ಮಧುಗಿರಿ :

      ಗಂಡನಿಂದ ಹೆಂಡತಿಗೆ ದಾನಪತ್ರ ನೊಂದಣಿ ಮಾಡಿಸುವ ಸಲುವಾಗಿ 5 ಸಾವಿರ ರೂಗಳ ಲಂಚ ಸ್ವೀಕರಿಸುತ್ತಿದ್ದ ಸಬ್ ರಿಜಿಸ್ಟ್ರರ್ ವೈ.ಎನ್. ರಾಮಚಂದ್ರಯ್ಯ ಎಸಿಬಿ ಬಲೆಗೆ ಶುಕ್ರವಾರ ಸಿಕ್ಕಿ ಬಿದ್ದಿದ್ದಾರೆ.

      ಮಧುಗಿರಿ ತಾಲೂಕಿನ ಪುರವರ ಹೋಬಳಿ ಚಿಕ್ಕಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 21/10 ರ 2 ಎಕರೆ 14 ಗುಂಟೆ ಜಮೀನಿನ್ನು ತನ್ನ ಪತ್ನಿಯ ಹೆಸರಿಗೆ ದಾನಪತ್ರವನ್ನು ಮಾಡಿಸಲು ಮುದ್ದಯ್ಯನಪಾಳ್ಯದ ದೇವರಾಜು ಎಂಬುವವರು ನ. 20 ರಂದು ಸಬ್ ರಿಜಿಸ್ಟ್ರರ್ ರಿಂದ ಮಾಹಿತಿ ಪಡೆದಿದ್ದರು ಈ ವೇಳೆ ನಡೆದಿದ್ದ ಒಂದು ಎಕರೆಗೆ 5 ಸಾವಿರದಂತೆ ನಡೆದ ಲಂಚದ ಮಾತುಕತೆಯನ್ನು ವೀಡಿಯೋ ಚಿತ್ರಿಕರಣ ಮಾಡಿಕೊಂಡು ಎಸಿಬಿಗೆ ನೀಡಿದ್ದರು. ಅದರ ಆಧಾರದಂತೆ ನ.23 ರಂದು ಚಿಕ್ಕಹೊಸಹಳ್ಳಿ ಗ್ರಾಮದ ಸುರೇಂದ್ರರೆಡ್ಡಿ ಹಾಗೂ ಮುದ್ದಯ್ಯನಪಾಳ್ಯದ ನಾಗರಾಜು ರವರ ಸಹಕಾರದೊಂದಿಗೆ ದೇವರಾಜು ಎಸಿಬಿಯವರು ನೀಡಿದ್ದ 5 ಸಾವಿರ ಹಣವನ್ನು ಕಚೇರಿಯ ಗುಮಾಸ್ಥ ರಂಗನಾಥನಿಗೆ ನೀಡಿದ್ದಾರೆ. ನಂತರ ತುಮಕೂರು ಡಿವೈಎಸ್‍ಪಿ ಪಿ. ರಘುಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.

      ಇತ್ತೀಚೆಗೆ ಮಧುಗಿರಿ ತಾಲೂಕಿನಲ್ಲಿ ನಿರಂತರವಾಗಿ ಎಸಿಬಿ ದಾಳಿ ನಡೆಯುತ್ತಿದ್ದು, ಲಂಚಗುಳಿತನಕ್ಕೆ ಸಂಕೇತವಾಗಿದೆ. ಕಳೆದ 6 ತಿಂಗಳಿನಿಂದ ಕಂದಾಯ ಇಲಾಖೆ, ಪುರಸಭೆ, ಬೆಸ್ಕಾಂ ಮತ್ತು ಗ್ರಾ.ಪಂ ಕಚೇರಿಗಳ ಮೇಲೆ ದಾಳಿ ನಡೆದು ಪ್ರಕರಣಗಳು ದಾಖಲಾಗಿದ್ದು, ಇದನ್ನು ಜನತೆ ಮರೆಯುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ.

 

(Visited 19 times, 1 visits today)