ಕೊರಟಗೆರೆ


ನಾಡ ಪ್ರಭು ಕೆಂಪೇಗೌಡರು ಬೆಂಗಳೂರು ನಗರವನ್ನು ಅಚ್ಚುಕಟ್ಟಾಗಿ ಮತ್ತು ಮುಂದಾಲೋಚನೆಯಾಗಿ ನಿರ್ಮಾಣ ಮಾಡಿ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡಿ ದೇಶಕ್ಕೆ ಮತ್ತು ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ ತಿಳಿಸಿದರು.
ತಾಲ್ಲೂಕಿನ ಕೋಳಾಲದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಾಗೂ ಡಾ. ಜಿ. ಪರಮೇಶ್ವರ ಅವರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಂಪೇಗೌಡರು ಒಂದು ಜನಾಂಗಕ್ಕೆ ಸೀಮಿತವಾದ ಮಹಾನ್ ವ್ಯಕ್ತಿಯಲ್ಲ. ಅವರ ಶ್ರಮ ಮತ್ತು ಕರ್ತವ್ಯ ನಿಷ್ಟೆಯಿಂದ ಎಲ್ಲಾ ವರ್ಗದ ಜನರು ನೆಮ್ಮದಿಯಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಳ್ಳುವಂತಾಗಿದೆ. ಇಂದಿನ ತಂತ್ರಜ್ಞಾನವನ್ನು ಕೆಂಪೇಗೌಡರು ಅಂದೇ ಆಲೋಚಿಸಿ ಜನರ ವಾಣಿಜ್ಯ ವ್ಯವಹಾರಗಳಿಗೆ ವಿವಿಧ ಪೇಟೆಗಳನ್ನು ಕೃಷಿಕರಿಗೆ ಮಾರುಕಟ್ಟೆಗಳನ್ನು ಜನವಸತಿಕೇಂದ್ರಳನ್ನು ನಿರ್ಮಿಸಿದರು. ಇದರೊಂದಿಗೆ ಹಲವು ಕೆರೆಕಟ್ಟೆಗಳು, ನಾಲೆಗಳನ್ನು ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಿ, ಸದೃಢ ಬೆಂಗಳೂರನ್ನು ರಚಿಸಿದರು. ಅಂತಹ ಮಹಾನ್ ವ್ಯಕ್ತಿಯ ಶ್ರಮದಿಂದ ಬೆಂಗಳೂರಿನಲ್ಲಿ ಪ್ರಪಂಚದ ಎಲ್ಲಾ ಐಟಿ, ಬಿಟಿ ಕಂಪನಿಗಳು ವಿವಿಧ ವಾಣಿಜ್ಯ ಕಂಪನಿಗಳು ಬಂದು ರಾಜ್ಯಕ್ಕೆ ಆರ್ಥಿಕ ಶಕ್ತಿಯನ್ನು ನೀಡುತ್ತಿವೆ. ಬೆಂಗಳೂರಿನಲ್ಲಿ ಇಂದು ಸುಮಾರು 1.30 ಕೋಟಿ ಎಲ್ಲ ವರ್ಗ, ಬಾಷೆ ಜನರು ವಾಸಿಸುತ್ತಿದ್ದಾರೆ.
ದಿನಕ್ಕೆ 25 ಲಕ್ಷ ಜನ ಬಂದು ಹೋಗುತ್ತಿದ್ದಾರೆ. ಅವರಿಗೆಲ್ಲಾ ಬೆಂಗಳೂರು ಆಶ್ರಯ ನೀಡಿದ್ದು, ಇದಕ್ಕೆ ಮುಖ್ಯ ಕಾರಣ ಕೆಂಪೇಗೌಡ ಎಂದರು.
ಭಾರತವು ವಿಶ್ವದ ಆರ್ಥಿಕತೆಯಲ್ಲಿ ಬಲಿಷ್ಟತೆಹೊಂದಿ 4ನೇ ಸ್ಥಾನದತ್ತ ಇದೆ. ಭಾರತೀಯ ಸೇನೆ ವಿಶ್ವದ ಬಲಿಷ್ಟ ಸೇನೆಗಳಲ್ಲಿ ಒಂದಾಗಿದೆ. ಸ್ವತಂತ್ರ ನಂತರ ಕಡು ಬಡತನದಲ್ಲಿದ್ದು, ಮೂಲಭೂತ ಸೌಕರ್ಯಗಳಿಲ್ಲದೇ ಆರ್ಥಿಕತೆ, ಸಾಕ್ಷರತೆ, ನೀರಾವರಿ ಯೋಜನೆಗಳಿಲ್ಲದೇ ಸೊರಗುತ್ತಿದ್ದ ದೇಶವನ್ನು ಕಾಂಗ್ರೆಸ್ ಪಕ್ಷವು ಅಂತಹ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದು ಬಹಳಷ್ಟು ಶ್ರಮವಹಿಸಿ ದೇಶವನ್ನು ಬಲಿಷ್ಟಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ದೇಶದ ಎಲ್ಲಾ ಧರ್ಮ, ಜಾತಿ ಜನರು ಒಟ್ಟು ಇರಬೇಕಾದರೆ ಕಾಂಗ್ರೆಸ್ ಪಕ್ಷದ ಜ್ಯಾತ್ಯಾತೀತ ತತ್ವ ಮುಖ್ಯ ಕಾರಣವಾಗಿದೆ. ಅಂತಹ ಪಕ್ಷವನ್ನು ಹಲವರು ಟೀಕಿಸುತ್ತಿದ್ದಾರೆ. ಆದರೆ ಜನರಿಗೆ ಕಾಂಗ್ರೆಸ್ ಪಕ್ಷದ ತ್ಯಾಗ, ಬಲಿದಾನ ತಿಳಿದಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವಾಲೆ ಚಂದ್ರಯ್ಯ, ಎ.ಡಿ.ಬಲರಾಮಯ್ಯ, ಆರ್.ಎಸ್.ರಾಜಣ್ಣ, ಸುರೇಶ, ವೆಂಕಟೇಶಮೂರ್ತಿ, ಕೆಂಪಣ್ಣ, ಪಂಚಾಕ್ಷರಯ್ಯ, ಬಿಎಂಸಿ ಚಂದ್ರು, ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜಯಮ್ಮ, ಶೈಲಜ, ಕವಿತಾ, ಗ್ರಾ.ಪಂ. ಸದಸ್ಯರಾದ ಅಶ್ವತ್ಥ್, ಸುರೇಶ್, ದೇವರಾಜು, ಪಂಚಾಕ್ಷರಯ್ಯ, ಸತ್ಯಣ್ಣ, ಕೃಷ್ಣಪ್ಪ ಇತರರು ಇದ್ದರು.

(Visited 1 times, 1 visits today)