ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಹೆಲನ್ ಕೆಲರ್ ಶಾಲೆಯಲ್ಲಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಹಾಗೂ ಅವರ ತಾಯಂದಿರೊAದಿಗೆ ಸಂವಾದ ನಡೆಸಿದರು.
ನಗರದ ಜಯನಗರ ಪೂರ್ವ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ನಡೆಯುತ್ತಿರುವ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳು ಮತ್ತು ತಾಯಂದಿರ ತರಬೇತಿ ಕೇಂದ್ರಕ್ಕೆ ಅವರು ಬುಧವಾರ ಭೇಟಿ ನೀಡಿ ಕೇಂದ್ರದಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿರುವ ವಿಶೇಷ ತರಬೇತಿ ಕುರಿತು ಸಂವಾದ ನಡೆಸಿದರು.
ನಂತರ ಮಾತನಾಡಿದ ಅವರು, ಕೇಂದ್ರದ ತರಬೇತಿಯನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶ್ರವಣ ಹಾಗೂ ವಾಕ್ ದೋಷವಿರುವ ಮಕ್ಕಳು ಹಾಗೂ ಅವರ ತಾಯಂದಿರು ಪಡೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ತರಬೇತಿ ಕೇಂದ್ರದ ಮುಖ್ಯಸ್ಥೆ ಗಾಯಿತ್ರಿ ರವೀಶ್ ಅವರಿಗೆ ಸಲಹೆ ನೀಡಿದರು.
ಜಿಲ್ಲಾಡಳಿತದಿಂದ ವಿಶೇಷ ಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಕ್ಕಳು ಹಾಗೂ ಅವರ ತಾಯಂದಿರಿಗಾಗಿ ಮುಂದಿನ ವಾರ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಬೇಕೆಂದು ಸ್ಥಳದಲ್ಲಿದ್ದ ವಿಕಲಚೇತನ ಕಲ್ಯಾಣಾಧಿಕಾರಿ ಚಿದಾನಂದ ಮೂರ್ತಿ ಅವರಿಗೆ ಸೂಚನೆ ನೀಡಿದರು.
ಹೆಲನ್ ಕೆಲರ್ ಶಾಲೆಯ ಮುಖ್ಯಸ್ಥೆ ಗಾಯಿತ್ರಿ ರವೀಶ್ ತರಬೇತಿ ಕೇಂದ್ರದ ಬಗ್ಗೆ ಮಾಹಿತಿ ನೀಡುತ್ತಾ, ಈ ತರಬೇತಿ ಕೇಂದ್ರದಲ್ಲಿ ವಾಕ್ ಶ್ರವಣದೋಷವುಳ್ಳ ೦-೪ ವರ್ಷದೊಳಗಿನ ೧೫ ಮಕ್ಕಳು ಹಾಗೂ ೫-೧೦ ವರ್ಷದೊಳಗಿನ ೧೨ ಮಕ್ಕಳು ಮತ್ತು ಅವರ ತಾಯಂದಿರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ೦-೪ ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಪ್ರತಿ ತಿಂಗಳು ೪,೦೦೦ ರೂ.ಗಳ ಗೌರವಧನ ನೀಡಲಾಗುತ್ತಿದೆ. ಈ ಗೌರವಧನವನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತಿದೆ. ೫-೧೦ ವರ್ಷದೊಳಗಿನ ಮಕ್ಕಳು ಮತ್ತು ಅವರ ತಾಯಂದಿರಿಗೆ ಹೆಲನ್ ಕೆಲರ್ ಇಂಟಿಗ್ರೇಟೆಡ್ ಎಜುಕೇಷನ್ ಸೊಸೈಟಿ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿಗೆ ಹಾಜರಾಗುವ ಮಕ್ಕಳು ಮತ್ತು ತಾಯಂದಿರಿಗೆ ನಗರದ ಬಸ್ ನಿಲ್ದಾಣದಿಂದ ತರಬೇತಿ ಕೇಂದ್ರಕ್ಕೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ತರಬೇತಿ ಮಧ್ಯಂತರದಲ್ಲಿ ಹಾಜರಾಗಲು ಸಾಧ್ಯವಾಗದ ಮಕ್ಕಳು ಮತ್ತು ತಾಯಂದಿರಿಗೆ ಆನ್ಲೈನ್ ಮೂಲಕ ವಾಕ್, ಸಂವಹನೆ ಮತ್ತು ಭಾಷಾ ತರಬೇತಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಸಾಮಾನ್ಯರಂತೆ ಕಂಡು ಬರುವುದರಿಂದ ದೋಷವನ್ನು ಬಹು ಬೇಗ ಪತ್ತೆ ಹಚ್ಚಲು ಪೋಷಕರಿಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಮಗು ಜನಿಸಿದ ೧ ವರ್ಷದೊಳಗಾಗಿ ವಾಕ್ ಮತ್ತು ಶ್ರವಣ ದೋಷವನ್ನು ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ನೀಡಿದಲ್ಲಿ ಸಾಮಾನ್ಯ ಮಕ್ಕಳಂತೆ ಅವರ ಭವಿಷ್ಯವನ್ನು ರೂಪಿಸಬಹುದು. ಇಲ್ಲದೇ ಹೋದರೆ ಜೀವನ ಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.
ತರಬೇತಿ ಕೇಂದ್ರದಲ್ಲಿ ೧೮ ವರ್ಷ ಮೇಲ್ಪಟ್ಟ ವಾಕ್ ಮತ್ತು ಶ್ರವಣದೋಷ, ಚಲನ-ವಲನ ತೊಂದರೆ, ಪಾರ್ಶ್ವ ದೃಷ್ಟಿ ದೋಷ, ಸೌಮ್ಯ ರೀತಿ ಮಾನಸಿಕ ಅಸ್ವಸ್ಥರಿಗೆ ಚೆಶೈರ್ ಡಿಸೇಬಲಿಟಿ ಟ್ರಸ್ಟ್ ವತಿಯಿಂದ ೧ ತಿಂಗಳ ಕಂಪ್ಯೂಟರ್, ಸಾಫ್ಟ್ ಸ್ಕಿಲ್, ಇಂಗ್ಲೀಷ್ ಭಾಷಾ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುವುದು. ಅಲ್ಲದೆ ವಿಶೇಷ ಚೇತನ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ಸೇರಿದಂತೆ ವಿವಿಧ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದ ನಂತರ ೬ ತಿಂಗಳವರೆಗೆ ಅವರ ಅನುಸರಣೆ ಮಾಡಲಾಗುವುದು ಎಂದು ತಿಳಿಸಿದರು.
ವಿಕಲಚೇತನ ಕಲ್ಯಾಣಾಧಿಕಾರಿ ಚಿದಾನಂದ ಮೂರ್ತಿ ಮಾತನಾಡಿ, ವಿಕಲಚೇತನರಿಗಾಗಿ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಮಾಹಿತಿ, ದೂರು, ಸಲಹೆ-ಸೂಚನೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: ೦೮೧೬-೨೦೦೫೦೫೩/ ೨೨೭೦೦೨೯ನ್ನು ಸಂಪರ್ಕಿಸಬೇಕೆAದು ತಿಳಿಸಿದರು.
(Visited 1 times, 1 visits today)