ತುಮಕೂರು: ಒಬ್ಬ ವ್ಯಕ್ತಿಯ ದೃಷ್ಟಿಕೋನ, ಜೀವನದ ಬಗ್ಗೆ ಇರುವ ಆಳವಾದ ಅರಿವು, ಅನಿಸಿಕೆ, ಲೋಕದೃಷ್ಟಿ ಮುಂತಾದವುಗಳ ಮೊತ್ತ ಜೀವನದರ್ಶನವಾಗಿದೆ. ಜೀವ ಜಗತ್ತಿನಲ್ಲಿ ಮನುಷ್ಯನ ಪಾತ್ರ, ಸುಖ ದುಃಖಗಳ ಅರ್ಥ, ಬದುಕಿನಲ್ಲಿ ಅವುಗಳ ಪರಿಣಾಮ ಇಂತಹ ವಿಚಾರವನ್ನು ಸಾಹಿತ್ಯದಲ್ಲಿ ಹುಡುಕುವ ಪ್ರಕ್ರಿಯೆ ಉಂಟಾಗಿದೆ. ಸಾಹಿತ್ಯವು ಜೀವನದ ದೃಷ್ಟಿಕೋನದ ಜೊತೆ ಬದುಕಿನ ಪ್ರತಿಬಿಂಬದ0ತೆ ಕಾರ್ಯನಿರ್ವಹಿಸುತ್ತದೆ ಎಂದು ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರಾದ ಡಾ. ಎನ್. ಆರ್ ಲಲಿತಾಂಬ ಅಭಿಪ್ರಾಯ ಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ದಿ. ಗುಬ್ಬಿ ಬೊಮ್ಮಣ್ಣಯ್ಯ ಸ್ಮಾರಕ ಹಳಗನ್ನಡ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳಗನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ನೈತಿಕ ಮತ್ತು ನಾಗರಿಕ ಜೀವನ ದರ್ಶನ ತತ್ವಗಳು, ಯಾವುದು ಹಿತ ಯಾವುದು ಅಹಿತ ಎಂಬುದನ್ನು ಕಾಣಬಹುದು. ಮಾನವನು ವೈರಾಗ್ಯ, ಮೋಹ, ದ್ವೇಷವನ್ನು ತ್ಯಜಿಸಿ ಆತ್ಮಶುದ್ಧಿ, ತ್ಯಾಗ, ನೈತಿಕ ಮೌಲ್ಯಗಳನ್ನು ರೂಡಿ ಸಿಕೊಳ್ಳಬೇಕು ಎಂದರು.
ಆದಿಪುರಾಣ, ವಿಕ್ರಮಾರ್ಜುನ ವಿಜಯ, ಕವಿರಾಜಮಾರ್ಗ ಇಂತಹ ಮಹಾನ್ ಕಾವ್ಯಗ ಳಲ್ಲಿ ನ್ಯಾಯ, ಧರ್ಮ, ರಾಜಸೇವೆ, ತ್ಯಾಗ, ಬಲಿದಾನ, ಕರ್ತವ್ಯ ಪ್ರಜ್ಞೆ, ಮತ್ತು ಲೌಕಿಕ ವಿಚಾರಗಳನ್ನು ಕಾಣಬಹುದು. ಹಳಗನ್ನಡದ ಕವಿ ಆದಿನಾಥನ ಪ್ರಕಾರ ಭೋಗ ಎನ್ನುವುದು ಎಂದಿಗೂ ಶಾಶ್ವತವಲ್ಲ ಎಂದರು.
ಶಿಸ್ತಿನ ಮೌಲ್ಯವನ್ನು ಹಳಗನ್ನಡ ಸಾಹಿತ್ಯವು ಎತ್ತಿ ಹಿಡಿಯುತ್ತಿತ್ತು. ಲೋಭ ಮತ್ತು ಭಯ ಪಾಪವನ್ನು ಅಂಟಿಸಿಕೊ0ಡು ಬರುತ್ತವೆ. ಆ ದ್ದರಿಂದ ಸರಿಯಾದ ಮಾರ್ಗವನ್ನು ಇಂದಿನ ಯುವಜನತೆ ತುಳಿಯಬೇಕು. ಪಾಪದ ಲೇಪವಿ ಲ್ಲದ ಪಯಣ ನಮ್ಮದಾಗಬೇಕು ಎಂದರು.
ವಿದ್ವಾ0ಸ ಡಾ. ಎಸ್. ಪಿ. ಪದ್ಮಪ್ರಸಾದ್ ಮಾತನಾಡಿ, ಅನುಭವ ಮತ್ತು ತಾತ್ವಿಕತೆಗಳು ಮನುಷ್ಯನ ಜೀವನವನ್ನು ಪ್ರಭಾವಿಸುತ್ತವೆ. ಹಳಗನ್ನಡ ಸಾಹಿತ್ಯದಂತೆ ಹರಿಕಥೆ, ಗಮಕ, ಜಾನಪದ, ಪ್ರವಚನಕಾರರು ಜೀವನ ದರ್ಶನಕ್ಕೆ ಅನುಗುಣವಾಗಿ ತಮ್ಮ ವಿಚಾರಗಳನ್ನು ತಿಳಿಸು ತ್ತಿದ್ದರು. ಸಾಹಿತ್ಯದ ಕೃತಿಗಳು ಅವರ ಪಾತ್ರ ವಾತಾವರಣ ದರ್ಶನವನ್ನು ಕಟ್ಟುಕೊಡುತ್ತಿದ್ದವು ಎಂದರು.
ಹಳಗನ್ನಡದ ವಿಡಂಬನ ಕಾವ್ಯಗಳಲ್ಲಿ ನಯ ಸೇನ ಇನ್ನಿತರ ಕವಿಗಳು ಬದುಕಿನ ಲೌಕಿಕ ಜವಾಬ್ದಾರಿಗಳು, ಸಾಮಾಜಿಕ ವಿಚಾರಗಳನ್ನು ಚಿತ್ರಿಸಿದ್ದಾರೆ. ಜೀವನವು ಒಂದು ತಪಸ್ಸಿನಂತೆ, ಸತತ ಪ್ರಯತ್ನದಿಂದ ಪರಮೋಚ್ಛ ಸ್ಥಾನವನ್ನು ಪಡೆಯಲು ಸಾಧ್ಯ ಎಂಬ ಚಿಂತನೆಯನ್ನು ವಿಸ್ತರಿಸಿದ್ದಾರೆ ಎಂದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಸಾಹಿತ್ಯದ ಮನೋಧರ್ಮವೇ ಎಲ್ಲ ವನ್ನು ಬೆಸೆಯುವುದು. ಸಾಹಿತ್ಯವು ತಾತ್ವಿಕ ಚೌಕಟ್ಟನ್ನು ನೀಡುತ್ತದೆ. ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಸಾಹಿತ್ಯವು ಪರಿಹಾರ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗುಬ್ಬಿ ಬೊಮ್ಮಣ್ಣಯ್ಯ ಸ್ಮಾರಕದತ್ತಿ ನಿಧಿ ಸಂಸ್ಥಾಪಕರಾದ ಜೆ.ಬಿ. ಶ್ರೇಯಾಂಸ ಕುಮಾರ್ ಉಪಸ್ಥಿತರಿದ್ದರು.