ತುರುವೇಕೆರೆ:
ಶೀಘ್ರದಲ್ಲೇ ಎನ್.ಬಿ.ಸಿ. ಹೇಮಾವತಿ ನಾಲೆಯ ಡಿ-26 ಉಪನಾಲೆಯ ಮೂಲಕ ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ತಾಲೂಕಿನ ಎರದಹಳ್ಳಿ ಸಮೀಪವಿರುವ ಹೇಮಾವತಿ ನಾಲೆಯ ಡಿ-26 ಉಪನಾಲೆಯ ಸ್ಥಳ ಪರಿಶೀಲನೆಯನ್ನು ಹೇಮಾವತಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿ ಮಾತನಾಡಿದರು.
ಸುಮಾರು 15ವರ್ಷಗಳ ನಂತರ ಹೇಮಾವತಿ ನಾಲೆಯ ಉಪನಾಲೆ ಡಿ-26 ನಾಲೆಯ ಮೂಲಕ ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ, ಹರಳಕೆರೆ, ಇಟ್ಟಿಗೆಹಳ್ಳಿ, ನರೀಗೆಹಳ್ಳಿ, ಮಲ್ಲೂರು, ಯರದಹಳ್ಳಿ ಕೆರೆಗಳಿಗೆ ನೀರು ಹರಿಸುವ ಸಂಬಂಧ ಸ್ಥಳ ಪರಿಶೀಲನೆ ಮಾಡಿದ್ದು, ನೀರು ಹರಿಸುವುದರಿಂದ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜಲ ಅಭಿವೃದ್ಧಿ ಹೊಂದಲಿದೆ. ಇದು ಸ್ಥಳೀಯ ರೈತರುಗಳ ಹಲವು ವರ್ಷಗಳ ಕನಸಾಗಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಈಗಾಗಲೆ ಹೇಮಾವತಿ ಇಲಾಖೆಯ ಅಧಿಕಾರಿಗಳಿಗೆ ಉಪನಾಲೆಯಲ್ಲಿ ಬೆಳೆದಿರುವ ಜಂಗಲ್ ತೆರವುಗೊಳಿಸಲು ಸೂಚಿಸಲಾಗಿದೆ ನಾಲೆಯಲ್ಲಿ ಸರಾಗವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದರ ಜೊತೆಗೆ ಇದೇ ತಿಂಗಳ 24ರಿಂದ ಈ ಭಾಗದ ಕೆರೆಗಳಿಗೆ ನೀರನ್ನು ಹರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಸೂಪರ್ ಡೆಂಟ್ ಇಂಜಿನಿಯರ್ ವರದರಾಜು, ಹಾಗೂ ಅಧಿಕಾರಿಗಳು ಸ್ಥಳೀಯ ರೈತರುಗಳು ಇದ್ದರು.