ತುಮಕೂರು: ಮಾದಕ ವ್ಯಸನಗಳಿಗೆ ಬಲಿಯಾಗಿ ಬದುಕು ಕಳೆದುಕೊಳ್ಳುತ್ತಿರುವ ಯುವ ಜನಾಂಗದಲ್ಲಿ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಸಮಾಜ ಹಾಗೂ ಸರ್ಕಾರ ಕಾಳಜಿ ವಹಿಸಬೇಕು. ಮಾದಕ ಪದಾರ್ಥಗಳ ಸೇವನೆಯಿಂದ ಯುವಕರು ಮುಕ್ತರಾಗಬೇಕು ಎಂದು ಕ್ಯಾತ್ಸಂದ್ರದಲ್ಲಿ ಯುವಕರು ಹಾಗೂ ಫುಟ್ಬಾಲ್ಆಟಗಾರರು ಭಾನುವಾರ ಜಾಗೃತಿ ಜಾಥಾ ನಡೆಸಿದರು.
ಕ್ಯಾತ್ಸಂದ್ರ ಪೊಲೀಸರ ಮಾರ್ಗದರ್ಶನದಲ್ಲಿ ಯುವಕರು ಡ್ರಗ್ಸ್ ವಿರುದ್ಧ ಅರಿವು ಮೂಡಿಸುವ ಭಿತ್ತಿ ಫಲಕಗಳನ್ನು ಪ್ರದರ್ಶಿಸುತ್ತಾ, ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡಿಗೆ ನಡೆದರು.
ಯುವ ಮುಖಂಡ ಪವನ್ ಮೂರ್ತಿ ಮಾತನಾಡಿ, ಈ ಮೊದಲು ಕ್ಯಾತ್ಸಂದ್ರ ಫುತ್ ಬಾಲ್ಗೆ ಪ್ರಸಿದ್ಧಿಯಾಗಿತ್ತು. ಆಗಿನ ಯುವಕರು ಫುಟ್ಬಾಲ್ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡು ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರು. ಈಗ ಅಂತಹ ವಾತಾವರಣ ಕಾಣುತ್ತಿಲ್ಲ. ಯುವಕರು ಮೊಬೈಲ್, ಮಾದಕ ವ್ಯಸನಗಳಿಗೆ ಆಕರ್ಷಿತರಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು, ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸಿದರೆ ಆವರು ಮಾದಕ ವ್ಯಸನಗಳಂತಹ ದುಶ್ಚಟಗಳಿಂದ ದೂರ ಉಳಿಯಲು ಸಾಧ್ಯವಾಗುತ್ತದೆ.ಈ ಬಗ್ಗೆ ಪೋಷಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂದು ಮನವಿ ಮಾಡಿದರು.
ದಿನೇ ದಿನೆ ಎಲ್ಲೆಡೆ ಯುವ ಜನಾಂಗ ಮಾದಕ ಪದಾರ್ಥಗಳ ಸೇವನೆಯ ಚಟಕ್ಕೆ ಅಂಟಿ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಬೆಳೆಯಲು ಬಿಟ್ಟರೆ ಮನುಕುಲವೇ ನಿರ್ನಾಮವಾಗುವ ಅಪಾಯವಿದೆ. ಯುವಜನಾಂಗವನ್ನು ಉಳಿಸಲು ಪೋಷಕರು, ಸರ್ಕಾರ ಹಾಗೂ ಸಮಾಜ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳು ಮಾದಕ ಚಟಗಳಿಗೆ ಆಕರ್ಷಿತರಾಗದಂತೆ ನೋಡಿಕೊಳ್ಳಬೇಕು. ಮಕ್ಕಳಲ್ಲಿ ಕ್ರೀಡೆ ಮತ್ತಿತರ ಚಟುವಟಿಕೆಯಲ್ಲಿ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.
ಮುಖಂಡ ನೂರುಲ್ಲಾ ಮಾತನಾಡಿ, ದುಶ್ಚಟಗಳ ಬಗ್ಗೆ ಯುವಕರು ಸ್ವಯಂಎಚ್ಚರಿಕೆ ವಹಿಸಬೇಕು. ಒಮ್ಮೆ ಆ ಚಟಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟ. ತಾವೂ ಹಾಗೂ ತಮ್ಮ ಸ್ನೇಹಿತರು ಮಾದಕ ವ್ಯನಿಗಳಾಗದಂತೆ ತಡೆದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು. ಮಾದಕ ಪದಾರ್ಥಗಳ ಬಳಕೆ, ಮಾರಾಟ ಕಂಡು ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತಂದು ತಡೆಯ ಬೇಕು ಎಂದು ಹೇಳಿದರು.
ಮುಖಂಡ ರರವೀಶ್ ಮಾತನಾಡಿ, ಬದುಕು ಹಾಳು ಮಾಡುವ, ಸಮಾಜಕ್ಕೆ, ಆರೋಗ್ಯಕ್ಕೆ ಕಂಟಕವಾಗಿರುವ ಡ್ರಗ್ಸ್ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಯುವ ಜನಾಂಗ ವ್ಯವಸನ ಮುಕ್ತರಾಗಿ ಆರೋಗ್ಯವಂತರಾಗಿ ಬಾಳಲು ಪೋಷಕರೂ ಸಹಕರಿಸಬೇಕು. ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಸರ್ಕಾರ ಹೆಚ್ಚು ಪ್ರೋತ್ಸಾಹ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಖು ಎಂದು ತಿಳಿಸಿದರು.