ತುಮಕೂರು :

     ಕೋವಿಡ್ 2ನೇ ಅಲೆ ಹೆಚ್ಚುತ್ತಿದ್ದು, ನಗರ ಪ್ರದೇಶದಲ್ಲೆ ಕೋವಿಡ್ ಹರಡುತ್ತಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಚೌಡಪ್ಪ ಸೂಚಿಸಿದರು.

      ಜಿಲ್ಲಾ ಪಂಚಾಯತಿಯಲ್ಲಿ ಆರ್. ಚೌಡಪ್ಪ ಅಧ್ಯಕ್ಷತೆಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಬೆಂಗಳೂರು ತುಮಕೂರು ನಡುವೆ ಓಡಾಡುವರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿದ್ದು, ಕೋವಿಡ್ ವಾರಿಯರ್ಸ್ ಶ್ರಮವಹಿಸುವಂತೆ ಸೂಚಿಸಿದರು.

     ಸಾರ್ವಜನಿಕರು ಸಹ ಮದುವೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಎಚ್ಚರಿಕೆ ವಹಿಸಬೇಕು, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸುವ ಮೂಲಕ ಕೋವಿಡ್ ಅಲೆ ತಡೆಯಲು ಸಹಕರಿಸುವಂತೆ ಕೋರಿದರು. ಖಾಸಗಿ ಶಾಲೆಗಳು ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಶಾಲೆಗಳ ವಿರುದ್ಧ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

       ಜಿ.ಪಂ.ಸದಸ್ಯ ಕೆಂಚಮಾರಯ್ಯ ಅವರು ಮಾತನಾಡಿ ಕೋವಿಡ್ ಸಂದ ರ್ಭದಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ಸಂಗ್ರಹ ಮಾಡುತ್ತಿದ್ದು, ಇದನ್ನು ನಿಯಂತ್ರಿಸುವಂತೆ ಸೂಚನೆ ನೀಡಿದರು. ಜಿ.ಪಂ.ಸದಸ್ಯೆ ಮಂಜುಳ ಅವರು ಮಾತನಾಡಿ ಎಸ್ ಡಿಎಂಸಿಯಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಿ, ಪೋಷಕರ ಸಲಹೆ ಮೇರೆಗೆ ಎಸ್ಡಿಎಂಸಿ ನೇಮಕ ಮಾಡುವಂತೆ ಹೇಳಿದರು, ಗುಬ್ಬಿ ಸದಸ್ಯ ಜಗನ್ನಾಥ ಅವರು ಮಾತನಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರಕ್ಕೆ ಬರುತ್ತಿದ್ದು, ವಿ.ಆರ್.ಎಸ್ ಪಡೆಯಲು ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ವಿ.ಆರ್.ಎಸ್ ನೀಡಬಾರದು ಎಂದು ಸೂಚಿಸಿದರು.

      ಶ್ರೀನಿವಾಸ ಶಾಲೆಯಲ್ಲಿ ಮೂವರು ಶಿಕ್ಷಕರು ವಿ.ಆರ್.ಎಸ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ, ಮಕ್ಕಳಿಗೆ ಪಾಠ ಮಾಡಲು ಬರುತ್ತಿಲ್ಲ, ಕೊಳಗೇರಿ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಿದ್ದು, ಆ ಶಿಕ್ಷಕರ ವಿಆರ್ ಎಸ್ ಒಪ್ಪಿಕೊಳ್ಳದೇ, ಮಕ್ಕಳಿಗೆ ಪಾಠ ಮಾಡಲು ಅನುವು ಮಾಡಿಕೊಡಬೇಕೆಂದು ಸೂಚಿಸಿದರು.

      ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಚೌಡಪ್ಪ ಮಾತನಾಡಿ, ಸಂಬಂಧಪಟ್ಟ ಶಿಕ್ಷಕರಿಗೆ ವಿ.ಆರ್.ಎಸ್. ಸೌಲಭ್ಯ ದೊರೆಯಬೇಕೆಂದರೆ ಪಾಠ ಮಾಡುವಂತೆಕೈಗೊಳ್ಳಲಾಗಿಕು, ಡಿಡಿಪಿಐ ಅವರು ವೈಯಕ್ತಿಕವಾಗಿ ಪ್ರಕರಣ ತೆಗೆದುಕೊಂಡು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.

       ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶಿರಾ ತಾಲ್ಲೂಕು ಹಿಂದುಳಿದಿದೆ, ಶಿರಾ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸಬೇಕು ಎಂದು ಹೇಳಿದರು, ಮಧುಗಿರಿ ಡಿಡಿಪಿಐ ಮಾತನಾಡಿ ಮಕ್ಕಳು ಮತ್ತು ಪೋಷಕರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗಿದ್ದು, ಶಿರಾ ತಾಲ್ಲೂಕಿನ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಮಾರ್ಗದರ್ಶನ ಮಾಡಲಾಗಿದೆ ಎಂದರು.

      ಶಿರಾ ತಾಲ್ಲೂಕಿನ ಗ್ರಾಮಾಂತರ ಶಾಲೆಗಳಲ್ಲಿ ಉತ್ತಮ ಫಲಿತಾಂಶವಿದೆ, ನಗರ ಪ್ರದೇಶದಲ್ಲಿ ಫಲಿತಾಂಶ ಕುಸಿದಿದೆ, ಶಾಲಾ ಹಂತ, ಬಿಇಒ ಹಂತದಲ್ಲಿ ಮಾರ್ಗಸೂಚಿಗಳನ್ನು ನಿಗದಿ ಪಡಿಸಿದ್ದು, ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಉತ್ತಮ ಫಲಿತಾಂಶಕ್ಕೆ ಶ್ರಮಿಸಲಾಗುವುದು ತಿಳಿಸಿದರು.

     ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ದೊರಕಿದೆ, ವ್ಯವಸ್ಥಿತವಾಗಿ ಶಿಕ್ಷಣ ಇಲಾಖೆ ಕಾರ್ಯನಿರ್ವಹಿಸಬೇಕಾದರೆ ರಾಜಕೀಯ, ಗುಂಪುಗಾರಿಕೆಯಲ್ಲಿ ತೊಡಗಿರುವ ಶೇ.10 ರಷ್ಟು ಶಿಕ್ಷಕರಿಗೆ ನಿಯಂತ್ರಣ ಹಾಕಬೇಕಿದೆ ಎಂದರು.

     ಶಾಲೆಗಳಿಗೆ ಭೇಟಿ ನೀಡುವ ಬಿಇಒ ಮತ್ತು ಡಿಡಿಪಿಐಗಳು ಭೌತಿಕ ಪ್ರಗತಿ ಪರಿಶೀಲಿಸುವುದರೊಂದಿಗೆ, ಶಾಲೆಗಳಲ್ಲಿ ಪಠ್ಯಕ್ರಮದಲ್ಲಿ ಆಗಿರುವ ಪ್ರಗತಿ ಸಾಧಿಸಬೇಕು, ಫಲಿತಾಂಶ ಗಳಿಸುವುದಷ್ಟೇ ಮುಖ್ಯವಲ್ಲ, ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದರು. ತುಮಕೂರು ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ದೊರಕಿಸಬೇಕು ಎಂದು ಹೇಳಿದರು.

      ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಗಳ ಕೊಠಡಿ ಲಭ್ಯತೆ ಹಾಗೂ ದುಸ್ಥಿತಿ ಬಗ್ಗೆ ಪಟ್ಟಿ ಮಾಡುವಂತೆ ಡಿಡಿಪಿಐಗಳಿಗೆ ಸೂಚಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ ಅವರು, ಶಾಲೆಗಳ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಶೀಘ್ರ ಸಲ್ಲಿಸಿದರೆ ಶಿಕ್ಷಣ ಸಚಿವರಿಗೆ ಪತ್ರ ಬರೆದು, ಅನುದಾನ ನೀಡಲು ಒತ್ತಾಯಿಸಲಾಗುವುದು ಎಂದು ಸೂಚನೆ ನೀಡಿದರು.

