ತುಮಕೂರು:

      ಇದೇ ನನ್ನ ಕೊನೆಯ ಚುನಾವಣೆಯಾಗಿದ್ದರಿಂದ ಕ್ಷೇತ್ರದ ಮತದಾರರು ನನ್ನ ‘ಕೈ’ ಹಿಡಿದು ಪಾರ್ಲಿಮೆಂಟ್‍ಗೆ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ನಾನೆಂದೂ ಚಿರಋಣಿ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದುವರೆಗೂ ನಾನು 8 ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಿದ್ದೇನೆ, ನನಗೂ ವಯಸ್ಸಾಗುತ್ತಿದೆ. ಆದ್ದರಿಂದ ಇದೇ ಕೊನೆಯ ಅವಧಿ ಎಂದು ಸ್ಪಷ್ಟಪಡಿಸಿದರು. ನೀವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಎಸ್‍ಬಿ ಮೋದಿ ಸರ್ಕಾರದಲ್ಲಿ 78 ವಯಸ್ಸು ದಾಟಿದ ಯಾರಿಗೂ ಸಚಿವ ಸ್ಥಾನ ನೀಡಿಲ್ಲ, ನನಗೂ 78 ವಯಸ್ಸು ಮೀರಿದೆ. ಆದ್ದರಿಂದ ನಾನು ಸಚಿವ ಸ್ಥಾನದಿಂದ ವಂಚಿತನಾಗಿದ್ದೇನೆ ಎಂದು ನುಡಿದರು.

      ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೊಟಗೊಂಡಿದೆ ಎಂಬ ಪ್ರಶ್ನೆಗೆ ರಾಜ್ಯದಲ್ಲಿ ಹೊಂದಾಣಿಕೆಯಿದ್ದರೂ ಜಿಲ್ಲೆಯ ಮಟ್ಟದಲ್ಲಿ ಇನ್ನೂ ಹೊಂದಾಣಿಕೆಯಾಗಿಲ್ಲ, ಜೆಡಿಎಸ್‍ನವರದ್ದು ಒಂದು ದಾರಿ, ಕಾಂಗ್ರೆಸ್‍ನವರದ್ದು ಮತ್ತೊಂದು ದಾರಿಯಂತಾಗಿದೆ. ನನ್ನ ಗೆಲುವಿಗೆ ಕಾಂಗ್ರೆಸ್‍ನವರು ಸಹಕರಿಸಿದ್ದಾರೆ ಎಂಬ ಹೇಳಿಕೆ ತಳ್ಳಿ ಹಾಕುವಂತಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರ ಬೆಂಬಲದ ಬಗ್ಗೆ ಪ್ರಶಂಸಿದಿದರು. ಮಧುಗಿರಿಯಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ, ಈ ಬಗ್ಗೆ ಅಲ್ಲಿನ ಜೆಡಿಎಸ್ ಶಾಸಕರು ಅಲ್ಲಿ ಹೋಗಿ ಸಮಸ್ಯೆ ಬಗ್ಗೆ ಗಮನ ಹರಿಸದ ಕಾರಣ ಅಲ್ಲಿನ ಜನ ರೊಚ್ಚಿಗೆದ್ದು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಹೇಳಿದರು.

 

(Visited 14 times, 1 visits today)