ತುಮಕೂರು: ರೈತರು ಬರ ಪರಿಸ್ಥಿತಿ ಸಂದರ್ಭದಲ್ಲಿ ಕೃಷಿಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಪ್ರದೇಶ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ ಅವರು ಸಲಹೆ ನೀಡಿದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ಇಲಾಖೆ, ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಜಿಲ್ಲಾ ಕೃಷಿಕ ಸಮಾಜ ಹಾಗೂ ಇನ್ಸ್ಟಿಟ್ಯೂಷನ್ ಆಫ್ ಅಗ್ರಿಕಲ್ಚರಲ್ ಟೆಕ್ನಾಲಜಿಸ್ಟ್÷್ಸ, ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ರೈತರಿಗಾಗಿ ಆಯೋಜಿಸಲಾಗಿದ್ದ ಬರ ನಿರ್ವಹಣೆ, ಪರ್ಯಾಯ ಬೆಳೆ ಯೋಜನೆ, ಸಾವಯವ/ನೈಸರ್ಗಿಕ ಕೃಷಿ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು, ರೈತರ ಜ್ಞಾನ ಮತ್ತು ಸಿದ್ಧತೆಯನ್ನು ಹೆಚ್ಚಿಸಲು, ಸೂಕ್ತ ಪರ್ಯಾಯ ಬೆಳೆಗಳನ್ನು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲು, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಹಾಗೂ ಸುಸ್ಥಿರ ಕೃಷಿ ಉತ್ಪಾದನೆ ಮತ್ತು ಕೃಷಿ ವ್ಯವಸ್ಥೆಯ ಸ್ಥಿತಿಸ್ಥಾಪಕತೆಯನ್ನು ಹೆಚ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರಲ್ಲದೆ, ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವದ ಬಗ್ಗೆ ವಿವರಿಸಿದರು.
ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ: ತುಷಾರ್ ಕಾಂತಿ ಬೆಹೆರಾ ಅವರು ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿ ಕುರಿತು ರೈತರಿಗೆ ಸಲಹೆ ಮತ್ತು ಮಾರ್ಗದರ್ಶನ ನೀಡಿದರಲ್ಲದೆ, ತಡವಾದ ಮುಂಗಾರಿಗೆ ಕೃಷಿ ನಿರ್ವಹಣಾ ಕ್ರಮಗಳ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು.
ಐಎಟಿ ಅಧ್ಯಕ್ಷ ಡಾ: ಎ.ಬಿ. ಪಾಟೀಲ್ ಮಾತನಾಡಿ, ಸಮಗ್ರ ಕೃಷಿ ಪದ್ಧತಿ ಹಾಗೂ ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಪರ್ಯಾಯ ಬೆಳೆಗಳ ಮಹತ್ವವನ್ನು ವಿವರಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷö್ಮಣ್ ಎಸ್. ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು ಹಾಗೂ ರೈತರು ಬೆಳೆ ವಿಮಾ ಯೋಜನೆಗೆ ನೋಂದಾಯಿಸಿಕೊಳ್ಳುವAತೆ ರೈತರಲ್ಲಿ ಮನವಿ ಮಾಡಿದರು.
ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಹಾಗೂ ಹಣ್ಣು ವಿಭಾಗದ ತಜ್ಞ ಡಾ: ಶಂಕರನ್ ಹಾಗೂ ಹಿರೇಹಳ್ಳಿಯ ಕೆವಿಕೆ ಮುಖ್ಯಸ್ಥ ಡಾ: ಲೋಗನಂದನ್ ಅವರು ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.
ಡಾ: ರಮೇಶ್, ಡಾ: ವೆಂಕಟಗೌಡ ಹಾಗೂ ಡಾ: ಜಗದೀಶ್ ಬರ ನಿರ್ವಹಣೆ, ಪರ್ಯಾಯ ಬೆಳೆಗಳು, ಸಾವಯವ/ನೈಸರ್ಗಿಕ ಕೃಷಿ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಯ ವಿವಿಧ ಆಯಾಮಗಳ ಕುರಿತು ರೈತರಿಗೆ ತಾಂತ್ರಿಕ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕೃಷಿ ವಿಜ್ಞಾನಿ ಹಾಗೂ ಕೃಷಿ ತಜ್ಞರಿಂದ ತಾಂತ್ರಿಕ ಅಧಿವೇಶನಗಳನ್ನು ಏರ್ಪಡಿಸಿ ಕೆವಿಕೆ ಆವರಣದಲ್ಲಿ ಹಲಸಿನ ಸಸಿಗಳನ್ನು ನೆಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎನ್. ಸಿ. ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಅಶ್ವತ್ಥ ನಾರಾಯಣ, ಚಿದಾನಂದಸ್ವಾಮಿ, ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕ ವಿನಯ್ ಕೆ. ಹಾಗೂ ಸಿಬ್ಬಂದಿ ಸೇರಿದಂತೆ ಇತರ ಕೃಷಿ ತಜ್ಞರು ಹಾಗೂ ಜಿಲ್ಲೆಯ ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(Visited 1 times, 1 visits today)