      ಸರ್ಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಹಿಂದೆ ಭೂಮಿ ನೀಡಿದ್ದ ವಂಶಸ್ಥರು ಈಗ ಭೂಮಿಗಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈಗಾಗಲೇ ಪಿಡಿಒಗಳಿಗೆ ಸೂಚನೆ ನೀಡಿದ್ದು, ಸ್ವಾಧೀನದಲ್ಲಿರುವ ಭೂಮಿಗೆ ದಾಖಲೆಯನ್ನು ಸಿದ್ಧಪಡಿಸುವಂತೆ ಡಿಡಿಪಿಐ ಹಾಗೂ ಬಿಇಒಗಳಿಗೆ ಉಪ ಕಾರ್ಯದರ್ಶಿ ರಮೇಶ್ ಅವರು ಸೂಚನೆ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಪ್ರೋತ್ಸಾಹಧನವೇ ಬಿಡುಗಡೆಯಾಗಿಲ್ಲ, ಹೊಸ ವ್ಯವಸ್ಥೆ ತರುವ ಮುನ್ನ ಹಳೆಯ ಅನುದಾನ ಬಿಡುಗಡೆ ಮಾಡಿಸಬೇಕು ಎಂದ ಅವರು, ಸಿಆರ್ ಪಿ ಗಳು ಎಸ್ಸಿಎಸ್ಟಿ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ವಿಷಯಗಳ ಬೋಧನೆಗೆ ಕ್ರಮವಹಿಸುವಂತೆ ಜಿ.ಪಂ.ಸದಸ್ಯ ಕೆಂಚಮಾರಯ್ಯ ಸಲಹೆ ನೀಡಿದರು.

      ಜಿಲ್ಲೆಯ 2400 ಶಾಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು, ಗ್ರಾ.ಪಂನಲ್ಲಿ 15ನೇ ಹಣಕಾಸು ಆಯೋಗ ನಿಧಿ ಖಾಲಿಯಾಗುವ ಮೊದಲು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಎಂಜನಿಯರ್ ಹಾಗೂ ಬಿಇಒಗಳಿಗೆ ಚೌಡಪ್ಪ ಸೂಚನೆ ನೀಡಿದರು.

       ನೀರು ಬರದೇ ಯಾವುದೇ ಕಾರಣಕ್ಕೂ ಅನುದಾನ ಬಿಡುಗಡೆಗೆ ಸಹಿ ಹಾಕಬಾರದು, ನೀರು ಬರದೇ ಹೋದರೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯರೇ ಹೊಣೆ ಹೊರಸದಸುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಶಾಲೆಗಳಿಗೆ ಮೈದಾನ ಮತ್ತು ಕಾಪೌಂಡ್ ನಿರ್ಮಾಣ, ಅಂಕಣ ನಿರ್ಮಾಣಕ್ಕೆ ನರೇಗಾದಲ್ಲಿ ಅವಕಾಶವಿದ್ದು, ಸಂಬಂಧಪಟ್ಟ ಅಧ್ಯಕ್ಷರಿಗೆ ಮನವಿ ಸಲ್ಲಿಸುವಂತೆ ಉಪ ಕಾರ್ಯದರ್ಶಿ ರಮೇಶ್ ಸೂಚನೆ ನೀಡಿದರು. ಸಭೆಯಲ್ಲಿ ಸದಸ್ಯರಾದ ಗಾಯಿತ್ರಿದೇವಿ, ಮಂಜುಳಾ, ಜಗನ್ನಾಥ, ತಿಮ್ಮಯ್ಯ, ಜಿ.ಪಂ. ಕಾರ್ಯದರ್ಶಿ ರಮೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರಿದ್ದರು.

(Visited 6 times, 1 visits today)