ತುಮಕೂರು: 

      ಕುರಿಗಾಹಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಆತ ಮೇಯಿಸುತ್ತಿದ್ದ ಕುರಿಗಳಿಗೂ ಕೂಡ ಕ್ವಾರಂಟೈನ್ ಮಾಡುವಂತಹ ನಿರ್ಧಾರಕ್ಕೆ ತುಮಕೂರು ಜಿಲ್ಲಾಡಳಿತ ಬಂದಿದೆ.

      ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದಲ್ಲಿ 40 ಕುರಿಗಳನ್ನು ಒಂದೆಡೆ ಕೂಡಿ ಹಾಕಲಾಗಿದೆ. ಕುರಿಗಳಿಗೆ ಮೇಯಲು ಹೊರಗಡೆ ಬಿಡದಂತೆ ನಿರ್ಧರಿಸಲಾಗಿದೆ.

      ಈಗಾಗಲೇ ಸೋಂಕಿತ ಕುರಿಗಾಹಿಯನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಈತ ಕಾಯುತ್ತಿದ್ದ ಕುರಿಗಳಲ್ಲಿ ಕೊರೊನಾ ವೈರಸ್ ವಿಭಿನ್ನ ಸ್ವರೂಪದಲ್ಲಿ ಇರುವ ಸಾಧ್ಯತೆಗಳಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕುರಿಗಳ ಸ್ವ್ಯಾಬ್ ತೆಗೆದು ಪರೀಕ್ಷೆಗೆಂದು ಭೋಪಾಲ್​​ನಲ್ಲಿರುವ ಲ್ಯಾಬ್​ಗೆ ಕಳುಹಿಸಲು ನಿರ್ಧರಿಸಲಾಗಿದೆ.

ಕುರಿ ಮಾಂಸ ಸೇವಿಸುವವರಿಗೆ ಎಚ್ಚರಿಕೆ :

     ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

      ಸಾಮಾನ್ಯವಾಗಿ ಕುರಿಗಳ ಮೂಲಕ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಕೂಡ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರಿಗಳ ಸ್ವ್ಯಾಬ್ ಸ್ಯಾಂಪಲ್​​ಗಳ ವರದಿ ಬಂದ ನಂತರವೇ ಕುರಿಗಳನ್ನು ಮೇಯಲು ಗುಂಪಿನಲ್ಲಿ ಬಿಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

(Visited 37 times, 1 visits today)