ದೆಹಲಿ: 

      ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.

      ದೆಹಲಿ ಸಚಿವಾಲಯದ ಬಳಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮಧ್ಯಾಹ್ನದ ಭೋಜನಕ್ಕೆಂದು ತಮ್ಮ ಕಚೇರಿಯಿಂದ ನಿರ್ಗಮಿಸಿದ ಕೇಜ್ರಿವಾಲ್​ ಮೇಲೆ ದೆಹಲಿಯ ನಾರಾಯಣ ಎಂಬಲ್ಲಿನ ಸರಿಸುಮಾರು 40 ವರ್ಷ ವಯಸ್ಸಿನ ಅನಿಲ್​ ಕುಮಾರ್​ ಶರ್ಮಾ ಎಂಬಾತ ದಾಳಿ ನಡೆಸಿದ್ದಾನೆ. ಆತನನ್ನು ಐಪಿ ಎಸ್ಟೇಟ್​ ಪೊಲೀಸರು ಬಂಧಿಸಿದ್ದಾರೆ.

       ಅನಿಲ್ ಕುಮಾರ್​​ ಶರ್ಮಾ ಸಿಗರೇಟ್​ ಪ್ಯಾಕೆಟ್​ನಲ್ಲಿ ಖಾರದ ಪುಡಿಯನ್ನು ತುಂಬಿಕೊಂಡು ತಂದಿದ್ದ. ಪತ್ರವೊಂದನ್ನು ನೀಡಲು ಕಾದು ಕುಳಿತಿದ್ದ. ಕೇಜ್ರಿವಾಲ್​ ಅವರು ಕಚೇರಿಯಿಂದ ಬರುತ್ತಲೇ ಅವರ ಕಾಲಿಗೆರಗಿದ ಅನಿಲ್​ನನ್ನು ಕೇಜ್ರಿವಾಲ್​ ಬಗ್ಗಿ ಮೇಲೆತ್ತಲು ಪ್ರಯತ್ನಿಸಿದರು. ಆಗ ಅನಿಲ್​ ಕೇಜ್ರಿವಾಲ್​ ಮೇಲೆ ಖಾರದ ಪುಡಿ ಎರಚಿದ್ದಾನೆ. ಆದರೆ, ಕೇಜ್ರಿವಾಲ್​ ಕಣ್ಣಿಗೆ ಖಾರದ ಪುಡಿ ಬಿದ್ದಿಲ್ಲ. ಕಣ್ಣಿಗೆ ಕನ್ನಡಕ ಹಾಕಿದ್ದರಿಂದ ಅವರು ಪಾರಾಗಿದ್ದಾರೆ. ಆದರೆ, ತಮ್ಮ ಕಣ್ಣನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಕನ್ನಡಕ ನೆಲದ ಮೇಲೆ ಬಿದ್ದು ಒಡೆದಿದೆ. ಅನಿಲ್​ನ ಈ ಕೃತ್ಯದ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

(Visited 23 times, 1 visits today)