ತುಮಕೂರು: ಸಿದ್ಧಗಂಗಾ ಚಾರಣ ತಂಡ ತನ್ನ ಐದನೇ ವಾರ್ಷಿಕೋತ್ಸವವನ್ನು ಹಾಗೂ ವಿಶ್ವ ಪರಿಸರ ದಿನವನ್ನು ತುಮಕೂರಿನ ಕನ್ನಡ ಭವನದಲ್ಲಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಆಚರಿಸಲಾಯಿತು.
ಈ ವಿಶೇಷ ಸಂದರ್ಭದಲ್ಲಿ ವನ್ಯಜೀವಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸಿದ್ಧ ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಸಂಜಯ್ ಗುಬ್ಬಿ ರವರು ಹುಲಿ ಮತ್ತು ಚಿರತೆಗಳಂತಹ ಮಾಂಸಾಹಾರಿ ಪ್ರಾಣಿಗಳ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ ವನ್ಯಜೀವಿ ಸಂರಕ್ಷಣೆಯ ಕುರಿತು ಉಪನ್ಯಾಸವನ್ನು ನೀಡಿದರು ಮತ್ತು ಹಿರಿಯ ಸಂಶೋಧನಾ ಸಹಾಯಕ ಅಭಿಷೇಕ್ ಭಾರದ್ವಾಜ್ ರವರು ಕಪ್ಪೆ ಮತ್ತು ಹಾವುಗಳ ರಕ್ಷಣೆ ಹಾಗೂ ವಿಶೇಷತೆಗಳ ಕುರಿತು ಉಪನ್ಯಾಸವನ್ನ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದಂತಹ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿಗಳು ಕಾರ್ಯಕ್ರಮವನ್ನುದ್ದೇಶಿಸಿ ಹಾಗೂ ಸದಸ್ಯರುಗಳ ಸಾಧನೆಯನ್ನು ಪ್ರಶಂಶಿಸಿ ಆಶೀರ್ವಚನ ನೀಡಿದರು.
ಹಿಮಾಲಯದ ಚಾರಣವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಸಿದ್ಧಗಂಗಾ ಚಾರಣ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು. ಇದರೊಂದಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜಿಸಲಾಗಿತ್ತು, ಈ ತಂಡವು ಪ್ರತಿವರ್ಷವೂ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸುವುದು ಶ್ಲಾಘನೀಯವಾಗಿದೆ.
೨೦೨೧ರಲ್ಲಿ ರಾಮದೇವರಬೆಟ್ಟದ ತಪ್ಪಲಲ್ಲಿ ಸಸಿಗಳನ್ನು ನೆಟ್ಟು ಜವಾಬ್ದಾರಿಯಿಂದ ಪೋಷಿಸಿ ಬೆಳೆಸಲಾಯಿತು. ೨೦೨೨ರಲ್ಲಿ ದೇವರಾಯನದುರ್ಗದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಆಂದೋಲನ ಕೈಗೊಂಡು ಸುಮಾರು ೩೦೦ ಕ್ಕು ಹೆಚ್ಚು ಸ್ವಯಂಸೇವೆಕರು ಭಾಗವಹಿಸಿ ಅರಿವು ಮೂಡಿಸಿದರು. ೨೦೨೩ರಲ್ಲಿ ದೇವರಾಯನದುರ್ಗದ ಮೀಸಲು ಅರಣ್ಯ ಪ್ರದೇಶದಲ್ಲಿ ೮೦೦ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಇಂದಿಗೂ ಅವುಗಳ ಪೋಷಣೆ ಮತ್ತು ಬೇಸಿಗೆಯಲ್ಲಿ ನೀರುಣಿಸುವ ಕೆಲಸವನ್ನು ನಡೆಸಿಕೊಂಡು ಬರುತ್ತಿದ್ದಾರೆ.
೨೦೨೪ರಲ್ಲಿ ಸಿದ್ಧರಬೆಟ್ಟದಲ್ಲಿ ಹಾಗೂ ಎರಡನೇ ಬಾರಿಗೆ ದೇವರಾಯನದುರ್ಗದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಆಂದೋಲನವನ್ನು ೮೦೦ ಕ್ಕು ಹೆಚ್ಚು ಸ್ವಯಂಸೇವಕರೊAದಿಗೆ ನಡೆಸಿ ೧೦೦೦ ಕ್ಕು ಹೆಚ್ಚು ಚೀಲಗಳಲ್ಲಿ ಸಂಗ್ರಹಿಸಿ ಹಾಗೂ ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ತುಮಕೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು.
ಈ ಮೂಲಕ ಸಿದ್ಧಗಂಗಾ ಚಾರಣ ತಂಡವು ಪ್ರತಿವರ್ಷ ಪರಿಸರದ ಕಾಳಜಿಯೊಂದಿಗೆ ನವಚೈತನ್ಯದಿಂದ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾ, ನೆಟ್ಟ ಸಸಿಗಳನ್ನು ಬೆಳೆಸುವ ಮೂಲಕ ಸಮರ್ಥ ಸೇವೆಯನ್ನು ನೀಡುತ್ತಿದೆ. ಈ ತಂಡದ ಸದಸ್ಯರುಗಳ ಭಾಗವಹಿಸುವಿಕೆ ಹಾಗೂ ಸೇವಾ ಮನೋಭಾವನೆ ಪ್ರಶಂಸನೀಯವಾಗಿದೆ.
ಈ ಸಂದರ್ಭದಲ್ಲಿ ಸಿದ್ಧಗಂಗಾ ಚಾರಣ ತಂಡ ಸದಸ್ಯರುಗಳು, ವಿದ್ಯಾರ್ಥಿಗಳು ಮತ್ತಿತರರು ಇದ್ದರು.
(Visited 1 times, 1 visits today)