಕಾಮಾಗಾರಿಯು ನಡೆಯುತ್ತಿದ್ದು ಈ ಕಾಮಗಾರಿಯಲ್ಲಿ ನಿರ್ಮಾಣವಾಗಿರುವ ರಸ್ತೆಯಿಂದ ನಗರದ ಹಳೆಪಾಳ್ಯ ಹಾಗೂ ಕೆಂಚರಾಯನಗರ, ಬಿಳಿಕಲ್ಲುನಗರ ಹಾಗೂ ಗೆದ್ಲೇಹಳ್ಳಿಯ ಜನರು ರಸ್ತೆಯನ್ನು ದಾಟಲು ಸುಮಾರು 1.5 ಕಿಮೀ ಸುತ್ತಿಬಳಸಿ ಬರಬೇಕು ಹಾಗೂ ಶಾಲೆಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಸಾಧ್ಯವಾಗುವುದರ ಜೊತೆಗೆ ಕೂಲಿಕೆಲಸಕ್ಕೆ ಹೋಗುವ ಸಾಮಾನ್ಯ ಕೂಲಿಕಾರರು ಕಾಲ್ನಡಿಗೆಯಲ್ಲಿ ತಮ್ಮ ಕಾರ್ಯಸ್ಥಳವನ್ನು ತಲುಪುವ ವೇಳೆಗೆ ಸುಸ್ತಾಗುತ್ತಾರೆ. ಆದ್ದರಿಂದ ಇಲ್ಲಿ ನಮಗೆ ಅಂಡರ್ಪಾಸ್ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಕಳೆದ 11 ದಿನಗಳಿಂದ ಧರಣಿ ನಡೆಸುತ್ತಿದ್ದರು. ಈ ಸ್ಥಳಕ್ಕೆ ಶಾಸಕ ಬಿ.ಸಿ.ನಾಗೇಶ್, ಮಾಜಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಷಡಕ್ಷರಿ, ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್, ಸಮಾಜಸೇವಕ ಕೆ.ಟಿ.ಶಾಂತಕುಮಾರ್ ಸಹ ಭೇಟಿನೀಡಿ ಪ್ರತಿಭಟನೆ ನಡೆಯುವವರೆಗೂ ಊಟ ತಿಂಡಿ ಮಾಡಿಸುವುದಾಗಿ ತಿಳಿಸಿದ್ದರು.
206 ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಶಿರಿಷ್ ಗಂಗಾಧರ್ ಮಾತನಾಡಿ, ನಿಮ್ಮ ಸಮಸ್ಯೆ ನಮಗೆ ತಿಳಿಯುತ್ತದೆ ನಾನು ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ನಿಮ್ಮ ಸಮಸ್ಯೆಯನ್ನು ತಿಳಿಸುತ್ತೇನೆಂದು ತಿಳಿಸಿದರು.

      ಬಿ.ಜೆ.ಪಿ ಮುಖಂಡ ಲೋಕೇಶ್ವರ್ ಮಾತನಾಡಿ, ಸರ್ಕಾರ 8ನೇ ತರಗತಿಗೆ ಬೈಸಿಕಲ್ ನೀಡಿದೆ ಆದರೆ ಇನ್ನು ಚಿಕ್ಕಮಕ್ಕಳು ಶಾಲೆಗೆ ಹೋಗಲು ತಾಯಿಯೊಂದಿಗೆ ಇಲ್ಲ ತಂದೆಯೊಂದಿಗೆ ಹೋಗುವ ಸಂದರ್ಭದಲ್ಲಿ ರಸ್ತೆಯನ್ನು ಸುತ್ತಿಕೊಂಡು ಬರುವ ವೇಳೆಗೆ ಅರ್ಧ ದಿನ ಕಳೆದು ಹೋಗುತ್ತದೆ. ಇನ್ನು ಕೂಲಿ ಕಡಿತವಾಗುತ್ತದೆ ನಿಮ್ಮ ಸಮಸ್ಯೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರರ ಅಧಿಕಾರಿಗಳಿಗೆ ಯೋಜನಾಧಿಕಾರಿಗಳು ತಿಳಿಸಲಿದ್ದಾರೆ. ಅವರು ಸಹ ನಿಮ್ಮ ಬಗ್ಗೆ ಒಲವು ತೋರಿದ್ದು ಸಂತೋಷದಾಯಕವಾದ ಸುದ್ದಿ ಬರುವ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

(Visited 7 times, 1 visits today)