ತುಮಕೂರು: ಚಿನ್ನದ ಪದಕ ಪಡೆಯುವುದು ಮುಖ್ಯವಾದದ್ದಲ್ಲ, ಚಿನ್ನದಂತ ಗುಣ ಇರಬೇಕು. ಜೀವನದಲ್ಲಿ ಪದವಿ,ಅಂಕ ಪಡೆಯುವುದು ಶಿಕ್ಷಣವಲ್ಲಾ ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೇ ಶಿಕ್ಷಣ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಶ್ರಾಂತ ನಿರ್ದೇಶಕರು, ಖ್ಯಾತ ವಾಗ್ಮಿಗಳು ಹಾಗೂ ಸಾಹಿತಿಗಳಾದ ಡಾ. ಕೆ.ಪಿ. ಪುತ್ತೂರಾಯ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ “ಶಿಕ್ಷಣ- ಯುವಜನತೆ ಮತ್ತು ರಾಷ್ಟ್ರ ನಿರ್ಮಾಣ”ವಿಷಯದ ಕುರಿತಾದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಶಿಕ್ಷಣ ವ್ಯವಸ್ಥೆಯಲ್ಲಿ ಪಾಠ ಮುಗಿದ ನಂತರ ಪರೀಕ್ಷೆ ನಡೆಸಲಾಗುತ್ತದೆ ಆದರೆ ನಿಜ ಜೀವನದಲ್ಲಿ ಪರೀಕ್ಷೆಯಾದ ಮೇಲೆ ಪಾಠ ಕಲಿಯುತ್ತಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ಶಿಕ್ಷಣ ಮಾತ್ರ ದೊರೆಯುತ್ತಿದ್ದು ಮೌಲ್ಯಾಧಾರಿತ ಶಿಕ್ಷಣವಿಲ್ಲದಂತಾಗಿದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲ, ಇಲ್ಲಿ ಯಾರು ನಿಷ್ಪ್ರಯೋಜಕರಲ್ಲ, ಯಾರು ಪರಿಪೂರ್ಣರಲ್ಲ ಎನ್ನುವ ಎರಡು ಸೂತ್ರಗಳು ತಿಳಿದಿದ್ದರೆ ಸಾಕು. ಕೊಠಡಿಯಲ್ಲಿ ಕುಳಿತು ಕಲಿಯುವ ಶಿಕ್ಷಣದ ಜೊತೆಗೆ ಆರೋಗ್ಯ ಶಿಕ್ಷಣ, ಆಧ್ಯಾತ್ಮ ಶಿಕ್ಷಣ, ಪರಿಸರ ಶಿಕ್ಷಣ, ಸಂವಹನ ಶಿಕ್ಷಣ ಕಲಿಯುವುದು ಅವಶ್ಯಕವಾಗಿದೆ ಎಂದರು.
ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಆಚಾರ- ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶದ ಸಂಸ್ಕೃತಿ, ಸಂಪತ್ತು ಎಂದರೆ ದೇಶದ ಬಹುಮಹಡಿ ಕಟ್ಟಡಗಳು, ಮೆಟ್ರೋಗಳಲ್ಲಾ ದೇಶಾಭಿಮಾನ ತಾಯ್ನಾಡನ್ನು ಪ್ರೀತಿಸುವುದು, ಹೆತ್ತವರ ರಕ್ಷಣೆ, ರೈತ ಮತ್ತು ಸೈನಿಕರನ್ನು ಗೌರವಿಸುವುದಾಗಿದೆ. ಅದರ ಜೊತೆಗೆ ವಿದ್ಯಾರ್ಥಿಗಳು ಪೋಷಕರ ಕನಸನ್ನು ನನಸು ಮಾಡುವ ಜವಾಬ್ದಾರಿ ಹೊತ್ತು ಸಮಾಜದ ಆಸ್ತಿ ಆಗುವುದರ ಜೊತೆಗೆ ದೇಶದ ಸಂಪತ್ತಾಗಬೇಕು ಎಂದು ಕಿವಿಮಾತನ್ನು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಜಪಾನಂದಜಿ ಮಹಾರಾಜ್ ಅವರು ಸಂಸ್ಕಾರ ಎನ್ನುವುದು ಮನೆಯಿಂದಲೇ ಬಂದಿರಬೇಕು. ವಿದ್ಯಾರ್ಥಿಗಳಲ್ಲಿ ವಿದ್ಯೆಯ ಜೊತೆಗೆ ವಿನಯವು ಇರಬೇಕಾಗಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ವಿದ್ಯಾರ್ಥಿಗಳಿಗೆ ಪ್ರೇರಣಾ ಉಪನ್ಯಾಸ ನೀಡುತ್ತಿರುವ ಉದ್ದೇಶ ಆದರ್ಶ ವ್ಯಕ್ತಿಗಳು, ವಿದ್ವಾಂಸರ ಪ್ರೇರಣೆಯ ಮಾತುಗಳಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಪ್ರಸನ್ನ ಕುಮಾರ್ ಕೆ., ತುಮಕೂರು ವಿ.ವಿ.ಯ ಪ್ರೇರಣ ಉಪನ್ಯಾಸ ಕಾರ್ಯ ಸಮಿತಿ ಅಧ್ಯಕ್ಷರಾದ ಪ್ರೊ. ರವೀಂದ್ರ ಕುಮಾರ್ ಬಿ. ಉಪಸ್ಥಿತರಿದ್ದರು.
(Visited 1 times, 1 visits today)